ಶಾಸಕರು ಐಪಿಎಲ್‌ ಉಚಿತ ವಿಐಪಿ ಟಿಕೆಟ್‌ಗಾಗಿ ಹಠ ಹಿಡಿದಿರುವುದನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಜನರ ಜೀವಕ್ಕಿಂತ ವೈಯಕ್ತಿಕ ಸೌಲಭ್ಯಗಳಿಗೆ ಆದ್ಯತೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು(ಮಾ.28): ಶಾಸಕರು ಮತ್ತು ಅವರ ಕುಟುಂಬದವರಿಗೆ ಐಪಿಎಲ್‌ ಉಚಿತ ವಿಐಪಿ ಟಿಕೆಟ್‌ ಕೊಡುವಂತೆ ಪಕ್ಷಭೇದ ಮರೆತು ಹಠ ಹಿಡಿದಿರುವುದು ದುರ್ದೈವ. ಜನರ ಜೀವ ಮುಖ್ಯವೋ ಅಥವಾ ವಿಐಪಿ ಟಿಕೆಟ್‌ ಮುಖ್ಯವೋ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. ರಾಜ್ಯದ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಚರ್ಚೆ ಬಗ್ಗೆ ಕೇಳಿ ಮನಸ್ಸಿಗೆ ಅತೀವ ನೋವು ಮತ್ತು ಆಕ್ರೋಶ ಉಂಟಾಗಿದೆ ಎಂದು ನಿಖಿಲ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಐಪಿ ಟಿಕೆಟ್‌ಗಾಗಿ ಶಾಸಕರ ಒತ್ತಾಯಕ್ಕೆ ಕಿಡಿ

ಮುಂಬರುವ ಐಪಿಎಲ್ ಪಂದ್ಯಗಳಿಗಾಗಿ ಶಾಸಕರು ಮತ್ತು ಅವರ ಕುಟುಂಬದವರಿಗೆ ಉಚಿತ ವಿಐಪಿ ಟಿಕೆಟ್‌ ಬೇಕು ಎಂದು ಪಕ್ಷಭೇದ ಮರೆತು ಹಠ ಹಿಡಿದಿರುವುದು ಎಂತಹ ದುರ್ದೈವ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರ ತೆರಿಗೆ ಹಣದಲ್ಲಿ ಸವಲತ್ತು ಪಡೆಯುವ, ಕೇವಲ ಮಾಸಿಕ 1,600 ರು. ಬಾಡಿಗೆಗೆ 16 ಎಕರೆ ಸರ್ಕಾರಿ ಭೂಮಿಯನ್ನು ಅನುಭವಿಸುತ್ತಿರುವ ಕೆಎಸ್‌ಸಿಎ ಸಂಸ್ಥೆ, ಸಾಮಾನ್ಯ ಜನರ ಸುರಕ್ಷತೆಯನ್ನು ಗಾಳಿಗೆ ತೂರಿ ಟಿಕೆಟ್ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇಂತಹ ಸಮಯದಲ್ಲಿ ಜನರ ಪರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ಕೇವಲ ತಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ಚರ್ಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ನಮ್ಮ ಯುವಕರ ಜೀವಕ್ಕಿಂತ ನಮಗೆ ಐಪಿಎಲ್ ಟಿಕೆಟ್‌ಗಳೇ ದೊಡ್ಡವಾದವೇ? ಸಾಮಾನ್ಯ ಜನರ ರಕ್ತ ಹರಿಸಿ ಕಟ್ಟುವ ಕ್ರೀಡಾಂಗಣದಲ್ಲಿ ಅವರಿಗೆ ಬೆಲೆ ಇಲ್ಲವೇ? ಉಚಿತ ಟಿಕೆಟ್‌ಗಳು ಬೇಡ, ಆ 11 ಯುವಕರ ಸಾವಿಗೆ ಕಾರಣರಾದವರ ಮೇಲೆ ತಕ್ಷಣ ಕಠಿಣ ಕಾನೂನು ಕ್ರಮವಾಗಲಿ. ಅಧಿಕಾರ ಇರುವುದು ಜನರ ಸೇವೆಗಾಗಿಯೇ ಹೊರತು, ಮೋಜು-ಮಸ್ತಿಗಾಗಿ ಅಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.