Vijayalakshmi Darshan: ನಟ ದರ್ಶನ್‌ ಅವರೀಗ ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಕೇಸ್‌ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗಿದ್ದು, ಪತ್ನಿ ವಿಜಯಲಕ್ಷ್ಮೀ ಅವರು ಸಿನಿಮಾ ಕುರಿತಂತೆ ಸಂದರ್ಶನ ನೀಡಿದ್ದಾರೆ.

25 ವರ್ಷದಲ್ಲಿ ಮೊದಲ ಬಾರಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಕ್ಯಾಮರಾ ಮುಂದೆ ಬಂದು ದರ್ಶನ್‌ ಅವರ ಸಿನಿಮಾ ರಿಲೀಸ್‌ ಕಾರಣಕ್ಕೆ ಸಂದರ್ಶನವನ್ನು ನೀಡಿದ್ದಾರೆ. ‘ದಿ ಡೆವಿಲ್’‌ ಸಿನಿಮಾ ನಾಯಕಿ ರಚನಾ ರೈ ಅವರು ಸಂದರ್ಶನವನ್ನು ಮಾಡಿದ್ದಾರೆ.

ಮದುವೆಗೆ ಮೊದಲು ಕರಿಯ ಸಿನಿಮಾದ ಒಂದು ಶೋಗೆ ಹೋಗಿದ್ದೆ. ಹೆಣ್ಣು ಮಕ್ಕಳಿಗೋಸ್ಕರ ನಿರ್ಮಾಪಕರು ಒಂದು ಶೋ ಮಾಡಿದ್ದರು. ಅತ್ತೆ, ಅಮ್ಮ ಜೊತೆ ಹೋಗಿದ್ದೆ. ಅದಾದ ಬಳಿಕ ನಾನು ಫಸ್ಟ್‌ ಡೇ ಫಸ್ಟ್‌ ಶೋಗೆ ಹೋಗುವ ಧೈರ್ಯ ಮಾಡಿರಲಿಲ್ಲ. ಈ ಬಾರಿ ದರ್ಶನ್‌ ಇಲ್ಲ ಅಂದ್ರೂ ಕೂಡ ಅಭಿಮಾನಿಗಳು ನನ್ನನ್ನು ಮಾತನಾಡಿಸಿ, ಆ ನೋವನ್ನು ಮರೆಸಿದರು ಎಂದು ವಿಜಯಲಕ್ಷ್ಮೀ ದರ್ಶನ್‌ ಹೇಳಿದ್ದಾರೆ.

ಸಿನಿಮಾ ಸೆಲೆಬ್ರೇಶನ್‌ ಬಗ್ಗೆ ಗೊತ್ತಿದೆ

ಪೋಸ್ಟರ್‌ ಅಂಟಿಸೋದು, ಸೆಲೆಬ್ರೇಶನ್‌ ಮಾಡಿರೋದು, ಇವೆಂಟ್‌ ಮಾಡಿರೋದು, ಒಟ್ಟಾರೆಯಾಗಿ ಸಿನಿಮಾ ಪ್ರಚಾರ ಮಾಡಿರೋದು ಎಲ್ಲವೂ ದರ್ಶನ್‌ಗೆ ಗೊತ್ತಾಗಿದೆ. ಅದನ್ನೆಲ್ಲ ನಾನು ದರ್ಶನ್‌ ಅವರಿಗೆ ತೋರಿಸಿದ್ದೇನೆ, ಅವರಿಗೆ ಖುಷಿಯಾಗಿರುತ್ತದೆ ಎಂದು ವಿಜಯಲಕ್ಷ್ಮೀ ದರ್ಶನ್‌ ಹೇಳಿದ್ದಾರೆ.

ಪುಣ್ಯ ತೀರಿಸೋಕೆ ಹುಟ್ಟಿ ಬರಬೇಕು

ದರ್ಶನ್‌ ಅವರು ಜೀರೋದಿಂದ ಬಂದವರು, 25 ವರ್ಷಗಳ ಜರ್ನಿ ಇದು. ದರ್ಶನ್‌ ಅವರು ದೇವರಕ್ಕಿಂತ ಜಾಸ್ತಿ ವೃತ್ತಿಯನ್ನು ಪೂಜಿಸುತ್ತಾರೆ. ದರ್ಶನ್‌ ಅವರ ಜೀವನದಲ್ಲಿ ಕಷ್ಟಗಳನ್ನು ನೋಡಿದ್ದಾರೆ, ಕಷ್ಟಗಳು ಇವೆ, ಆದರೆ ಹೊರಗಡೆ ಜನರಿಂದ ಇಷ್ಟೆಲ್ಲ ಪ್ರೀತಿ ಸಿಗೋದಿಕ್ಕೆ ಪುಣ್ಯ ಮಾಡಿರಬೇಕು. ಈ ರೀತಿ ಪ್ರೀತಿ ತೀರಿಸಲು ನೀನು ಮತ್ತೆ ಹುಟ್ಟಿ ಬರಬೇಕು ಎಂದು ನಾನು ದರ್ಶನ್‌ಗೆ ಹೇಳುತ್ತಿರುತ್ತೇನೆ ಎಂದು ವಿಜಯಲಕ್ಷ್ಮೀ ದರ್ಶನ್‌ ಹೇಳಿದ್ದಾರೆ.

ಸಿನಿಮಾ ರಿಲೀಸ್‌ ದಿನ ಫೋನ್‌ ಬಂತು

ಪ್ರತಿ ಬಾರಿ ಜೈಲಿಗೆ ಹೋದಾಗ ಸಿನಿಮಾ ಬಗ್ಗೆ ನಾನು ಅವರಿಗೆ ಅಪ್‌ಡೇಟ್ಸ್‌ ಕೊಡ್ತೀನಿ. ದರ್ಶನ್‌ ಅವರ ಉಪಸ್ಥಿತಿ ಗೊತ್ತಾಗಬೇಕು ಎಂದು ನಾನು ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳನ್ನು ನಾನು ಹ್ಯಾಂಡಲ್‌ ಮಾಡುತ್ತಿದ್ದೀನಿ, ಪೋಸ್ಟ್‌ ಮಾಡುತ್ತಿದ್ದೀನಿ. ಯಾವಾಗಲೂ ವಾರಕ್ಕೆ ಎರಡು ಬಾರಿ ಫೋನ್‌ ಮಾಡುವ ದರ್ಶನ್‌ ಅವರು ಸಿನಿಮಾ ರಿಲೀಸ್‌ ದಿನ ಮಧ್ಯಾಹ್ನವೇ ಫೋನ್‌ ಮಾಡಿ, ಸಿನಿಮಾ ಹೇಗಿದೆ? ವೀಕ್ಷಕರು ಏನು ಹೇಳಿದರು? ನಿರ್ಮಾಪಕರು ಖುಷಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದರು. ಸಿನಿಮಾ ಬಗ್ಗೆ ಹಾಗೆ ಮಾಡು, ಹೀಗೆ ಮಾಡು ಎಂದು ಹೇಳಿದ್ದಾರೆ.

ಈ ಅಭಿಮಾನಕ್ಕೆ ಬೆಲೆ ಕಟ್ಟೋಕಾಗಲ್ಲ

ಇತ್ತೀಚಿನ ದಿನಗಳಲ್ಲಿ ದರ್ಶನ್‌ ಅಭಿಮಾನಿಗಳ ಥರ ಬೇರೆ ಹೀರೋಗಳಿಗೂ ಅಭಿಮಾನ ತೋರಿಸೋದು ನನಗೆ ಗೊತ್ತಿಲ್ಲ, ನಾನು ಬೇರೆಯವರ ಹೀರೋ ಅಭಿಮಾನಿಗಳ ಬಗ್ಗೆ ಕಾಮೆಂಟ್‌ ಮಾಡುತ್ತಿಲ್ಲ. ದರ್ಶನ್‌ ಅವರು ಇಲ್ಲಿಯವರೆಗೂ ಅಭಿಮಾನಿಗಳಿಗೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಿದ್ದು ನಾನು ನೋಡಿಲ್ಲ. ಈ ಕೆಲಸಗಳಿಗೆ ಬೆಲೆಯೇ ಕಟ್ಟಲಾಗೋದಿಲ್ಲ ಎಂದು ವಿಜಯಲಕ್ಷ್ಮೀ ದರ್ಶನ್‌ ಹೇಳಿದ್ದಾರೆ.

ಆಪರೇಶನ್‌ ಯಾಕೆ ಮಾಡಿಸಿಕೊಳ್ಳಲಿಲ್ಲ?

ಡೆವಿಲ್‌ ಸಿನಿಮಾ ಶೂಟಿಂಗ್‌ ವೇಳೆ ದರ್ಶನ್‌ ಅವರಿಗೆ ಬೆನ್ನು ನೋವಿತ್ತು. ದರ್ಶನ್‌ ಅವರಿಗೆ ಆಪರೇಶನ್‌ ಆದರೆ ಆರು ತಿಂಗಳು ಅಥವಾ ಒಂದು ವರ್ಷ ಬೆಡ್‌ ರೆಸ್ಟ್‌ ಮಾಡಬೇಕು ಎಂದು ಹೇಳಿದರು. ದರ್ಶನ್‌ ಜಾಬ್‌ನಲ್ಲಿ ಫೈಟ್‌, ಡ್ಯಾನ್ಸ್‌ ಮಾಡಬೇಕು. ಅವರು 9-5 ಜಾಬ್‌ ಮಾಡೋಕೆ ಆಗೋದಿಲ್ಲ. ಭಾರತದಲ್ಲಿ ಆಪರೇಶನ್‌ ಆದರೆ ಹೀಗೆಲ್ಲ ಮಾಡೋಕೆ ಆಗೋದಿಲ್ಲ. ಸಿಂಗಾಪುರದಲ್ಲಿ ವೈದ್ಯರನ್ನು ಕಾಂಟ್ಯಾಕ್ಟ್‌ ಮಾಡಿದಾಗ ಅವರು ಲೇಸರ್‌ ಟ್ರೀಟ್‌ಮೆಂಟ್‌ ಮಾಡಿಸೋಣ ಎಂದರು. ಅಂದಹಾಗೆ ನಮ್ಮಲ್ಲಿ ಮ್ಯಾನ್ಯುವೆಲ್‌ ಆಗಿ ಆಪರೇಶನ್‌ ಮಾಡುತ್ತಾರೆ ಎಂದಿದ್ದಾರೆ.

ನಿರ್ಮಾಪಕರು ಎಷ್ಟು ಬಡ್ಡಿಗೆ ಹಣ ತಂದು ಸಿನಿಮಾ ಮಾಡಿರುತ್ತಾರೆ ಎನ್ನೋದು ನಮಗೆ ಗೊತ್ತಿದೆ. ನಾವು ಕಷ್ಟದಿಂದ ಈ ಹಂತಕ್ಕೆ ಬಂದಿದ್ದಕ್ಕೆ ನಮಗೆ ಹಣದ ಬೆಲೆ ಗೊತ್ತಿದೆ. ಹೀಗಾಗಿ ಅವರು ಪ್ರಕಾಶ್‌ ವೀರ್‌ ಅವರ ಸಿನಿಮಾ ಮೊದಲು ಮಾಡಿ ಮುಗಿಸೋಣ ಎಂದರು. ಹೀಗಾಗಿ ಅವರು ಆಪರೇಶನ್‌ ಮಾಡಿಸಿಕೊಳ್ಳಲಿಲ್ಲ. ವಾರದಲ್ಲಿ ಒಂದು ದಿನ ಅವರು ಹೈ ಡೋಸ್‌ ಮಾತ್ರೆಗಳನ್ನು ತಗೊಂಡಿದ್ದರು. ಈಗ ಜೈಲಿನಲ್ಲಿ ಕೂಡ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.