ಕಲಾವಿದರನ್ನು ಸಮಾನವಾಗಿ ಕಾಣದ ‘ವ್ಯವಸ್ಥೆ’ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವಿಷಾದ ರವೀಂದ್ರ ಕಲಾಕ್ಷೇತ್ರದಲ್ಲಿ ನಟ ದಿ.ಲೋಹಿತಾಶ್ವ ಶ್ರದ್ಧಾಂಜಲಿ ಸಭೆ
ಬೆಂಗಳೂರು (ನ.14) : ಕಲಾವಿದರನ್ನು ‘ವ್ಯವಸ್ಥೆ’ ಸಮಾನವಾಗಿ ಕಾಣಬೇಕು. ಕೆಲವು ಕಲಾವಿದರು ನಿಧನರಾದಾಗ ಅತಿಯಾಗಿ ಬಿಂಬಿಸಲಾಗುತ್ತದೆ. ನಟ, ನಾಟಕಕಾರ ಡಿ.ಎಸ್.ಲೋಹಿತಾಶ್ವ ಅವರಂತಹ ಮಹಾನ್ ಚೇತನ ನಮ್ಮನ್ನಗಲಿದಾಗ ಸರಿಯಾಗಿ ವಿದಾಯ ಹೇಳಲಿಲ್ಲ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವಿಷಾದಿಸಿದರು.
ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ರಂಗಭೂಮಿ ಕ್ರಿಯಾ ಸಮಿತಿಯಿಂದ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಸಾಹಿತ್ಯದಿಂದ ಸಿನಿಮಾದೆಡೆಗೆ, ರಂಗಭೂಮಿಯಿಂದ ಬೆಳ್ಳಿತೆರೆಗೆ; ನಟ ಲೋಹಿತಾಶ್ವ ಸಿನಿ ಜರ್ನಿ
ನಟ, ನಾಟಕಕಾರ, ಚಿಂತಕರೂ ಆಗಿದ್ದ ಲೋಹಿತಾಶ್ವ ಅವರು ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿ ಜೀವ ತುಂಬುತ್ತಿದ್ದರು. ತುಮಕೂರು ಜಿಲ್ಲೆಯವರಾದ ಲೋಹಿತಾಶ್ವ ಅವರು ಮೊದಲು ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ ಅವರಲ್ಲಿದ್ದ ಕಲೆಯ ಸೆಳೆತದಿಂದಾಗಿ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡರು. ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದ ಅವರು, ಎದುರಿನವರು ಬೇಜಾರಾಗುತ್ತಾರೆ ಎಂದು ಅವರ ಮನಸ್ಸು ಸಂತೋಷಪಡಿಸಲು ಸುಳ್ಳು ಹೇಳುತ್ತಿರಲಿಲ್ಲ. ಇದರಿಂದಾಗಿಯೇ ಬಹಳಷ್ಟುಜನರು ಅವರನ್ನು ಇಷ್ಟಪಡುತ್ತಿದ್ದರು. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾಟಕಗಳತ್ತ ಮುಖ ಮಾಡಿದ ಅವರು ತಮ್ಮ ಪ್ರತಿಭೆಯಿಂದಲೇ ಚಲನಚಿತ್ರಗಳಲ್ಲಿ ಅವಕಾಶ ಪಡೆದರು ಎಂದು ಸ್ಮರಿಸಿದರು.
ಇಂತಹ ಹಿರಿಯ ಕಲಾವಿದ ನಿಧನರಾದಾಗ ‘ವ್ಯವಸ್ಥೆ’ಸರಿಯಾಗಿ ವಿದಾಯ ಹೇಳಲಿಲ್ಲ. ಅಭಿಮಾನಿಗಳಿಗೆ ಅಂತಿಮ ನಮನ ಸಲ್ಲಿಸಲು ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಬೇಕಿತ್ತು ಎಂದು ಹೇಳಿದರು.
ಗೃಹಭಂಗದ ಕಂಟಿ ಜೋಯಿಸ್ ಪಾತ್ರಕ್ಕೆ ಜೀವ ತುಂಬಿದ್ದ ಲೋಹಿತಾಶ್ವ..!
ಸ್ವಾಭಿಮಾನಿ ಬದುಕು:
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಲೋಹಿತಾಶ್ವ ಅವರು ಜೀವನದುದ್ದಕ್ಕೂ ಸ್ವಾಭಿಮಾನದಿಂದ ಬದುಕಿದವರು. ಇದರಿಂದಾಗಿಯೇ ಹಲವು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ತಾವು ಸ್ವಾಭಿಮಾನಿಯಾಗಿರುವ ಜೊತೆಗೆ ತಮ್ಮ ಜೊತೆ ಇರುವವರೂ ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಆಶಿಸುತ್ತಿದ್ದ ಮಹಾನ್ ನಟ ಎಂದು ಬಣ್ಣಿಸಿದರು.ಲೋಹಿತಾಶ್ವ ಅವರ ಪುತ್ರ ನಟ ಶರತ್ ಲೋಹಿತಾಶ್ವ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
