ಬೆಂಗಳೂರಿನ ಎಲ್ಲ ಏರಿಯಾಗಳಲ್ಲಿ ಹೊರ ರಾಜ್ಯದ ಜನರು ಬಂದು ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೆಟ್ಟಿಗರೊಬ್ಬರು ಕೋರಮಂಗಲ ಎಂದರೆ ಮಿನಿ ಉತ್ತರ ಭಾರತ, ಎಲೆಕ್ಟ್ರಾನಿಕ್ ಸಿಟಿ ಹೊಸ ಆಂಧ್ರ, ಸರ್ಜಾಪುರ-ಬಿಹಾರ, ಟಿ.ಸಿ ಪಾಳ್ಯ-ಕೇರಳ, ಜಾಲಹಳ್ಳಿ -ಮಿನಿ ಬೆಂಗಾಲ್ ಎಂದಿದ್ದಾರೆ. ನಿಮ್ಮ ಏರಿಯಾ ಯಾವುದು?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ತನ್ನ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಕನ್ನಡಿಗರನ್ನು ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಪರಾಜಿತೆ (@amshilparaghu) ಎಂಬುವವರು ಮಾಡಿದ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ವೈರಲ್ ಟ್ವೀಟ್‌ನಲ್ಲಿ ಏನಿದೆ?

ಬೆಂಗಳೂರಿನ ವಿವಿಧ ಬಡಾವಣೆಗಳನ್ನು ಭಾರತದ ವಿವಿಧ ರಾಜ್ಯಗಳಿಗೆ ಹೋಲಿಸಿರುವ ಅವರು, 'ಕೋರಮಂಗಲ ಎಂದರೆ ಮಿನಿ ಉತ್ತರ ಭಾರತ, ಎಲೆಕ್ಟ್ರಾನಿಕ್ ಸಿಟಿ ಹೊಸ ಆಂಧ್ರಪ್ರದೇಶ, ಸರ್ಜಾಪುರ ಎಂದರೆ ಬಿಹಾರ, ಟಿ.ಸಿ ಪಾಳ್ಯ ಕೇರಳವಾದರೆ, ಜಾಲಹಳ್ಳಿ ಮಿನಿ ಬೆಂಗಾಲ್, ಮತ್ತು ದಕ್ಷಿಣ ಬೆಂಗಳೂರು ತಮಿಳುನಾಡು ಆಗಿದೆ' ಎಂದು ಪೋಸ್ಟ್ ಮಾಡಿದ್ದಾರೆ. ಇದು ಕೇವಲ ಒಂದು ಹಾಸ್ಯದ ಪೋಸ್ಟ್ ಆಗಿ ಉಳಿಯದೆ, ನಗರದ ಜನಸಂಖ್ಯಾ ಸ್ವರೂಪ ಬದಲಾಗುತ್ತಿರುವ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಈ ಪೋಸ್ಟ್ ಕೆಳಗೆ ಕನ್ನಡಿಗರು ಮತ್ತು ಹೊರರಾಜ್ಯದವರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು 'ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆಯೇ?' ಎಂದು ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು 'ಬೆಂಗಳೂರಿನ ಅಸಲಿ ಸೊಗಡು ಇಂದಿಗೂ ಬಸವನಗುಡಿ, ಜಯನಗರ, ಮಲ್ಲೇಶ್ವರಂ ಮತ್ತು ವಿಜಯನಗರದಂತಹ ಹಳೆಯ ಬಡಾವಣೆಗಳಲ್ಲಿ ಜೀವಂತವಾಗಿದೆ' ಎಂದು ನೆನಪಿಸಿದ್ದಾರೆ.

ಒಬ್ಬ ಬಳಕೆದಾರರು ಮಾರತಹಳ್ಳಿಯನ್ನು 'ಮಿನಿ ಹೈದರಾಬಾದ್' ಎಂದು ಕರೆದರೆ, ಮತ್ತೊಬ್ಬರು 'ಮೆಜೆಸ್ಟಿಕ್ ಮಾತ್ರ ಈಗ ನಮ್ಮದಾಗಿ ಉಳಿದಿದೆ' ಎಂದು ವ್ಯಂಗ್ಯವಾಡಿದ್ದಾರೆ. ಇದು ನಗರದ ಸಾಂಸ್ಕೃತಿಕ ಬದಲಾವಣೆಯ ತೀವ್ರತೆಯನ್ನು ತೋರಿಸುತ್ತದೆ ಎಂದು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.

Scroll to load tweet…

ಭಾಷಾ ಅಸ್ಮಿತೆಯ ಪ್ರಶ್ನೆ:

ಈ ಚರ್ಚೆಯ ನಡುವೆ ಭಾಷೆಯ ವಿಚಾರವೂ ಮುನ್ನೆಲೆಗೆ ಬಂದಿದೆ. ಚೆನ್ನೈನ ಉದಾಹರಣೆ ನೀಡಿದ ಒಬ್ಬ ನೆಟ್ಟಿಗರು, 'ಚೆನ್ನೈನಲ್ಲಿ ಹೊರರಾಜ್ಯದ ಭದ್ರತಾ ಸಿಬ್ಬಂದಿಯೂ ಒಂದು ವರ್ಷದೊಳಗೆ ತಮಿಳು ಮಾತನಾಡಲು ಕಲಿಯುತ್ತಾರೆ. ಏಕೆಂದರೆ ಅಲ್ಲಿನ ಸ್ಥಳೀಯರು ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡ ಮಾತನಾಡದ ಕಾರಣ ವಲಸಿಗರಿಗೆ ಕನ್ನಡ ಕಲಿಯುವ ಅವಶ್ಯಕತೆಯೇ ಬೀಳುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಮತ್ತು ಸಹಬಾಳ್ವೆ:

ಇನ್ನೊಂದು ವರ್ಗದ ಜನರು ಭಾರತದ ಸಂವಿಧಾನದ ಪ್ರಕಾರ ಯಾರೂ ಎಲ್ಲಿ ಬೇಕಾದರೂ ವಾಸಿಸಬಹುದು ಎಂಬ ಅಂಶವನ್ನು ನೆನಪಿಸಿದ್ದಾರೆ. 'ಕನ್ನಡಿಗರು ಕೂಡ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಇದು ಭಾರತದ ವೈವಿಧ್ಯತೆ' ಎಂಬ ವಾದವೂ ಕೇಳಿಬಂದಿದೆ. ಆದರೆ, ಈ ವೈವಿಧ್ಯತೆಯ ನಡುವೆ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂಬುದು ಪುಣೆಯಿಂದ ಬಂದಿರುವ ಒಬ್ಬ ವ್ಯಕ್ತಿಯ ಅಭಿಪ್ರಾಯವಾಗಿದೆ.

ಒಟ್ಟಾರೆಯಾಗಿ ಬೆಂಗಳೂರು ಇಂದು ಕೇವಲ ಒಂದು ನಗರವಲ್ಲ, ಅದೊಂದು ಆರ್ಥಿಕ ಶಕ್ತಿ ಕೇಂದ್ರ. ಆದರೆ ಈ ಬೆಳವಣಿಗೆಯ ನಡುವೆ ಕನ್ನಡದ ಮಣ್ಣಿನ ವಾಸನೆ ಮಾಸಬಾರದು. ನಗರ ಕಾಸ್ಮೋಪಾಲಿಟನ್ ಆಗಿರಲಿ, ಆದರೆ ಅದರ ಆತ್ಮ 'ಕನ್ನಡ'ವಾಗಿಯೇ ಇರಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಶಯ.