Crop Loss Aid Hike 6800ರಿಂದ 11500 ರೂ ವರೆಗೂ ಏರಿಕೆ, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಿದ ಸಿಎಂ ಬೊಮ್ಮಾಯಿ!
- ಬೆಳೆ ಹಾನಿ ಪರಿಹಾರ 6800ರಿಂದ 11500 ರು.ವರೆಗೂ ಏರಿಕೆ
- 14 ಲಕ್ಷ ರೈತರಿಗೆ ಲಾಭ, ಸರ್ಕಾರಕ್ಕೆ .1200 ಕೋಟಿ ಹೊರೆ
- ಎನ್ಡಿಆರ್ಎಫ್ ಪರಿಹಾರ ಜತೆ ರಾಜ್ಯದಿಂದ ಹೆಚ್ಚುವರಿ ನೆರವು
- ವಿಧಾನಸಭೆಯಲ್ಲಿ ಬೊಮ್ಮಾಯಿ ಘೋಷಣೆ
ಬೆಳಗಾವಿ(ಡಿ.22): ರಾಜ್ಯದಲ್ಲಿ ಇತ್ತೀಚೆಗೆ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (NDRF) ನಿಯಮಗಳ ಅಡಿ ನೀಡುವ ಪರಿಹಾರಕ್ಕೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ಗೆ 6800 ರು.ಗಳಿಂದ 11500 ರು.ವರೆಗೆ ಸೇರಿಸಿ ವಿವಿಧ ಬೆಳೆಗಳಿಗೆ ಪರಿಹಾರ(Crop loss Aid) ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ.
ಎಷ್ಟು ಹೆಚ್ಚಳ?
ಜಮೀನು ಮಾದರಿ ಮೊದಲು ಈಗ (ಪ್ರತಿ ಹೆಕ್ಟೇರ್ಗೆ)
ಒಣ ಬೇಸಾಯ ಭೂಮಿ .6800 .13600
ನೀರಾವರಿ ಜಮೀನು .13500 .25000
ತೋಟಗಾರಿಕೆ ಬೆಳೆ .18000 .28000
Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್ ಬೆಳೆ
ವಿಧಾನಸಭೆಯಲ್ಲಿ ನಡೆದ ನೆರೆ ಹಾನಿ ಕುರಿತ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಅವರು, ಹೆಚ್ಚುವರಿ ಪರಿಹಾರದಿಂದ 12.69 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿರುವ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 1200 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ ಎಂದರು. ಎನ್ಡಿಆರ್ಎಫ್ ನಿಯಮಗಳ ಪ್ರಕಾರ, ಬೆಳೆ ಹಾನಿಯಾಗಿರುವ ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್ಗೆ 6,800 ರು. ಪರಿಹಾರ ನಿಗದಿಯಾಗಿತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ 6,800 ರು. ಹೆಚ್ಚುವರಿ ಹಣ ಸೇರಿಸಲಾಗಿದೆ. ಇದೀಗ ಒಟ್ಟು ಪ್ರತಿ ಹೆಕ್ಟೇರ್ಗೆ 13,600 ರು. ಪರಿಹಾರ ಸಿಗಲಿದೆ.
ಅದೇ ರೀತಿ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್ಗೆ 13,500 ರು. ಪರಿಹಾರ ನೀಡಲಾಗುತ್ತಿತ್ತು. ಅದಕ್ಕೆ ಹೆಚ್ಚುವರಿಯಾಗಿ 11,500 ರು. ಸೇರಿಸುವ ಮೂಲಕ 25 ಸಾವಿರ ರು. ಪರಿಹಾರ ನೀಡಲಾಗುವುದು. ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆಗೆ ನೀಡುತ್ತಿದ್ದ 18 ಸಾವಿರ ರು. ಪರಿಹಾರಕ್ಕೆ 10 ಸಾವಿರ ರು. ಸೇರಿಸಿ 28 ಸಾವಿರ ರು. ಪರಿಹಾರ ಒದಗಿಸಲಾಗುವುದು ಎಂದು ಘೋಷಿಸಿದರು.
Crop Insurance Golmaal: ಬೆಳೆ ವಿಮೆ ಕಂತು ಕಟ್ಟಿದ ರೈತರಿಗಿಲ್ಲ ಪರಿಹಾರ..!
ನೆರೆ ಸಂತ್ರಸ್ತರಿಗೆ(flood victims) ಯಾವುದೇ ರೀತಿಯ ತೊಂದರೆ, ಕೊರತೆ ಆಗದ ರೀತಿ ಪ್ರವಾಹ ನಿರ್ವಹಣೆ ಮಾಡಿದ್ದೇವೆ. ಬೆಳೆ ಹಾನಿ ಪರಿಹಾರ ಇನ್ನಷ್ಟುಹೆಚ್ಚಾಗಬೇಕು ಎಂಬ ಚಿಂತನೆ ಇತ್ತು. ಆ ಕಾರಣಕ್ಕೆ ಕೊರೋನಾದಿಂದ ಉಂಟಾಗಿರುವ ಆರ್ಥಿಕ ಇತಿ ಮಿತಿಯೊಳಗೆ ಬೆಳೆ ನಷ್ಟಪರಿಹಾರ ಹೆಚ್ಚಳ ಮಾಡಿದ್ದೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 1,200 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಿದೆ. ಸಾರ್ವಜನಿಕರಿಗಾಗಿ ಸರ್ಕಾರ ಇದನ್ನು ನಿಭಾಯಿಸಲು ಸಿದ್ಧವಾಗಿದೆ ಎಂದರು.
48 ಗಂಟೆಗಳಲ್ಲಿ ಪರಿಹಾರ:
ಹಿಂದಿನ ವರ್ಷಗಳಲ್ಲಿ ನದಿ ತಟದಲ್ಲಿರುವ 10-15 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಬಾರಿ ಅತಿವೃಷ್ಟಿಯಿಂದ ರಾಜ್ಯಾದ್ಯಂತ ನಷ್ಟಉಂಟಾಗಿದೆ. ಚಿಕ್ಕಬಳ್ಳಾಪುರ, ಕೋಲಾರದಂತಹ ಬರ ಪೀಡಿತ ಜಿಲ್ಲೆಗಳಲ್ಲೂ ಕೆರೆ-ಕಟ್ಟೆಒಡೆದಿವೆ. ಬೆಳೆ ಹಾನಿಗೆ ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಪರಿಹಾರ ಆ್ಯಪ್ನಲ್ಲಿ ಅಪ್ಲೋಡ್ ಮಾಡುವಂತೆ ಹಾಗೂ ಮಾಹಿತಿ ಅಪ್ಲೋಡ್ ಆದ 48 ಗಂಟೆಗಳೊಳಗೆ ಪರಿಹಾರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ 48 ಗಂಟೆಯೊಳಗಾಗಿ 10 ಲಕ್ಷಕ್ಕೂ ಹೆಚ್ಚು ರೈತರಿಗೆ 969 ಕೋಟಿ ರು. ಪರಿಹಾರ ತಲುಪಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ 48 ಗಂಟೆಗಳಲ್ಲಿ ಪರಿಹಾರ ಒದಗಿಸಿರುವುದು ಇದೇ ಮೊದಲು ಎಂದು ಹೇಳಿದರು.
ರೈತ ವಿದ್ಯಾನಿಧಿ:
ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ವಿಳಂಬದ ಕುರಿತು ಉತ್ತರಿಸಿದ ಅವರು, ಪಿಯುಸಿಯ 2.4 ಲಕ್ಷ ವಿದ್ಯಾರ್ಥಿರ್ಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಪದವಿ ಶಿಕ್ಷಣಕ್ಕೆ ಈಗಷ್ಟೆಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅವರಿಗೂ ನೀಡಲಾಗುವುದು ಎಂದರು.
ಹಳೆ ಮನೆ ಹಾನಿಗೂ ಪರಿಹಾರ:
ಜೆಡಿಎಸ್ ಸದಸ್ಯ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಜೂನ್ನಿಂದ ಹಾನಿಯಾಗಿರುವ 54,716 ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಇದರ ಜತೆಗೆ ಬೆಳಗಾವಿಯಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ 7,600 ಮನೆಗಳಿಗೂ ಪರಿಹಾರ ನೀಡಲಾಗುವುದು. 2021-22ರಲ್ಲಿ 36,698 ಮನೆ ಪೂರ್ಣ ಹಾನಿಯಾಗಿದ್ದು ಈ ಪೈಕಿ 18,589 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 7 ಸಾವಿರ ಮನೆಗಳು ಬಹುತೇಕ ಪೂರ್ಣಗೊಂಡಿವೆ. ಕೆಲವು ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ 3,130 ಮನೆಗಳ ನಿರ್ಮಾಣ ಪ್ರಾರಂಭವಾಗಿಲ್ಲ ಎಂದು ವಿವರಣೆ ನೀಡಿದರು.
ಶೀಘ್ರ ಪರಿಹಾರ- ಅಶೋಕ್:
ಇದಕ್ಕೂ ಮೊದಲು ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಹಿಂದಿನ ಸರ್ಕಾರ ಪರಿಹಾರ ನೀಡಲು 10-12 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ನಾವು ಒಂದೇ ತಿಂಗಳಲ್ಲೇ ಪರಿಹಾರ ಒದಗಿಸುತ್ತಿದ್ದೇವೆ. ಜೂನ್ನಲ್ಲಿ ನೆರೆಯಿಂದಾಗಿ 62 ಜೀವ ಹಾನಿಯಾಗಿದ್ದು ಕೇಂದ್ರದ 1 ಲಕ್ಷ ರು.ಗೆ ರಾಜ್ಯದ 4 ಲಕ್ಷ ರು. ಪರಿಹಾರ ಸೇರಿ ಒಟ್ಟು 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಮನೆಗಳಿಗೂ ಎ ಯಿಂದ ಡಿ ವರೆಗೆ ವರ್ಗೀಕರಣ ಮಾಡಿ ಎನ್ಡಿಆರ್ಎಫ್ ಮಾರ್ಗಸೂಚಿಗಿಂತ ಹೆಚ್ಚು ಪರಿಹಾರ ನೀಡುತ್ತಿದ್ದೇವೆ. ನಿರಾಶ್ರಿತರಿಗೆ ಗಂಜಿ ಕೇಂದ್ರಗಳ ಬದಲಿಗೆ ಕಾಳಜಿ ಕೇಂದ್ರ ಮಾಡಿ ಉತ್ತಮ ಗುಣಮಟ್ಟದ ಆಹಾರ ನೀಡಿದ್ದೇವೆ. ಯುಪಿಎ ಅವಧಿಗಿಂತ ಈಗಿನ ಕೇಂದ್ರ ಸರ್ಕಾರ ಎರಡರಿಂದ ಮೂರು ಪಟ್ಟು ಹೆಚ್ಚು ಪರಿಹಾರವನ್ನು ರಾಜ್ಯಕ್ಕೆ ನೀಡಿದೆ ಎಂದು ಅಂಕಿ-ಅಂಶ ಸಹಿತ ವಿವರಿಸಿದರು.
ನಮ್ಮದು ರೈತ ಪರ ಸರ್ಕಾರ
ರಾಜ್ಯದಲ್ಲಿ 12.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಎನ್ಡಿಆರ್ಎಫ್ ನಿಯಮಕ್ಕಿಂತ ಹೆಚ್ಚು ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ರಾಜ್ಯದಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಇದನ್ನೇ ಅವರು ದೊಡ್ಡದು ಎಂದು ಹೇಳುತ್ತಾರೆ. ಇದೀಗ ನಾವು 12.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಗಿರುವ ಬೆಳೆ ಹಾನಿಗೆ ದುಪ್ಪಟ್ಟು ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ನಮ್ಮದು ರೈತ ಪರ ನಿಲುವಿನ ಸರ್ಕಾರ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ