*  2 ದಿನದಲ್ಲಿ ರೈತರಿಗೆ ಬೆಳೆ ಹಾನಿ ಹೆಚ್ಚುವರಿ ಪರಿಹಾರ*  18.2 ಲಕ್ಷ ರೈತರಿಗಾಗಿ 1200 ಕೋಟಿ ರು. ಬಿಡುಗಡೆಗೆ ಸರ್ಕಾರ ಸಿದ್ಧತೆ*  ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಫೆ.08): ಬೆಳೆ ಹಾನಿಗೆ ರಾಜ್ಯ ಸರ್ಕಾರ(Government of Karnataka) ಘೋಷಿಸಿದ್ದ ಹೆಚ್ಚುವರಿ ಪರಿಹಾರ(Compensation) ಹಂಚಿಕೆಯು ಮುಂದಿನ 2-3 ದಿನದಲ್ಲಿ ಆರಂಭವಾಗಲಿದೆ. 18.2 ಲಕ್ಷ ಅರ್ಹ ರೈತರ(Farmers) ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ. ಇದಕ್ಕಾಗಿ 1200 ಕೋಟಿ ರುಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಲು ಮುಂದಾಗಿದೆ.

ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ(Raid) 14 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಪೈರು ಹಾನಿಯಾಗಿ 18.2 ಲಕ್ಷ ರೈತರು ಸಂಕಷ್ಟ ಅನುಭವಿಸಿದ್ದರು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯ ನಿಯಮಗಳಂತೆ ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್‌ಗೆ 6,800 ರು., ನೀರಾವರಿ ಜಮೀನಿಗೆ(Land) ಪ್ರತಿ ಹೆಕ್ಟೇರ್‌ಗೆ 13,500 ರು. ಮತ್ತು ಪ್ರತಿ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ 18 ಸಾವಿರ ರು. ಸೇರಿ ಒಟ್ಟಾರೆ 1252 ಕೋಟಿ ರು. ಪರಿಹಾರ ಪಾವತಿಸಲಾಗಿತ್ತು.

Crop Loss Compensation: 2.6 ಲಕ್ಷ ಬೆಳೆ ಹಾನಿ ಪರಿಹಾರ ಅರ್ಜಿ ತಿರಸ್ಕೃತ: ರೈತರ ಪರದಾಟ

ಬೆಳೆ ಹಾನಿಗೆ(Crop Loss) ಎನ್‌ಡಿಆರ್‌ಎಫ್‌ನಡಿ ನೀಡುತ್ತಿರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ರಾಜ್ಯ ವಿಪತ್ತು ಪರಿಹಾರ ನಿಧಿ(SDRF)ಯಡಿ ಹೆಚ್ಚು ಪರಿಹಾರ ನೀಡಬೇಕು ಎಂಬ ಬೇಡಿಕೆ ರೈತರಿಂದ ವ್ಯಕ್ತವಾದಾಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರಾಜ್ಯ ಸರ್ಕಾರ, ಸಮ್ಮತಿ ವ್ಯಕ್ತಪಡಿಸಿತ್ತು. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ(Belagavi Assembly Session) ನಡೆಯುತ್ತಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಡಿ.21ರಂದು ಪರಿಹಾರ ಹೆಚ್ಚಳದ ಭರವಸೆ ನೀಡಿದ್ದರು.

ಯಾವ ಬೆಳೆಗೆ ಎಷ್ಟು ಪರಿಹಾರ?

ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್‌ಗೆ 6,800 ರುಪಾಯಿ ಪರಿಹಾರ ನಿಗದಿಯಾಗಿದ್ದು ಇದಕ್ಕೆ ರಾಜ್ಯ ಸರ್ಕಾರದಿಂದ 6,800 ರು. ಹೆಚ್ಚುವರಿ ಸೇರಿಸಿ ಒಟ್ಟು ಪ್ರತಿ ಹೆಕ್ಟೇರ್‌ಗೆ 13,600 ರು. ಪರಿಹಾರ ನೀಡಲಾಗುವುದು. ಅದೇ ರೀತಿ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ 13,500 ರು. ನೀಡುತ್ತಿದ್ದು ಇದಕ್ಕೆ ಹೆಚ್ಚುವರಿಯಾಗಿ 11,500 ರು. ಸೇರಿಸಿ 25 ಸಾವಿರ ರು. ನೀಡಲಾಗುವುದು. ಪ್ರತಿ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ನೀಡುತ್ತಿದ್ದ 18 ಸಾವಿರ ರು. ಪರಿಹಾರಕ್ಕೆ 10 ಸಾವಿರ ರು. ಸೇರಿಸಿ 28 ಸಾವಿರ ರು. ಪರಿಹಾರ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಅದರಂತೆ ಇದೀಗ 18.2 ಲಕ್ಷ ರೈತರಿಗೆ 1200 ಕೋಟಿ ರುಪಾಯಿಯನ್ನು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಮೂರು ದಿನದಲ್ಲಿ ಪಾವತಿಸಲಾಗುವುದು. ಈಗಾಗಲೇ ಅಂಕಿ- ಅಂಶಗಳು ಸಂಗ್ರಹವಾಗಿರುವುದರಿಂದ ಈ ಬಾರಿ ಏಕಕಾಲಕ್ಕೆ ಮೂರು ದಿನದಲ್ಲಿ ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ(Bank Accounts) ನೇರವಾಗಿ ಪರಿಹಾರ ತಲುಪಲಿದೆ.

Crop Loss Aid Hike 6800ರಿಂದ 11500 ರೂ ವರೆಗೂ ಏರಿಕೆ, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಿದ ಸಿಎಂ ಬೊಮ್ಮಾಯಿ!

ಬೆಳೆ ಹಾನಿಗೆ ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಪರಿಹಾರ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಹಾಗೂ ಮಾಹಿತಿ ಅಪ್‌ಲೋಡ್‌ ಆದ 48 ಗಂಟೆಗಳೊಳಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿಗಳು ಕಳೆದ ಬಾರಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಮಾಹಿತಿ ಅಪ್‌ಲೋಡ್‌ ಆದ ಎರಡ್ಮೂರು ದಿನದಲ್ಲೇ ಪರಿಹಾರ ವಿತರಣೆಯಾಗಿ ದಾಖಲೆ ನಿರ್ಮಾಣವಾಗಿತ್ತು.

ಪರಿಹಾರ ಬಿಡುಗಡೆ

ಬೆಳೆ ಹಾನಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಹೆಚ್ಚುವರಿ ಪರಿಹಾರಕ್ಕೆ 1200 ಕೋಟಿ ರು. ಬಿಡುಗಡೆಯಾಗಿದ್ದು ಎರಡ್ಮೂರು ದಿನದಲ್ಲಿ ನೇರವಾಗಿ ಏಕಕಾಲಕ್ಕೆ ಅರ್ಹ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು ಅಂತ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.