ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಅಂಬಾಟಿ ರಾಯುಡು ಟ್ವೀಟ್ ಮೂಲಕ ವಿಶ್ವದ ಗಮನಸೆಳೆದಿದ್ದರು. ಇದೇ ಟ್ವೀಟ್ ಟ್ರೋಲ್ ಆಗಿ ರಾಯುಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆಯ್ಕೆ ಸಮಿತಿಯಿಂದ ಕಡೆಗಣಿಸಲ್ಪಟ್ಟ ರಾಯುಡು ದಿಢೀರ್ ವಿದಾಯ ಹೇಳಿ ಶಾಕ್ ನೀಡಿದ್ದರು. ಇದೀಗ ರಾಯುಡು ಯು ಟರ್ನ್ ಹೊಡೆದಿದ್ದಾರೆ. 

ಹೈದರಾಬಾದ್(ಆ.30): ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ಬೇಸರಗೊಂಡು ಆತುರದಲ್ಲಿ ವಿದಾಯ ಪ್ರಕಟಿಸಿದ ಹೈದರಾಬಾದ್ ಕ್ರಿಕೆಟಿಗ ಅಂಬಾಟಿ ರಾಯುಡು ಇದೀಗ ಯು ಟರ್ನ್ ಹೊಡೆದಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್‌ಗೂ ಲಭ್ಯವಿದ್ದೇನೆ ಎಂದು ರಾಯುಡು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ವಿದಾಯದಿಂದ ಹೊರಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಟಿ ರಾಯುಡು ವಿದಾಯ..!

ಆತುರದಲ್ಲಿ ವಿದಾಯದ ನಿರ್ಧಾರ ಪ್ರಕಟಿಸಿದ್ದೇನೆ. ಇದೀಗ ವಿದಾಯ ನಿರ್ಧಾರವನ್ನು ಬದಲಿಸಿದ್ದೇನೆ. ನಾನು ಎಲ್ಲಾ ಮಾದರಿ ಕ್ರಿಕೆಟ್‌ಗೆ ಲಭ್ಯವಿದ್ದೇನೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನೊಯೆಲ್ ಡೇವಿಡ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಠಿಣ ಸಂದರ್ಭದಲ್ಲಿ ಇವರು ಕೈಹಿಡಿದು ಮುನ್ನಡೆಸಿದ್ದಾರೆ. ನನ್ನಲ್ಲಿನ್ನು ಕ್ರಿಕೆಟ್ ಬಾಕಿ ಇದೆ ಎಂದು ಅರ್ಥ ಮಾಡಿಸಿದ್ದಾರೆ. ನಾನು ಅತ್ಯುತ್ತಮ ಆವೃತ್ತಿಯನ್ನು ಎದುರುನೋಡುತ್ತಿದ್ದೇನೆ. ಪ್ರತಿಭಾವಂತ ಹೈದರಾಬಾದ್ ತಂಡ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಸೆಪ್ಟೆಂಬರ್ 10 ರಿಂದ ಆಯ್ಕೆಗೆ ಲಭ್ಯವಿದ್ದೇನೆ ಎಂದು ರಾಯುಡು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

ರಾಯುಡು ಇಮೇಲ್ ಬೆನ್ನಲ್ಲೇ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಪತ್ರ ಬರೆದಿದೆ. ರಾಯುಡು ವಿದಾಯ ನಿರ್ಧಾರವನ್ನು ಬದಲಿಸಿದ್ದಾರೆ. ಸದ್ಯ ನಿಗದಿತ ಓವರ್ ಕ್ರಿಕೆಟ್‌ ಆಯ್ಕೆಗೆ ರಾಯುಡು ಲಭ್ಯವಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಬಿಸಿಸಿಐಗೆ ಹೈದರಾಬಾದ್ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: 3ಡಿ ಗ್ಲಾಸ್ ಬದಿಗಿಟ್ಟು ಓದಿ- ಅಂಬಾಟಿಗೆ ಐಸ್‌ಲೆಂಡ್ ಕ್ರಿಕೆಟ್ ಮನವಿ !

2019ರ ವಿಶ್ವಕಪ್ ಟೂರ್ನಿ ವೇಳೆ ರಾಯುಡು ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ರಾಯುಡು ಬದಲು ವಿಜಯ್ ಶಂಕರ್‌ಗೆ ಸ್ಥಾನ ನೀಡಲಾಗಿತ್ತು. ಬಳಿಕ ಆಯ್ಕೆ ಸಮಿತಿ, 3 ಡೈಮೆನ್ಶನಲ್ ಪ್ಲೇಯರ್ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ರಾಯುಡು, ವಿಶ್ವಕಪ್ ಪಂದ್ಯ ವೀಕ್ಷಿಸಲು 3ಡಿ ಗ್ಲಾಸ್ ಖರೀದಿಸಿರುವುದಾಗಿ ಟ್ವೀಟ್ ಮಾಡಿದ್ದರು. ಇದು ಟ್ರೋಲ್ ಆಗಿತ್ತು.

ಇದನ್ನೂ ಓದಿ: ರಾಯುಡುಗೆ ಅನ್ಯಾಯ; ಬಿಸಿಸಿಐ ವಿರುದ್ಧ ಗುಡುಗಿದ ಯುವರಾಜ್!

ವಿಶ್ವಕಪ್ ಟೂರ್ನಿಯ ಮೀಸಲು ಆಟಗಾರನಾಗಿದ್ದ ರಾಯುಡು, ಶಿಖರ್ ಧವನ್, ವಿಜಯ್ ಶಂಕರ್ ಇಂಜುರಿಯಾದಾಗಲೂ ಅವಕಾಶ ನೀಡಲಿಲ್ಲ. ಇದರಿಂದ ರೋಸಿ ಹೋದ ರಾಯುಡು ದಿಢೀರ್ ವಿದಾಯ ಹೇಳಿದ್ದರು. ರಾಯುಡು ವಿದಾಯ ಬಿಸಿಸಿಐ ಆಡಳಿತ ಮಂಡಳಿವರೆಗೂ ತಲುಪಿತ್ತು. ಆಯ್ಕೆ ಸಮಿತಿ ಹಾಗೂ ಪದಾಧಿಕಾರಿಗಳನ್ನು ಆಡಳಿತ ಮಂಡಳಿ ವಿದಾಯದ ಕುರಿತು ಪ್ರಶ್ನಿಸಿತ್ತು. ಇದೀಗ 2 ತಿಂಗಳ ಬಳಿಕ ರಾಯುಡು ತಮ್ಮ ನಿರ್ಧಾರ ಬದಲಿಸಿದ್ದಾರೆ.