Asianet Suvarna News Asianet Suvarna News

ಲಾಕ್‌ಡೌನ್ ಎದುರಿಸೋದು ಹೇಗೆ? ಅನಂತ್ ನಾಗ್ ಸ್ಪೂರ್ತಿ ನೀಡುವ ಸಲಹೆಗಳು!

ಕವಿದಿರುವ ವಿಷಾದ, ಮನೆಯ ಒಳಗೇ ಕೂತವರ ಆತಂಕ, ನಾಳೆಯ ಚಿಂತೆ, ಇಂದಿನ ಭವಭಾರದ ನಡುವೆ ಸಂವೇದನಾಶೀಲ ನಟ ಅನಂತನಾಗ್‌ ತಮ್ಮ ಮನಸ್ಸು ತೆರೆದಿಟ್ಟಿದ್ದಾರೆ. ಶ್ರದ್ಧೆ, ಧೈರ್ಯ, ಹುಮ್ಮಸ್ಸು, ಕ್ರಿಯಾಶೀಲತೆಯ ಸಮ್ಮಿಶ್ರದಂತಿರುವ ಅವರ ಮಾತುಗಳು ಈ ಹೊತ್ತಿಗೆ ಹಚ್ಚಿಟ್ಟಸ್ಪೂರ್ತಿದೀಪ.

Veteran actor Anant nag advice to overcome coronavirus lockdown
Author
Bangalore, First Published Apr 10, 2020, 9:53 AM IST

17ರ ಕಷ್ಟ71ಕ್ಕೆ ಇರದು

ಕಾಲ ಹೇಗೆ ಕಳೆಯುವುದು ಅನ್ನುವ ಸಮಸ್ಯೆ 17 ಇದ್ದಾಗ ಇರುತ್ತದೆ. ಆದರೆ 71 ಆದಾಗ ಇರುವುದಿಲ್ಲ. ನಾನು ಆಶ್ರಮ, ಮಠಗಳಲ್ಲಿ ಬೆಳೆದವನು. ಈಗ ಕೆಲಸ ಕೂಡ ಕಡಿಮೆ ಮಾಡಿದ್ದೇನೆ. ಆರು ತಿಂಗಳು ಕೆಲಸ ಮಾಡುತ್ತೇನೆ. ಇನ್ನಾರು ತಿಂಗಳು ಮಠಕ್ಕೆ ಹೋಗುತ್ತೇನೆ. ಏಕಾಂತದಲ್ಲಿ ಇರುತ್ತೇನೆ. ಹಾಗಾಗಿ ಈ ಲಾಕ್‌ಡೌನ್‌ ನನಗೇನೂ ಕಷ್ಟವಾಗಿಲ್ಲ.

ಐದು ನಿಮಿಷ ಧ್ಯಾನಿಸುವುದೂ ಕಷ್ಟ

ಹೊರಗೆ ನೋಡಿದರೆ ಒಂಥರಾ ಪಾಪ ಅನ್ನಿಸುತ್ತದೆ. ಶಟ್‌ ಡೌನ್‌ ಅಂದ್ರೆ ಶಟ್‌ ಡೌನ್‌. ಇಡೀ ಜಗತ್ತೇ ಪಾಳುಬಿದ್ದ ಊರಾಗಿದೆ. ಸೋಷಲ್‌ ಮೀಡಿಯಾದಲ್ಲಿ ಲಾಸ್‌ ಏಂಜಲೀಸ್‌, ನ್ಯೂಯಾರ್ಕ್, ಇಂಗ್ಲೆಂಡ್‌ ಹೇಗಿದೆ ನೋಡಿ ಅಂತೆಲ್ಲಾ ಫೋಟೋಗಳನ್ನು ನೋಡುತ್ತಿದ್ದೇನೆ. ಈ ಎಲ್ಲವನ್ನೂ ಗಮನಿಸಿ ಹೇಳುವುದಾದರೆ ಈಗ ನಾವು ಒಂದೈದು ನಿಮಿಷವಾದರೂ ಏಕಾಂತ, ಧ್ಯಾನ ಮಾಡಬೇಕು. ಐದು ನಿಮಿಷ ಕೂಡ ಧ್ಯಾನ ಮಾಡುವುದು ಎಷ್ಟುಕಷ್ಟಇದೆ ಅಂತ ಆಗ ಗೊತ್ತಾಗುತ್ತದೆ. ಜಾಸ್ತಿ ಏನೂ ಮಾಡಬೇಕಾಗಿಲ್ಲ, ಸುಮ್ಮನೆ ಕೂತ್ಕೋ. ಆದರೆ ಸುಮ್ಮನೆ ಕೂರುವುದು ನಿಜಕ್ಕೂ ಕಷ್ಟ.

ರಾಮಾಯಣ ಎಫೆಕ್ಟ್: ದೂರದರ್ಶನ ಈಗ ನಂ.1 ಚಾನಲ್

ಒಳಗೆ ನೋಡಲು ಕಲಿಯಿರಿ

ನಾವು ಎಷ್ಟುಹೊರಗಡೆ ಸೆಳೆಯಲ್ಪಟ್ಟಿದ್ದೇವೆ ಅಂದ್ರೆ ಹೊರಗಡೆ ವಸ್ತುಗಳು, ಜನರು ಹೀಗೆ ಪ್ರತಿಯೊಂದೂ ನಮಗೆ ಬೇಕು. ಹಾಗಾಗಿ ನಾವು ಒಳಗೆ ನೋಡುವುದೇ ಇಲ್ಲ, ಒಂಟಿಯಾಗಿ ಬದುಕುವುದೇ ಇಲ್ಲ, ನನಗೆ ಮಠ, ಆಶ್ರಮ ಹಿನ್ನೆಲೆ ಇರುವುದರಿಂದ ಧ್ಯಾನ ಮಾಡುತ್ತೇನೆ. ಏಕಾಂತೇ ಸುಖಮಾಸ್ಯತಾಂ.. ಅಂದ್ರೆ ಸುಖವಾದ ಆಸನದಲ್ಲಿ ಏಕಾಂತದಲ್ಲಿ ಕುಳಿತು ಧ್ಯಾನ ಮಾಡು ಅಂತ. ಏಕಾಂತದ ಸುಖದಲ್ಲಿ ಇರುವುದು ಅಂತಲೂ ಆಗುತ್ತದೆ. ಸುಖವಾದ ಆಸನದಲ್ಲಿ ಕುಳಿತು ಏಕಾಂತ ಸಾಧಿಸುವುದು ಅಂತಲೂ ಆಗುತ್ತದೆ. ಹಾಗಾಗಿ ಇದೊಂದು ಅವಕಾಶ, ಧ್ಯಾನ ಮಾಡಲು.

ಮನಸ್ಸು ಖಾಲಿ ಇಟ್ಟುಕೊಳ್ಳಿ

ನಮಗೆ ಏನಾದರೊಂದು ಮಾಡುತ್ತಾ ಇರಬೇಕು. ನಮಗೆ ಗುರುಗಳು ಹೇಳೋರು. ಅಧ್ಯಾತ್ಮ ಅಂದ್ರೆ ನಾನು ಏನಾದರೂ ಮಾಡಬೇಕು, ನಾನು ಏನೋ ಮಾಡುವುದು ಬಾಕಿ ಇದೆ, ಏನಾದರೂ ಮಾಡಲೇಬೇಕು ಅನ್ನುವ ಭಾವನೆ ಬಿಟ್ಟು ನೀನು ಏನೂ ಮಾಡಬೇಕಾಗಿಲ್ಲ ಅಂತ ತಿಳ್ಕೊಂಡು ಶಾಂತವಾಗಿ ಸುಮ್ಮನೆ ಕುಳಿತಿರುವುದು, ಧ್ಯಾನವೂ ಮಾಡಬೇಕಾಗಿಲ್ಲ. ಕೀಪ್‌ ಯುವರ್‌ ಮೈಂಡ್‌ ಬ್ಲಾಂಕ್‌. ಏನು ಬರುತ್ತದೆ ಮನಸ್ಸಲ್ಲಿ ಅದನ್ನು ನೋಡಬೇಕು.

ಫೇಕ್‌ ನ್ಯೂಸ್‌ ನಂಬಬೇಡಿ, ಎಂಜಾಯ್‌ ಮಾಡಿ!

ಪ್ರಸ್ತುತ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಎಲ್ಲವನ್ನೂ ನೋಡುತ್ತಿದ್ದೇನೆ. ಫೇಕ್‌ನ್ಯೂಸ್‌ಗಳನ್ನು ಓದಿ ಎಂಜಾಯ್‌ ಮಾಡುತ್ತಿದ್ದೇನೆ. ದೆಹಲಿ ತಬ್ಲೀಘಿಘಿ ಪ್ರಕರಣ ಗಂಭೀರವಾಗಿದ್ದು ಗಮನಿಸುತ್ತಿದ್ದೇನೆ. ಕೆಲವರು ಮಾಡಿದ ತಪ್ಪು ಅದು. ಎಲ್ಲರನ್ನೂ ದೂರುವುದು ತಪ್ಪು. ಆದರೆ ಈ ಥರ ಆದಾಗ ಮನಸ್ಸಲ್ಲಿ ಅಲೆಗಳು ಏಳುತ್ತವೆ. ಏನಪ್ಪಾ ಇದು.. ಸ್ವಾತಂತ್ರ್ಯ ಸಿಕ್ಕಿ ಇಷ್ಟುವರ್ಷವಾದ ಮೇಲೂ ನಮ್ಮ ದೇಶದ ಮೇಲೆ ಅವರಿಗೆ ಪ್ರೀತಿ ಹುಟ್ಟಿಲ್ವಾ ಅಂತ ಬೇಸರವಾಗುತ್ತದೆ. ಮಹಮ್ಮದರು ಸ್ಥಾಪಿಸಿದ ಎಷ್ಟೊಂದು ಸುಂದರ ಧರ್ಮ ಅದು. ಅದನ್ನು ಈ ರೀತಿ ಬಳಸುತ್ತಿರುವುದು ಸರಿಯಲ್ಲವಲ್ಲ. ಹಾಗೆ ಬೇರೆ ಬೇರೆ ಧರ್ಮಗಳವರೂ ಮಾಡಿದ್ದಾರೆ.

ಪ್ರಾರ್ಥನೆ, ಯೋಗ, ವ್ಯಾಯಾಮಕ್ಕೆ ಮೂರು ಗಂಟೆ ಮೀಸಲು

ನಾನು ಬೆಳಿಗ್ಗೆ ಎದ್ದ ಮೇಲೆ ಪ್ರಾರ್ಥನೆ ಮಾಡುತ್ತೇನೆ. ಯೋಗ, ವ್ಯಾಯಾಮ ಮತ್ತು ದೇವರ ಪೂಜೆ ಆರತಿ ಅಂತ ಸುಮಾರು ಮೂರು ಗಂಟೆ ನಾನು ಅದರಲ್ಲೇ ಕಳೆಯುತ್ತೇನೆ. ಹಾಗಾಗಿ ನನಗೆ ಸಮಯ ಹೇಗೆ ಕಳೆಯುವುದು ಅನ್ನುವ ಸಮಸ್ಯೆ ಇಲ್ಲ. ಇಂಥಾ ಪರಿಸ್ಥಿತಿ ನನಗೆ ಮೊದಲೇ ಆಗಿತ್ತು. ಇಂಥಾ ಸ್ಥಿತಿಯಲ್ಲಿ ಗ್ರಹಾಂ ಗ್ರೀನ್‌, ವಿ ಎಸ್‌ ನೈಪಾಲ್‌, ಅಮಿತವ್‌ ಘೋಷ್‌ ಪುಸ್ತಕಗಳನ್ನೆಲ್ಲಾ ಓದಿದ್ದೇನೆ.

20 ವರ್ಷ ಆಗಿತ್ತು ಹಳ್ಳಿ ಜೀವನ ಅನುಭವಿಸಿ: ರಿಷಬ್‌ ಶೆಟ್ಟಿ

ಒಂದು ಪುಸ್ತಕದ ಜೊತೆ ಕಳೆದ ದಿನಗಳು

ಜನವರಿಯಲ್ಲಿ ಭೀಷ್ಮ ಸಿನಿಮಾದ ಚಿತ್ರೀಕರಣಕ್ಕೆ ಹೋಗಿದ್ದೆ. ಅಲ್ಲಿ ನನಗೆ ಬಂಗ್ಲೆ ಸೆಟ್‌, ಲೈಬ್ರರಿ ಸೆಟ್‌ ಇತ್ತು. ಲೈಬ್ರರಿ ಸೆಟ್‌ಗೆ ಹೋದರೆ ಅಲ್ಲಿ ರಟ್ಟಿನ ಪುಸ್ತಕ ಇಟ್ಟಿದ್ದರು. ನಿಜವಾದ ಪುಸ್ತಕ ಇರಲಿಲ್ಲ. ಅಲ್ಲಿ ಒಬ್ಬ ಅಸೋಸಿಯೇಟ್‌ ಇಧ್ದ. ಒಳ್ಳೆಯ ಹುಡುಗ. ಅವನನ್ನು ಕರೆದೆ. ಅವನ ಹೆಸರು ವೆಂಕಟ ಅಂತ. ಅವನು ಬಂದ ಕೂಡಲೇ, ‘ನೋಡು, ನನಗೆ ಇಂಥಾ ಪುಸ್ತಕ ಕೊಟ್ಟರೆ ಸಿಟ್ಟು ಬರುತ್ತದೆ. ನನಗೆ ನಟನೆಯೇ ಇರಲಿ, ಓದೋಕೆ ಒಂದು ಒಳ್ಳೆಯ ಪುಸ್ತಕ ಬೇಕು, ಎಲ್ಲಿಂದಾದರೂ ಒಂದು ಒಳ್ಳೆಯ ಪುಸ್ತಕ ತಗೊಂಡ್‌ ಬಾ’ ಎಂದೆ. ಅವನು ಹೋಗಿ ಪುಸ್ತಕದಂಗಡಿಯಲ್ಲಿ ನನ್ನ ಹೆಸರು ಹೇಳಿ ಹುಡುಕಿ ಒಂದು ಪುಸ್ತಕ ತಂದ. ಸುಮ್ಮನೆ ಕಣ್ಣಾಡಿಸಿದೆ. ಅದು ನೋಡಿದರೆ ‘ದಿ ಸಿಲ್‌್ಕ ರೋಡ್ಸ್‌’ ಅಂತ ಪುಸ್ತಕ, ಪೀಟರ್‌ ಫ್ರಾಂಕೋಪನ್‌ ಬರೆದ ಆರು ನೂರು ಪುಟದ ಪುಸ್ತಕ ಅದು. ಅರ್ಧ ಓದಿದಾಗ ನಾನಿದನ್ನು ಮತ್ತೆ ಓದಬೇಕು. ಸಾಲುಗಳಿಗೆ ಅಂಡರ್‌ಲೈನ್‌ ಮಾಡಿ ಓದಬೇಕು ಅನ್ನಿಸಿತು.

‘ಸಿಲ್ಕ್ ರೋಡ್‌ ಅಂದ್ರೆ ವ್ಯಾಪಾರಕ್ಕೆ ಅಂತ ನಾವು ತಿಳಿದುಕೊಂಡಿದ್ದೀವಿ. ಆದರೆ ಆತ ಅದಕ್ಕೆ ಕೊಟ್ಟಟ್ಯಾಗ್‌ಲೈನ್‌ ‘ಎ ನ್ಯೂ ಹಿಸ್ಟ್ರಿ ಆಫ್‌ ದಿ ವಲ್ಡ್‌ರ್‍’ ಅಂತ. ಅದು ಶುರುವಾಗುವುದು ಬುದ್ಧಿಸಂನಿಂದ. ಅಲ್ಲಿಂದ ಜೈನಿಸಂಗೆ ಬರುತ್ತಾನೆ. ಆಮೇಲೆ ರೋಡ್‌ ಟು ಡಿಸ್ಟ್ರಾಕ್ಷನ್‌, ರೋಡ್‌ ಟು ರಿಲೀಜಿಯನ್‌ ಹೀಗೆ ಹೋಗುತ್ತದೆ. ಸುಮಾರು 2300 ವರ್ಷದಿಂದ ಅವರು ಇತಿಹಾಸ ಬರೆಯುತ್ತಾ ಇದ್ದಾರೆ. ಎಷ್ಟುಚೆನ್ನಾಗಿದೆ ಅಂದ್ರೆ ಯಾವುದೋ ಒಂದು ನಾವೆಲ್‌ಗಿಂತ ಇದೇ ಚೆನ್ನಾಗಿದೆ. ಇತಿಹಾಸವನ್ನು ಅಷ್ಟುಅದ್ಭುತವಾಗಿ ಬರೆದಿದ್ದಾನೆ. ಪ್ರತೀ ಶತಮಾನದಲ್ಲೂ ಅಂದ್ರೆ ಬಿಫೋರ್‌ ಕ್ರೈಸ್ಟ್‌ ಮೂರು ಶತಮಾನ, ನಂತರದ ಶತಮಾನಗಳಲ್ಲಿ ಹೀಗೆ ಬರ್ತಾ ಬರ್ತಾ ಜಗತ್ತಿನಲ್ಲಿ ರಿಲೀಜಿಯನ್‌ ಹೇಗೆ ಪಸರಿಸಿತು ಅಂತ ಬರೆಯುತ್ತಾರೆ. ಬುದ್ಧಿಸಂ ಕೂಡ ಪಸರಿಸಿತು, ಆದರೆ ಅಲ್ಲಿ ಹಿಂಸೆ ಇರಲಿಲ್ಲ, ಹಿಂದೂಯಿಸಂ ಬಗ್ಗೆ ಬರೆದಿಲ್ಲ. ಯಾಕೆಂದರೆ ಹಿಂದೂಯಿಸಂ ಎಲ್ಲೂ ಹೋಗಿಲ್ಲ. ಅದರ ನಂತರದ ಜುಡಾಯಿಸಂ, ಜ್ಯೂಗಳದು, ಕ್ರಿಸ್ತನದು, ಮಹಮ್ಮದರದು, ಜರಾತುಷ್ಟ್ರ ಹೀಗೆ ಜಗತ್ತಿನಲ್ಲಿದ್ದ ಧರ್ಮಗಳು ತಮ್ಮ ಧರ್ಮವನ್ನು ಉಪಯೋಗಿಸಿ ಭಯಂಕರವಾದ ಕ್ರೌರ್ಯ, ಸ್ವಾರ್ಥ, ದುರಾಸೆ ತೋರಿಸಿದವು. ಅದನ್ನು ಈ ಸಮಾಜ ಪದೇ ಪದೇ ಹೇಗೆ ಮಾಡುತ್ತಾ ಬರುತ್ತವೆ ಅನ್ನುವುದನ್ನು ಹೇಳಿದ್ದಾರೆ. ನನಗೆ ಇಷ್ಟುವಿವರವಾಗಿ ಇತಿಹಾಸ ಗೊತ್ತೇ ಇರಲಿಲ್ಲ. ಸ್ಟಾಲಿನ್‌ ವರ್ಸಸ್‌ ಹಿಟ್ಲರ್‌, ಹಿಟ್ಲರ್‌ ವರ್ಸಸ್‌ ಸ್ಟಾಲಿನ್‌ ಅಂತಷ್ಟೇ ಗೊತ್ತಿತ್ತು.

ನಾನು 1938ವರೆಗೆ ಬಂದಿದ್ದೀನಿ. ಮೊಗಲರ ಕಾಲ, ಹೇಗೆ ತೈಮೂರ್‌ ಬಂದು ಲೂಟಿ ಮಾಡಿಕೊಂಡು ಹೋದ, ಡಚ್ಚರ ಕಾಲ, ಬ್ರಿಟಿಷರ ಕಾಲ, ಪೋರ್ಚುಗೀಸರು ಹೀಗೆ ಲೂಟಿ ಮಾಡುತ್ತಾ ಹೋದ ಕತೆ ಇದೆ. ಇದನ್ನೆಲ್ಲಾ ಎಷ್ಟುಸುಂದರವಾಗಿ ಬರೆದಿದ್ದಾನೆ ಅಂದ್ರೆ ನಾನು ಸಿಕ್ಕಾಪಟ್ಟೆಜನರಿಗೆ ಈ ಪುಸ್ತಕ ರೆಕಮಂಡ್‌ ಮಾಡಿದ್ದೇನೆ.

ಪ್ರತಿ ಶತಮಾನಕ್ಕೂ ಒಂದು ದೊಡ್ಡ ರೋಗ ಬರುತ್ತೆ

ಪ್ರತೀ ಶತಮಾನದಲ್ಲಿ ಒಂದು ರೋಗ ಬರುತ್ತದೆ. ಈಗ ಕೊರೋನಾ ಬಂದ ಹಾಗೆ. ಹಾಗೆ ರೋಗಗಳು ಬಂದಾಗ ದಶಲಕ್ಷಗಟ್ಟಲೆ ಜನರು ಸಾಯುತ್ತಾರೆ. ರಸ್ತೆಯಲ್ಲಿ ಹೆಣಗಳು ಬೀಳುತ್ತಿದ್ದವು. ಈಗ ಈಕ್ವೆಡಾರ್‌ನಲ್ಲಿ ಹಾಗೆ ಆಗುತ್ತಿದೆ ಎಂದು ಓದಿದೆ ಎಲ್ಲೋ. ಸಂಬಂಧಿಕರೇ ಹೆಣಗಳನ್ನು ರಸ್ತೆಯಲ್ಲಿ ಬಿಡುತ್ತಿದ್ದಾರೆ ಅಂತ. ಹಿಂದೆ ಪ್ಲೇಗ್‌ ಅಂತ ಕಾಯಿಲೆ ಬಂದಿತ್ತು. ಆಲ್ಬರ್ಟ್‌ ಕಾಮು ಕಾದಂಬರಿ ಬರೆದಿದ್ದ, ಮೀಸಲ್ಸ್‌, ಸ್ಮಾಲ್‌ ಫಾಕ್ಸ್‌, ಇನ್‌ಫ್ಲುಯಂಜಾ, ಕಾಲರಾ ಹೀಗೆ ಒಂದೊಂದಾಗಿ ರೋಗಗಳ ಬಗ್ಗೆ ಪೀಟರ್‌ ಫ್ರಾಂಕೋಪನ್‌ ಬರೆಯುತ್ತಾ ಹೋಗುತ್ತಾನೆ, ಈಗ ಏನಾದರೂ ಬರೆದಿದ್ದರೆ ಕೊರೋನಾ ಕೂಡ ಸೇರಿಸುತ್ತಿದ್ದನೇನೋ.

ಪರೀಕ್ಷೆಗೆ ಓದುವವನಂತೆ ಓದಿದೆ

‘ದಿ ಸಿಲ್‌್ಕ ರೋಡ್ಸ್‌’ ಪುಸ್ತಕ ಆಕಸ್ಮಿಕವಾಗಿ ನನ್ನ ಕೈಗೆ ಬಂತು. ಇಷ್ಟುಒಳ್ಳೆಯ ಪುಸ್ತಕ ನಾನು ಓದಿರಲಿಲ್ಲ. ನಾನು ಇದನ್ನು ಓದುವುದನ್ನು ನನ್ನ ಪತ್ನಿ ನೋಡುತ್ತಿರುತ್ತಾಳೆ, ಪುಸ್ತಕ ತೆಗೆದುಕೊಂಡು ನಾನು ಅಂಡರ್‌ ಲೈನ್‌ ಮಾಡುವುದನ್ನು ನೋಡಿ, ‘ಏನು ಮಾಡುತ್ತಿದ್ದೀರಿ, ನಾಳೆ ಪರೀಕ್ಷೆ ಇದೆಯಾ?’ ಎಂದು ಕೇಳುತ್ತಾಳೆ.

ನಮ್ಮ ಕೆಲಸ ನಾವೇ ಮಾಡಬೇಕು

ಎಲ್ಲಾ ದೈನಂದಿನ ಚಟುವಟಿಕೆಗಳು ಬದಲಾಗಿದೆ. ಈಗ ಯಾರೂ ಕೆಲಸಗಾರರು ಬರುತ್ತಿಲ್ಲ, ನಾವೇ ಎಲ್ಲಾ ಕೆಲಸ ಮಾಡಬೇಕು. ಬೇಗ ಬೇಗ ಆ ಕೆಲಸಗಳನ್ನು ಮುಗಿಸಿ ಪುಸ್ತಕ ಹಿಡಿದುಕೊಂಡು ಕುಳಿತರೆ ಹೆಂಡ್ತಿಗೆ ಸಿಟ್ಟು ಬರುತ್ತದೆ.

ಪ್ರಧಾನಿ ಒಳ್ಳೆಯ ಕೆಲಸ ಮಾಡಿದ್ದಾರೆ

ದಿನಗಳು ಕಳೆಯುತ್ತಾ ಇದೆ. ಎಲ್ಲಾ ನೋಡುತ್ತಾ ಇದ್ದೇನೆ. ಪಾಶ್ಚಾತ್ಯ ದೇಶಗಳು ಅನ್ನಿಸಿಕೊಂಡ ದೇಶಗಳಲ್ಲಿ ಸಾವುಗಳನ್ನು ನೋಡುತ್ತಿದ್ದೇನೆ, ಆದರೆ ಒಂದು ಕೌತುಕ ಅನ್ನಿಸುತ್ತದೆ. ನಮ್ಮ ನರೇಂದ್ರ ಮೋದಿಯವರು ಲಾಕ್‌ಡೌನ್‌ ಮಾಡಿ ಯಶಸ್ವಿಯಾಗಿ ಸಾವುಗಳ ಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಂಡರು. ತುಂಬಾ ಸ್ಪಷ್ಟವಾಗಿ ಅದು ಗೊತ್ತಾಗುತ್ತಿದೆ. ಆದರೆ ಕೆಲವು ಜನರಿಗೆ ಅದು ಅರ್ಥವಾಗುತ್ತಿಲ್ಲ, ಪ್ರಧಾನಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಒಂದು ಒಳ್ಳೆಯ ಮಾತು ಹೇಳುವ ಯೋಗ್ಯತೆ ಇಲ್ಲ, ಉಲ್ಟಾಮಾತನಾಡುತ್ತಾರೆ.

ಮಂಗಳಮುಖಿಯರಿಗೆ ಆಹಾರ ಸಾಮಾಗ್ರಿ, ಕೊರೋನಾ ಸಮರದಲ್ಲಿ ಕೈಜೋಡಿಸಿದ ರಾಧಿಕ ಕುಮಾರಸ್ವಾಮಿ

ಶತ್ರು ಬುದ್ಧಿ ವಿನಾಶಾಯ ಅಂದರೆ ಎರಡರ್ಥ ಇದೆ

ನರೇಂದ್ರ ಮೋದಿಯವರ ಕರೆಯಂತೆ ಮೊನ್ನೆ ಇಡೀ ದೇಶ ದೀಪ ಹಚ್ಚಿದ ದಿನ ಟಿವಿಯಲ್ಲಿ ಒಂದು ಶ್ಲೋಕ ಹಾಕಿದ್ದರು.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದ:

ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ

ಎರಡರರ್ಥ ಇದೆ ಇದಕ್ಕೆ. ಒಂದು ಶತ್ರು ಬುದ್ಧಿ ವಿನಾಶ ಅನ್ನುವಂತದ್ದು. ಇನ್ನೊಂದು ಶತ್ರುತ್ವ ಇಟ್ಟುಕೊಳ್ಳಬೇಕು ಅನ್ನುವ ಬುದ್ಧಿ ಯಾರಿಗಿದೆಯೋ ಅದನ್ನು ದೂರ ಮಾಡುವುದಕ್ಕೆ ಈ ದೀಪವನ್ನು ಹಚ್ಚುತ್ತಿದ್ದೇವೆ ಅಂತ. ಅದನ್ನು ಟಿವಿಯಲ್ಲಿ ನೋಡಿದಾಗ ನನಗೆ ಇದನ್ನು ಎಲ್ಲೋ ಕೇಳಿದ್ದೀನಲ್ಲ ಅನ್ನಿಸಿ ಆಮೇಲೆ ನನ್ನ ಮೂರನೆಯದೋ ನಾಲ್ಕನೆಯದೋ ವಯಸ್ಸಲ್ಲಿ ನನ್ನ ತಾಯಿ ಕಲಿಸಿಕೊಟ್ಟಮೊದಲ ಶ್ಲೋಕ ಇದು. ನಾನು ಕಲಿತ ಮೊದಲ ಶ್ಲೋಕ ಅಂತ ನೆನಪಾಯಿತು.

ಈ ಲಾಕ್‌ ಡೌನ್‌ ಹೊಸ ಪ್ರಯೋಗ

ಸಿಲ್‌್ಕ ರೋಡ್ಸ್‌ ಪುಸ್ತಕದಲ್ಲಿ ಇದ್ದಂತೆ ರೋಗ ಬಂದಾಗ ಜನ ದಬದಬನೆ ಬಿದ್ದು ಸಾಯುತ್ತಾರೆ. ಒಂದು ವರ್ಷ ಎರಡು ವರ್ಷ ಹೀಗೆ ಎಷ್ಟುವರ್ಷ ಅಂತ ಗೊತ್ತಿಲ್ಲ. ಮಕ್ಕಳು, ಬದುಕು ಏನೂ ಇಲ್ಲ, ಆಗೆಲ್ಲಾ ಈ ಥರ ಲಾಕ್‌ಡೌನ್‌ಗಳೆಲ್ಲಾ ಗೊತ್ತಿರಲಿಲ್ಲ. ನಾಗರಿಕತೆ ಇಷ್ಟುಬೆಳೆದಿರಲಿಲ್ಲ, ಆದರೆ ಈಗ ಕಾಲ ಬದಲಾಗಿದೆ, ಆದರೂ ವಿದೇಶಗಳ ನಾಯಕರು ಕೊರೋನಾ ವಿರುದ್ಧ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕು ಅಂತ ನರೇಂದ್ರ ಮೋದಿಯವರನ್ನು ಕೇಳಿಕೊಳ್ಳುತ್ತಿದ್ದಾರೆ. ಕೊರೋನಾ ವಿರುದ್ಧ ಹೋರಾಟವನ್ನು ಮೋದಿ ಎಷ್ಟುಚೆನ್ನಾಗಿ ನಿಭಾಯಿಸಿದರು ಎಂದರೆ ನಾವು ಮೆಚ್ಚಲೇಬೇಕು, ಅಭಿನಂದನೆ ಸಲ್ಲಿಸಲೇಬೇಕು.

ಬದುಕುವ ಆಸೆಯಿಂದ ಒಳಗಿದ್ದೇವೆ

ಪುರಂದರ ದಾಸರ ಸಾಲುಗಳನ್ನು ನೋಡಿ-ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ ಬಿನ್ನಣದ ಮನೆಕಟ್ಟಿಕೋಟೆ ಕೊತ್ತಳವಿಕ್ಕಿ ಚೆನ್ನಿಗನ ಅಸುವಳಿಯೇ ಹೊರಗೆ ಹಾಕುವರು ಹಾಗೆ ಈಗ ಕೆಲವರು ಒಳಗಿದ್ದೇವೆ. ಹೊರಗೆ ಹೋದವರಿಗೆ ಹೊರಗೆ ಹಾಕುತ್ತಾರೆ ಅನ್ನುವ ಭಯ. ಹಾಗಾಗಿ ಒಳಗಿದ್ದೇವೆ. ಬದುಕಬೇಕು ಅನ್ನುವ ಆಸೆ ಎಷ್ಟಿದೆ ಅಂತ ಈಗ ಅರ್ಥವಾಗುತ್ತಿದೆ.

ಹೆಕ್ಕಿ ತಿಂದಾದರೂ ಬದುಕುತ್ತಾನೆ ಮನುಷ್ಯ

ವಿದೇಶದಲ್ಲಿ ಯಾರೋ ಒಬ್ಬ ಅಜ್ಜಿ ಒಬ್ಬ ತರುಣನಿಗಾಗಿ ನಾನು ಬದುಕಿದ್ದು ಸಾಕಷ್ಟಾಯಿತು, ಅವನು ಬದುಕಬೇಕು ಎಂದು ಹೇಳಿ ತನ್ನ ವೆಂಟಿಲೇಟರ್‌ ಬಿಟ್ಟುಕೊಟ್ಟಳಂತೆ. ನಾವು ಹಾಗೆ ಬೇರೆಯವರಿಗಾಗಿ ತ್ಯಾಗ ಮಾಡಲು ರೆಡಿ ಇರುತ್ತೇವಾ..

ನಮ್ಮ ತಾಯಿ ಒಂದು ಮಾತು ಹೇಳುತ್ತಿದ್ದರು - ಬದುಕಬೇಕು ಎನ್ನುವ ಆಸೆ ಇದ್ದರೆ ಅನ್ನ ಇಲ್ಲ ಏನೂ ಇಲ್ಲ ಅಂದರೂ ಕೋಳಿಗಳು ಹೆಕ್ಕಿ ಹೆಕ್ಕಿ ತಿನ್ನುತ್ತವಲ್ಲ, ಹಾಗೇ ಮನುಷ್ಯನೂ ಹೆಕ್ಕಿ ಹೆಕ್ಕಿ ತಿನ್ನಬೇಕು ಅಂತ ಆಸೆ ಪಡುತ್ತಾನೆ ಅಂತ.

ಇದನ್ನು ವಿಪತ್ತು ವೈರಾಗ್ಯ ಅಂತ ಕರೀಬಹುದು

ಜನ ಆಪತ್ತು ಬಂದಾಗ ಮೊದಲು ಸ್ವಲ್ಪ ಭಯದಲ್ಲಿ ಇರುತ್ತಾರೆ. ಚೇತರಿಸಿಕೊಂಡ ಮೇಲೆ ಮತ್ತೆ ಸ್ವಾರ್ಥ, ದುರಾಸೆ ಎಲ್ಲವೂ ಬರುತ್ತವೆ. ಆಸೆ ಬಿಡುವುದು ಸುಲಭವಲ್ಲ. ಆ ಧರ್ಮ ಈ ಧರ್ಮ ಮತ್ತದೇ ರಾಜಕೀಯ, ಮತ್ತದೇ ವ್ಯಾಪಾರ, ಮತ್ತದೇ ಲವ್‌ ಫಾರ್‌ ಲಕ್ಷುರಿ..

Follow Us:
Download App:
  • android
  • ios