ಶ್ರೀರಾಮಚಂದ್ರ ಅಯೋಧ್ಯೆಗೆ ಪುನಃ ಮರಳಿದ ಸಂಭ್ರಮದ ಬೆನ್ನಲ್ಲೇ ನಟ ಯಶ್​ ಮತ್ತು ಸುದೀಪ್​ ವಿಶೇಷ ರೀತಿಯಲ್ಲಿ ಪೋಸ್ಟ್​ ಹಾಕಿದ್ದಾರೆ. ನಟರು ಏನಂದ್ರು?  

ಇಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಿತು. ಐದು ಶತಮಾನಗಳಿಂದ ಕಾದು ಕುಳಿತಿದ್ದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಇಂದು ಸಾಕ್ಷಿಯಾಯಿತು. ದೇಶ-ವಿದೇಶಗಳ ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಂಡರು. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಇದರ ನೇರ ಪ್ರಸಾರ ಆಯೋಜನೆ ಮಾಡಲಾಗಿತ್ತು. ನಾಲ್ಕು ಲಕ್ಷ ಜನರ ಬಲಿದಾನದ ಬಳಿಕ 550 ವರ್ಷಗಳ ನಂತರ ಇಂಥದ್ದೊಂದು ದಿನವನ್ನು ಸಂಭ್ರಮಿಸುವುದು ಎಂದರೆ ಅದು ಸುಲಭದ ಮಾತಲ್ಲ. ಅಯೋಧ್ಯೆ ಮಾತ್ರವಲ್ಲದೇ ಬಹುತೇಕ ನಗರಗಳು ಶ್ರೀರಾಮನ ಜಪದಲ್ಲಿಯೇ ಮಿಂದೆದ್ದವು. ಎಲ್ಲೆಲ್ಲೂ ದೀಪಾಲಂಕಾರಗಳನ್ನು ನೋಡಬಹುದಾಗಿತ್ತು.

550 ವರ್ಷಗಳಿಂದ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಾಗಿದೆ. ಅಯೋಧ್ಯೆಯ ತವರಿಗೆ ಶ್ರೀರಾಮ ಬಂದಾಗಿದೆ. ಐದು ವರ್ಷದ ಬಾಲಕನಾಗಿ ಅಯೋಧ್ಯೆಯ ದೇಗುಲದಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠೆ ನೆರವೇರಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ರಾಮನಾಮ ಜಪಿಸುತ್ತಲೇ ಈ ಒಂದು ಅಭೂತಪೂರ್ವ ಐತಿಹಾಸಿಕ ಭಾವುಕ ಕ್ಷಣಕ್ಕೆ ರಾಮಭಕ್ತರು ಸಾಕ್ಷಿಯಾಗಿದ್ದಾರೆ. ಅಯೋಧ್ಯೆಯಲ್ಲಿ ವಿಭಿನ್ನ ಕ್ಷೇತ್ರದ ಗಣ್ಯಾತಿಗಣ್ಯರು ಹಾಜರು ಇದ್ದರು. ಸಿನಿಮಾ ತಾರೆಯರ ದಂಡೇ ಅಯೋಧ್ಯೆಗೆ ಹರಿದು ಬಂದಿತ್ತು. ಇದರ ನಡುವೆಯೇ ಕೆಲವು ನಟ-ನಟಿಯರು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಶ್ರೀರಾಮನ ಜಪಿಸಿದ್ದಾರೆ. ಕೆಲವರು ನೃತ್ಯದ ಮೂಲಕ, ಇನ್ನು ಕೆಲವರು ಹಾಡಿನ ಮೂಲಕ, ಮತ್ತೆ ಕೆಲವರು ರಾಮನಾಮ ಜಪಿಸುತ್ತಲೇ ರಾಮಭಕ್ತಿಯನ್ನು ಮೆರೆದಿದ್ದಾರೆ. ಅಯೋಧ್ಯೆಯಲ್ಲಿರುವ ನಟ ರಿಷಬ್​ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಶೇರ್ ಮಾಡಿದ್ದಾರೆ. 

ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...

ಇದೀಗ ಯಶ್​ ಅವರು ಪ್ರಾಣ ಪ್ರತಿಷ್ಠೆಯ ಬಳಿಕ ಎಕ್ಸ್​ ಖಾತೆಯಲ್ಲಿ ಶ್ರೀರಾಮನ ಕುರಿತು ಭಾವುಕ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನಿಗೆ ನಮನ: ಧಾರ್ವಿುಕ ಜೀವನದ ದ್ಯೋತಕ, ಉದಾಹರಣೆಯ ಮೂಲಕ ಜೀವನವನ್ನು ಮುನ್ನಡೆಸುವಾತ, ಸಂಬಂಧಗಳಿಗೆ ಪೂಜ್ಯಭಾವನೆ ನೀಡುವಾತ, ಪ್ರತಿಕೂಲತೆಯಲ್ಲಿ ದೃಢತೆ ಮತ್ತು ಮಿತಿಯಿಲ್ಲದ ಸಹಾನುಭೂತಿಯ ಮಹಾಪುರುಷನಿಗೆ ನಮೋನಮಃ ಎನ್ನುವ ಟ್ವೀಟ್​ ಮಾಡಿದ್ದಾರೆ. 

Scroll to load tweet…

 ಅದೇ ರೀತಿ ಕಿಚ್ಚ ಸುದೀಪ್ ಕೂಡ ರಾಮ ಸ್ಮರಣೆ ಮಾಡಿದ್ದಾರೆ. ಬಾಲ ರಾಮನ ಮುಂದೆ ಹೂಗಳನ್ನ ಇಟ್ಟು ಪೂಜೆ ಸಲ್ಲಿಸಿದ್ದಾರೆ. ದೀಪ ಬೆಳಗಿಸಿ ತಮ್ಮ ರಾಮ ಭಕ್ತಿಯನ್ನ ಕಿಚ್ಚ ಸುದೀಪ್ ವ್ಯಕ್ತಪಡಿಸಿದ್ದಾರೆ. ರಾಮನ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಮತ್ತು ಹೇಗೆ ರಾಮ ನಮ್ಮಲ್ಲಿ ಉಳಿದು ಹೋಗಿದ್ದಾನೆ ಅನ್ನೋದನ್ನ ಸುದೀಪ್ ಬರೆದುಕೊಂಡಿದ್ದಾರೆ. ನಂತರ ಇನ್ನೊಂದು ವಿಡಿಯೋದಲ್ಲಿ ಅವರು ಇನ್ನಷ್ಟು ಮತ್ತಷ್ಟು ರಾಮ... ಎನ್ನುವ ಹಾಡನ್ನು ಶೇರ್​ ಮಾಡಿಕೊಂಡಿದ್ದಾರೆ. 


ಇದಾಗಲೇ ನಟಿ ರಾಧಿಕಾ ಕುಮಾರಸ್ವಾಮಿ ಅವರು, ವಿಶೇಷವಾಗಿ ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ. ರಾಮನಿಗೆ ದೀಪವನ್ನು ಬೆಳಗುವ ಮೂಲಕ ನೃತ್ಯ ಸಮರ್ಪಿಸಿದ್ದಾರೆ. ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ​ರಾಮನಾಮ ಪಠಿಸಿದ್ದಾರೆ. ಈ ಮೂಲಕ ಇನ್ನೂ ಇಬ್ಬರು ಸೆಲೆಬ್ರಿಟಿಗಳಿಗೂ ರಾಮನಾಮ ಪಠಿಸಲು ಆಹ್ವಾನ ನೀಡಿದ್ದಾರೆ. ಭಗವಾನ್ ಶ್ರೀರಾಮನ ನಾಮ ಪಠಿಸಿದ ವಿಡಿಯೋವೊಂದನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನು ನಟಿ ಅಮೂಲ್ಯ ಅವರು, ನನ್ನ ರಾಮ, ನಮ್ಮೆಲ್ಲರ ರಾಮ ಎನ್ನುತ್ತಾ ಶ್ರೀರಾಮನ ಶ್ಲೋಕ ಜಪಿಸಿದ್ದಾರೆ. ರಾಮ ಮಂದಿರ, ಇದು ರಾಷ್ಟ್ರ ಮಂದಿರ, ನಮ್ಮೆಲ್ಲರ ಆರಾಧ್ಯ ದೇವರಾದ ಶ್ರೀ ರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಆರಂಭಿಸಿರುವ #NannaRama ಅಭಿಯಾನದಲ್ಲಿ ನಾವೆಲ್ಲರೂ ತೊಡಗಿಕೊಳ್ಳೋಣ. ರಾಮ ಮಂತ್ರವ ಜಪಿಸೋಣ ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

View post on Instagram