ಕೆಟ್ಟ ಮೇಲೆ ಬುದ್ದಿ ಬಂತು-ಅಭ್ಯಾಸ ಪಂದ್ಯಕ್ಕೆ ಶಾಸ್ತ್ರಿ ಮನವಿ!
ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಕುಂಟು ನೆಪ ಹೇಳಿ ಸರಣಿ ಸೋತು ಕೋಚ್ ರವಿ ಶಾಸ್ತ್ರಿ ಇದೀಗ ಎಚ್ಚೆತ್ತುಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭ್ಯಾಸ ಪಂದ್ಯ ಆಯೋಜನೆ ಕುರಿತು ಶಾಸ್ತ್ರಿ ವಿಶೇಷ ಮನವಿ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.
ದುಬೈ(ಸೆ.14): ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಸೋಲಿನ ಬಳಿಕ ಇದೀಗ ಏಷ್ಯಾಕಪ್ ಟೂರ್ನಿಗಾಗಿ ಟೀಂ ಇಂಡಿಯಾ ದುಬೈನಲ್ಲಿ ಬೀಡುಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಏಕೈಕ ಅಭ್ಯಾಸ ಪಂದ್ಯಕ್ಕೆ ಇಲ್ಲ ಸಲ್ಲದ ಕಾರಣ ನೀಡಿದ್ದ ಟೀಂ ಇಂಡಿಯಾ ಹಾಗೂ ಕೋಚ್ ರವಿ ಶಾಸ್ತ್ರಿ ಇದೀಗ ಎಚ್ಚೆತ್ತುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೂ ಮೊದಲು ಏಕೈಕ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಆದರೆ ಕ್ರೀಡಾಂಗಣ ಸರಿ ಇಲ್ಲ, ಮೈದಾನ ಸೂಕ್ತವಾಗಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ತಾಳಕ್ಕೆ ತಕ್ಕಂತೆ ಕುಣಿದಿದ್ದ ಕೋಚ್ ರವಿ ಶಾಸ್ತ್ರಿ ಇದೀಗ ಅಭ್ಯಾಸ ಪಂದ್ಯದ ಮಹತ್ವ ಅರಿತಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭ್ಯಾಸ ಪಂದ್ಯ ಆಯೋಜಿಸಬೇಕು ಎಂದು ಕೋಚ್ ರವಿ ಶಾಸ್ತ್ರಿ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ತಪ್ಪನ್ನ ತಿದ್ದಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿಗೆ ಭಾರತ ಸೂಕ್ತ ಅಭ್ಯಾಸದ ಕೊರತೆ ಎಂದು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇಷ್ಟೇ ಅಲ್ಲ ಟೀಂ ಇಂಡಿಯಾ 1-4 ಅಂತರದಲ್ಲಿ ಹೀನಾಯವಾಗಿ ಸರಣಿ ಸೋತಿತ್ತು. ಇದೀಗ ಆಸ್ಟ್ರೇಲಿಯಾ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿರುವ ಟೀಂ ಇಂಡಿಯಾ ಸರಣಿಗೂ ಮೊದಲು ಅಭ್ಯಾಸ ಪಂದ್ಯಕ್ಕಾಗಿ ಬೇಡಿಕೆ ಇಟ್ಟಿದೆ.