ನಾನು ಕ್ಷೇಮವಾಗಿದ್ದೇನೆ, ಸಾವಿನ ಸುದ್ದಿ ಸುಳ್ಳು: ದೊಡ್ಡಣ್ಣ
ಸೋಷಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಕನ್ನಡ ಚಿತ್ರರಂಗ ಗಾಬರಿಯಾಗಿತ್ತು. ನಟ ದೊಡ್ಡಣ್ಣ ಆರೋಗ್ಯವಾಗಿದ್ದಾರೆ.
‘ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ಹಾಕಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಹಾಕಿದ್ದರು. ಇದನ್ನು ಓದಿ ಬಹಳ ಜನ ಗಾಬರಿಯಾಗಿ ಕಾಲ್ ಮಾಡಿದರು. ನಿಮ್ಮೆಲ್ಲರ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇನೆ.’ ಎಂದು ಸ್ಯಾಂಡಲ್ವುಡ್ ಹಿರಿಯ ನಟ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ.
ದಚ್ಚು, ಕಿಚ್ಚನ ಮುನಿಸಿನ ಬಗ್ಗೆ ದೊಡ್ಡಣ್ಣ ಹೇಳಿದ್ದೇನು ಗೊತ್ತಾ?
ಹೀಗೆಂದು ವೀಡಿಯೋ ಮಾಡಿ ಹೊರ ಬಿಟ್ಟಿದ್ದಾರೆ ಹಿರಿಯ ನಟ ದೊಡ್ಡಣ್ಣ. ಬೆಳಗ್ಗೆ ಯಿಂದಲೇ ದೊಡ್ಡಣ್ಣ ಇನ್ನಿಲ್ಲ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿತ್ತು. ಸ್ವಲ್ಪ ಹೊತ್ತಿಗೇ ಅದು ವೈರಲ್ ಆಯ್ತು. ದೊಡ್ಡಣ್ಣ ಅವರ ಆಪ್ತರು, ಚಿತ್ರರಂಗದವರು, ಅಭಿಮಾನಿಗಳೆಲ್ಲ ನೂರಾರು ಸಂಖ್ಯೆಯಲ್ಲಿ ದೊಡ್ಡಣ್ಣ ಅವರಿಗೆ ಕರೆ ಮಾಡ ತೊಡಗಿದರು. ಇದರಿಂದ ಬೇಸತ್ತ ದೊಡ್ಡಣ್ಣ ತಾವು ಕ್ಷೇಮವಾಗಿರುವುದಾಗಿ ವೀಡಿಯೋ ಮಾಡಿ ಸ್ಪಷ್ಟನೆ ನೀಡಿದರು.
"
‘ಕನ್ನಡ ನಾಡಿನ ನನ್ನ ಎಲ್ಲಾ ತಂದೆ-ತಾಯಿಗಳಿಗೆ ದೊಡ್ಡಣ್ಣನ ಭಕ್ತಿ ಪೂರ್ಕವಾದ ನಮಸ್ಕಾರಗಳನ್ನು ಸಮರ್ಪಣೆ ಮಾಡುತ್ತೇನೆ. ನಾನು ವಿಡಿಯೋ ಮಾಡುತ್ತಿರುವುದಕ್ಕೆ ಕಾರಣ ಏನೆಂದರೆ ಇವತ್ತು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸವಿದು. ನಿಮ್ಮೆಲ್ಲರ ಆಶೀರ್ವಾದ ಇರುವವರೆಗೂ ಈ ದೊಡ್ಡಣ್ಣನಿಗೆ ಏನೂ ಆಗಲ್ಲ. ಇದರಿಂದ ಆಯುಷ್ಯ ಜಾಸ್ತಿ ಆಯಿತು. ದೊಡ್ಡ ಕಂಟಕದಿಂದ ಪಾರಾದ ಹಾಗಾಯ್ತು. ನಾನು ಆರೋಗ್ಯದಿಂದಿದ್ದೇನೆ,’ ಎಂದು ದೊಡ್ಡಣ್ಣ ವೀಡಿಯೋದಲ್ಲಿ ಹೇಳಿದ್ದಾರೆ.