ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ 18,430.44 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ರಾಜ್ಯದ 11 ಜಿಲ್ಲೆಗಳಲ್ಲಿ ವಾಹನ, ಜವಳಿ, ಉಕ್ಕು, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ವಲಯಗಳಲ್ಲಿ 15 ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
ಬೆಂಗಳೂರು: ರಾಜ್ಯದಲ್ಲಿ 15 ಸಾವಿರ ಉದ್ಯೋಗ ಸೃಷ್ಟಿಸುವ 18430.44 ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 67ನೇ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
11 ಜಿಲ್ಲೆಗಳಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ
ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ, 11 ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹಾಗೂ 6 ಹೆಚ್ಚುವರಿ ಬಂಡವಾಳ/ವಿಸ್ತರಣಾ ಹೂಡಿಕೆ ಪ್ರಸ್ತಾವನೆಗಳು ಸೇರಿ 17 ಯೋಜನಾ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಯಿತು. ಬಾಗಲಕೋಟೆ, ಬೀದರ್, ಬೆಳಗಾವಿ, ಬೆಂಗಳೂರು ಸೇರಿ ಒಟ್ಟು 11 ಜಿಲ್ಲೆಗಳಲ್ಲಿ ಹೊಸದಾಗಿ ಬಂಡವಾಳ ಹೂಡಿಕೆಯಾಗಲಿವೆ.
ಹೊಸ ಮತ್ತು ವಿಸ್ತರಣೆಯ 11 ಯೋಜನೆಗಳಿಗೆ 14906.90 ಕೋಟಿ ರು. ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆಯ 6 ಯೋಜನೆಗಳಿಗೆ 3523.54 ಕೋಟಿ ರು. ಹೂಡಿಕೆ ಮಾಡಲಾಗುತ್ತದೆ. ವಾಹನ, ವೈಮಾಂತರಿಕ್ಷ, ಔಷಧಿ, ಜವಳಿ, ಉಕ್ಕು, ಸೆಮಿಕಂಡಕ್ಟರ್ ಮತ್ತು ಸಕ್ಕರೆ ತಯಾರಿಕೆ ವಲಯಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಬಿಜೆಪಿಯವರು ಎಂದು ಕೂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಎಲ್ಲೆಲ್ಲಿ ಎಷ್ಟು ಹೂಡಿಕೆ?
ಪ್ರಮುಖವಾಗಿ ಬಳ್ಳಾರಿಯಲ್ಲಿ ಜೆಎಸ್ಡಬ್ಲ್ಯು ವಿಜಯನಗರ ಮೆಟ್ಯಾಲಿಕ್ಸ್ ಲಿ. 4600 ಕೋಟಿ ರು, ದಕ್ಷಿಣ ಕನ್ನಡದಲ್ಲಿ ಎನರ್ಜಿ ಟ್ರಾನ್ಸಿಷನ್ 1600 ಕೋಟಿ ರು., ಬೆಂಗಳೂರು ಗ್ರಾಮಾಂತರದಲ್ಲಿ ವೋಲ್ವೋ ಗ್ರೂಪ್ ಇಂಡಿಯಾ 1500 ಕೋಟಿ ರು., ವಿಪ್ರೋ ಗ್ಲೋಬಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಮೆಟೀರಿಯಲ್ಸ್ 1397 ಕೋಟಿ ರು., ಎಂಎಸ್ಪಿಎಲ್ ಸಂಸ್ಥೆ 884.25 ಕೋಟಿ ರು. ಹೂಡಿಕೆ ಮಾಡುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಇತರರಿದ್ದರು.
ಇದನ್ನೂ ಓದಿ: ಸಿಎಂ ಅಂಕಣ | ಲೋಕಸಭಾ ಕ್ಷೇತ್ರ ಹೆಚ್ಚಳ ಉತ್ತರ ಭಾರತಕ್ಕಷ್ಟೇ ಲಾಭ: ಕೇಂದ್ರದ ತರಾತುರಿ ಹಿಂದೆ ರಾಜಕೀಯ: ಸಿಎಂ


