ಹಿರಿಯ ಹಾಸ್ಯನಟ ಸರಿಗಮ ವಿಜಿ (ವಿಜಯ್ ಕುಮಾರ್) ಇಂದು ಬೆಳಿಗ್ಗೆ ನಿಧನರಾದರು. ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ವಿಜಿ, ೭೫ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. 'ಬೆಳವಳದ ಮಡಿಲಲ್ಲಿ' ಅವರ ಮೊದಲ ಚಿತ್ರ. ಜನಪ್ರಿಯ ನಾಟಕ 'ಸಂಸಾರದಲ್ಲಿ ಸರಿಗಮ'ದಿಂದ ಅವರಿಗೆ 'ಸರಿಗಮ' ಎಂಬ ಹೆಸರು ಬಂದಿತು.
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ ಅವರು ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ನ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕರುನಾಡು ಶಾಕ್ ಆಗಿದೆ. ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಿಗಮ ವಿಜಿ ಅವರು ಇಂದು ಬೆಳಿಗ್ಗೆ (15 ಜನವರಿ 2025) 9.45ಕ್ಕೆ ನಿಧನರಾಗಿದ್ದಾರೆ. 1965 ರಿಂದ 2024ರ ವರೆಗೆ ಆ್ಯಕ್ಟೀವ್ ಆಗಿದ್ದ ಸರಿಗಮ ವಿಜಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ನಟ ಸರಿಗಮ ವಿಜಿ ಅವರು 75ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. 1980ರಲ್ಲಿ ಗೀತಪ್ರಿಯ ನಿರ್ದೇಶನದ 'ಬೆಳವಳದ ಮಡಿಲಲ್ಲಿ' ಚಿತ್ರದಲ್ಲಿ ಸರಿಗಮ ವಿಜಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸರಿಗಮ ವಿಜಿ ಗುರ್ತಿಸಿಕೊಂಡಿದ್ದರು. ವಿಜಿ ನಟಿಸುತ್ತಿದ್ದ 'ಸಂಸಾರದಲ್ಲಿ ಸರಿಗಮ' ನಾಟಕ ಬಹಳ ಜನಪ್ರಿಯವಾಗಿತ್ತು. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು.
ಹಿರಿಯ ನಟ ಸರಿಗಮ ವಿಜಿಗೆ ತೀವ್ರ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ಈ ನಾಟಕ 500ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ಅವರ ಪೂರ್ಣ ಹೆಸರು ವಿಜಯ್ ಕುಮಾರ್. ಬೆಂಗಳೂರು ನಗರದ ಹೆಚ್ಎಎಲ್ ಬಳಿಯ ವಿಮಾನಪುರದಲ್ಲಿ ಅವರು ಹುಟ್ಟಿದರು. ತಂದೆ ರಾಮಯ್ಯ ಹೆಚ್ಎಎಲ್ ಉದ್ಯೋಗಿ ಆಗಿದ್ದರು. ಒಟ್ಟು ಐವರು ಮಕ್ಕಳಲ್ಲಿ ವಿಜಯ್ ಕುಮಾರ್ ಕೊನೆಯವರು. ಗ್ಯಾಸ್ಕಾಲೇಜಿನಲ್ಲಿ ಪಿಯುಸಿ ಓದುವಾಗ ನಟ ಅಶೋಕ್ ಜೊತೆ ಸೇರಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು.
ಮುಂದೆ ಜಯಂತಿ ಅವರ 'ಏನ್ ಸ್ವಾಮಿ ಅಳಿಯಂದ್ರೆ' ಚಿತ್ರಕ್ಕೂ ವಿಜಿ ಸಹಾಯಕರಾಗಿದ್ದರು. ಆ ಚಿತ್ರದಲ್ಲಿ ಅವರ ಕೆಲಸ ನೋಡಿ ಟೈಗರ್ ಪ್ರಭಾಕರ್ ಮೆಚ್ಚಿದರು. ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು. ಮುಂದೆ ಏಳೆಂಟು ಸಿನಿಮಾಗಳಲ್ಲಿ ಪ್ರಭಾಕರ್ ಜೊತೆ ಸಹಾಯಕರಾಗಿ ದುಡಿದು ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ನಟಿಸುವಂತಾಯಿತು. ಓಂ ಪ್ರಕಾಶ್ ರಾವ್ ಬಳಿಯೂ ಸರಿಗಮ ವಿಜಿ ಸಹಾಯಕನಾಗಿ ಕೆಲಸ ಮಾಡಿದ್ರು.
ನನಗೆ ಸಹಾಯ ಮಾಡಿದ್ದು ರಿಷಬ್ ಶೆಟ್ಟಿ ಹಾಗೂ ದರ್ಶನ್ ಮಾತ್ರ; ಮಂಡ್ಯ ರಮೇಶ್
ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸರಿಮ ವಿಜಿ ಅವರನ್ನು ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಅವರು ದೈವಾಧೀನರಾದರು, ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಒಬ್ಬರು ಪ್ರತಿಭಾವಂತ ಹಿರಿಯ ನಟರನ್ನು ಕಳೆದುಕೊಂಡಂತಾಗಿದೆ.
