ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟನೆ ಅಪ್ಪು ಚಿತ್ರದ ಲೆಕ್ಚರರ್ ಬಿಸಿಬಿಸಿ ಚಿತ್ರದ ಕಿಲಾಡಿ ರಸಿಕ ತಾತ

ಕನ್ನಡ ಚಿತ್ರಗಳು ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದ ಪ್ರೇಕ್ಷಕರ ಮನಸ್ಸನ್ನೂ ಗೆದ್ದೂ, 'ಪಾಪಾ ಪಾಂಡು'ವಿನಂತಹ ಹಾಸ್ಯಮಯ ಧಾರಾವಾಹಿಯಲ್ಲಿ ಬಾಸ್ ಬಾಲ್ ರಾಜ್ ಎಂದೇ ಖ್ಯಾತರಾಗಿದ್ದ ಹಿರಿಯ ಹಾಸ್ಯ ಕಲಾವಿದ, ಪೋಷಕ ನಟ ಶಂಕರ್‌ರಾವ್ (ShankarRao) (84) ನಿಧನರಾಗಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು ಬೆಳಗಿನ ಜಾವ ಸುಮಾರು 6.30ರ ಸಮಯದಲ್ಲಿ ತಮ್ಮ ಅರಕೆರೆಯ ನಿವಾಸದಲ್ಲಿ ತೀರಿಕೊಂಡಿದ್ದಾರೆ. 'ಪಾಪ ಪಾಂಡು' ಧಾರಾವಾಹಿ ಪಾತ್ರದಿಂದ ಹಿಡಿದು 'ಧ್ರುವ' (Dhruva) ಚಿತ್ರದ ಸಾಧುಕೋಕಿಲಾ (Sadhu Kokila) ಜೊತೆಗಿನ ಫೇಮಸ್ ದೃಶ್ಯದ ಲೆಕ್ಚರರ್ ಪಾತ್ರದವರೆಗೂ ಜನಪ್ರಿಯತೆ ಗಳಿಸಿದ್ದರು. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ (Funeral) ನಡೆಯಲಿದೆ. ಶಂಕರ್​ರಾವ್​ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದು, 'ನಟರಂಗ' (Nataranga) ತಂಡದೊಟ್ಟಿಗೆ ಗುರುತಿಸಿಕೊಂಡಿದ್ದರು.

ರಾಮ ವಿಯೋಗದ ವೇಳೆ ನಟ ಸಾವು, ಕಣ್ನೀರಾದ ಪ್ರೇಕ್ಷಕರು, ಹಲವರ ಮನೆಯಲ್ಲಿ ಉರಿಯಲಿಲ್ಲ ಒಲೆ!

ಸಿದ್ಧಾರ್ಥ, ಪರಮಶಿವ, ದಿಲ್ವಾಲಾ, ಸಿದ್ಲಿಂಗು, ಸ್ನೇಹಿತರು, ರಾಜಕುಮಾರ, ಕನ್ನಡದ ಕಿರಣ್ ಬೇಡಿ, ವಂಶಿ, ಅರಸು, ಮಿಲನ, ಉಪ್ಪಿ ದಾದಾ ಎಂಬಿಬಿಎಸ್, ಮೋಹಿನಿ 9886788888, ವೀರ ಕನ್ನಡಿಗ, ಧ್ರುವ, ನಾಗರಹಾವು, ಪರ್ವ, ಕುರುಬನ ರಾಣಿ, ಉಲ್ಟಾ ಪಲ್ಟಾ, ಗೆಲುವಿನ ಸರದಾರ, ಶಿವ ಸೈನ್ಯ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫಾ, ಜೀವನ ಚಕ್ರ, ಪ್ರಚಂಡ ಕುಳ್ಳ, ಬ್ಯಾಂಕರ್ ಮಾರ್ಗಯ್ಯ, ಮೂಗನ ಸೇಡು, ಪುಟಾಣಿ ಏಜೆಂಟ್ 123, ಮುಯ್ಯಿಗೆ ಮುಯ್ಯಿ ಮತ್ತು 'ಅಪ್ಪು' ಚಿತ್ರದಲ್ಲಿ ಲೆಕ್ಚರರ್ ಪಾತ್ರ, 'ಬಿಸಿಬಿಸಿ' ಚಿತ್ರದಲ್ಲಿ ಕಿಲಾಡಿ ರಸಿಕ ತಾತನ ಪಾತ್ರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ವಿಷ್ಣುವರ್ಧನ್, ಲೋಕೆಶ್, ಶ್ರೀನಾಥ್ ದ್ವಾರಕೀಶ್, ಪುನೀತ್ ರಾಜಕುಮಾರ್, ಉಪೇಂದ್ರ, ಶಿವರಾಜಕುಮಾರ್, ರಮೇಶ್ ಅರವಿಂದ್, ಲೂಸ್ ಮಾದ ಯೋಗಿ ಸೇರಿದಂತೆ ಕನ್ನಡದ ಘಟಾನುಘಟಿ ನಾಯಕರುಗಳ ಜೊತೆ ಶಂಕರ್‌ರಾವ್ ತೆರೆ ಹಂಚಿಕೊಂಡಿದ್ದಾರೆ. ಇತ್ತಿಚೆಗಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್, ಹಿರಿಯ ನಟ, ಚಿಂತಕ ಜಿ.ಕೆ. ಗೋವಿಂದ ರಾವ್ ಮೃತಪಟ್ಟಿದ್ದರು. ಸದ್ಯ ಹಿರಿಯ ಪೋಷಕನಟರು ಒಬ್ಬೊಬ್ಬರಾಗಿ ಚಿತ್ರರಂಗವನ್ನು ತೊರೆದು ಹೋಗುತ್ತಿರುವುದು ಅನಾಥಭಾವ ಮೂಡಿಸುತ್ತಿದೆ.