ದಾವಣಗೆರೆಯ ಸಾಸ್ವೆಹಳ್ಳಿಯಲ್ಲಿ, ಆ್ಯಂಬುಲೆನ್ಸ್ ಚಾಲಕ ಸಕಾಲಕ್ಕೆ ಬಾರದ ಕಾರಣ ಅಸ್ವಸ್ಥ ವೃದ್ಧರೊಬ್ಬರು ಆಸ್ಪತ್ರೆ ಮುಂದೆಯೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಆ್ಯಂಬುಲೆನ್ಸ್ ಮೇಲೆ ಕಲ್ಲೆಸೆದು ಪ್ರತಿಭಟಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ದಾವಣಗೆರೆ (ಡಿ.24): ಆ್ಯಂಬುಲೆನ್ಸ್ ಚಾಲಕ ಸಮಯಕ್ಕೆ ಸರಿಯಾಗಿ ಬರದ ಕಾರಣ, ಅಸ್ವಸ್ಥಗೊಂಡಿದ್ದ ವೃದ್ಧರೊಬ್ಬರು ಆಸ್ಪತ್ರೆಯ ಮುಂದೆಯೇ ಸಾವನ್ನಪ್ಪಿದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು 108 ಆ್ಯಂಬುಲೆನ್ಸ್ ಮೇಲೆ ಕಲ್ಲೆಸೆದು ಆಕ್ರೋಶ ಹೊರಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಸಕಾಲಕ್ಕೆ ಬಾರದ ಆಂಬುಲೆನ್ಸ್:

ಮಲ್ಲಿಕಟ್ಟಿಯ ನಿವಾಸಿ ಸಯ್ಯದ್ ಅಮಿರ್‌ಜಾನ್‌ಸಾಬ್ ಮೃತಪಟ್ಟ ವೃದ್ಧ. ಅನಾರೋಗ್ಯದ ಹಿನ್ನೆಲೆಯಲ್ಲಿ ಇವರನ್ನು ಸಂಬಂಧಿಕರು ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ವೃದ್ಧನ ಸ್ಥಿತಿ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು (ರೆಫರ್ ಮಾಡಿದ್ದರು).

ಆಸ್ಪತ್ರೆ ನಿರ್ಲಕ್ಷ್ಯದ ಆರೋಪ:

ಸ್ಥಳದಲ್ಲಿದ್ದರೂ ಸಿಗದ ಸೇವೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರೇ 108 ಆ್ಯಂಬುಲೆನ್ಸ್ ನಿಂತಿತ್ತು. ಆದರೆ, ಸಕಾಲಕ್ಕೆ ಚಾಲಕ ಲಭ್ಯವಿರಲಿಲ್ಲ ಎನ್ನಲಾಗಿದೆ. ಚಾಲಕನಿಗಾಗಿ ಸಂಬಂಧಿಕರು ದೀರ್ಘಕಾಲ ಕಾಯುತ್ತಾ ನಿಂತಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ವಿಳಂಬವಾಗಿ ವೃದ್ಧ ಸಯ್ಯದ್ ಅಮಿರ್‌ಜಾನ್‌ಸಾಬ್ ಆಸ್ಪತ್ರೆಯ ಆವರಣದಲ್ಲೇ ಕೊನೆಯುಸಿರೆಳೆದರು.

ಉದ್ವಿಗ್ನ ಪರಿಸ್ಥಿತಿ:

ವೃದ್ಧನ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಕೋಪದ ಕೈಗೊಟ್ಟ ಸಂಬಂಧಿಕರು ಅಲ್ಲೇ ನಿಂತಿದ್ದ ಆ್ಯಂಬುಲೆನ್ಸ್ ಮೇಲೆ ಕಲ್ಲೆಸೆದು ಗಾಜು ಪುಡಿ ಮಾಡಿದ್ದಾರೆ. ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರ ಮಧ್ಯಪ್ರವೇಶ:

ಘಟನಾ ಸ್ಥಳಕ್ಕೆ ದೌಡಾಯಿಸಿದ ಹೊನ್ನಾಳಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಸದ್ಯ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ