ಯುವ ರಾಜ್‌ಕುಮಾರ್‌ ಜನ್ಮದಿನದಂದೇ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೌನ ಮುರಿದಿದ್ದಾರೆ. ಯುವ ಜೊತೆಗಿನ ಆಪ್ತ ಕ್ಷಣಗಳ ಫೋಟೋ ಹಂಚಿಕೊಂಡು ಅವರಿಗೆ ಟಾಂಗ್‌ ಕೊಡುವಂತೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ..

ಯುವರಾಜ್‌ ಕುಮಾರ್‌ ಜನ್ಮದಿನದಂದೇ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೌನ ಮುರಿದಿದ್ದಾರೆ. ಯುವ ಜೊತೆಗಿನ ಆಪ್ತ ಕ್ಷಣಗಳ ಫೋಟೋ ಹಂಚಿಕೊಂಡು ಅವರಿಗೆ ಟಾಂಗ್‌ ಕೊಡುವಂತೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ಅದನ್ನು ಎದುರಿಸುವ ಬಗೆಯ ಬಗ್ಗೆ ಬರೆದಿದ್ದಾರೆ. ಇವರು ಹಂಚಿಕೊಂಡ ಫೋಟೋ ನೋಡಿ ಮತ್ತೆ ಯುವ ಹಾಗೂ ಶ್ರೀದೇವಿ ಒಂದಾಗಿದ್ದಾರೆ ಎಂದೇ ಭಾವಿಸಿ ಸಾಕಷ್ಟು ಮಂದಿ ಶುಭ ಹಾರೈಸಿದ್ದರು. ಆಮೇಲೆ ವಿಷಯ ತಿಳಿದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀದೇವಿ ಮಾತಿನ ಮುಖ್ಯ ಅಂಶಗಳು ಹೀಗಿವೆ;

- ಹೆಣ್ಣುಮಕ್ಕಳನ್ನು ಮದುವೆಗೆ ಸಿದ್ಧಪಡಿಸುವಾಗ ಅವರಿಗೆ ಮನೆ ಬಿಟ್ಟು ಬೇರೆ ಮನೆಗೆ ಹೋಗುವುದನ್ನು ಕಲಿಸುತ್ತೇವೆ. ಆದರೆ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡಲು ಹಿಂಜರಿಯುತ್ತೇವೆ.

- ನೋವು ಮತ್ತು ಕಷ್ಟದ ನಡುವೆಯೂ ಸೋಲೊಪ್ಪದೆ ಹೋರಾಡುತ್ತಿರುವ ಮಹಿಳೆಯರಿಗೆ ನಾನು ಹೇಳೋದು; ಸತ್ಯದ ಜೊತೆಗೆ ನಿಲ್ಲಿ. ಸುಖವಾದ ಸಂಸಾರದ ನಂತರವೂ, ನಿಮ್ಮ ಮೇಲೆ ಯಾರಾದರೂ ಸುಳ್ಳು ಆರೋಪಗಳನ್ನು ಹೊರಿಸಿದರೆ ಎದೆಗುಂದಬೇಡಿ. ತಾಳ್ಮೆಯಿಂದಿರಿ ಮತ್ತು ನಿಮ್ಮ ಮೇಲೆ ನಂಬಿಕೆ ಇರಲಿ.

- ನೀವು ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಬೇಕಾದ ಜವಾಬ್ದಾರಿ ನಿಮ್ಮದಲ್ಲ, ಆರೋಪ ಮಾಡಿದವರದ್ದು. ಮಹಿಳೆಯರನ್ನು ಬಾಯಿ ಮುಚ್ಚಿಸಲು ಸಮಾಜ ಬಳಸುವ ಅತ್ಯಂತ ಕೀಳು ಅಸ್ತ್ರವೆಂದರೆ ‘ಅವಮಾನ’. ನೆನಪಿಡಿ, ನ್ಯಾಯಾಲಯಕ್ಕೆ ಬೇಕಿರುವುದು ಸಾಕ್ಷಿಯೇ ಹೊರತು ಯಾರೋ ಬರೆದ ಅಗ್ಗದ ಕಟ್ಟುಕಥೆಗಳಲ್ಲ.

- ಸೋಷಿಯಲ್ ಮೀಡಿಯಾದಿಂದ ನಿಮ್ಮ ಫೋಟೋ ಅಥವಾ ದಾಖಲೆಗಳನ್ನು ತೆಗೆಯಲು ಬಲವಂತ ಮಾಡಿದರೆ, ಬೆದರಿಕೆ ಹಾಕಿದರೆ ಅಥವಾ ನಿಮಗೆ ಕಾನೂನುಬದ್ಧ ಹಕ್ಕಿಲ್ಲ ಎಂದರೆ ಬಗ್ಗಬೇಡಿ. ಕಾನೂನು ವಿರೋಧಿಸುವುದು ಯಾವುದನ್ನು ಗೊತ್ತೇ? ಮದುವೆಯಾಗಿದ್ದೂ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದನ್ನು ಮತ್ತು ಮನಬಂದಂತೆ ತಿರುಗುವುದನ್ನು.

- ಎಲ್ಲಾ ಗಾಯಗಳೂ ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಮೌನಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

- ಈ ಅನ್ಯಾಯ ನಮ್ಮ ತಲೆಮಾರಿಗೆ ಕೊನೆಯಾಗಲಿ. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಸುರಕ್ಷಿತ ಮತ್ತು ಗೌರವಯುತ ಸಮಾಜವನ್ನು ಕಟ್ಟಿಕೊಡೋಣ. ಮಹಿಳೆಯರನ್ನು ಹಗುರವಾಗಿ ಕಾಣುವ ಮತ್ತು ಅವರಿಗೆ ತೊಂದರೆ ಕೊಡುವ ಈ ಸಮಾಜದ ನಿಲುವನ್ನು ಬದಲಿಸೋಣ.

- ಇದನ್ನೆಲ್ಲ ನಾನು ಶಿಕ್ಷಣದಿಂದಲೋ ಸಮಾಜದಿಂದಲೋ ಕಲಿತಿಲ್ಲ. ಕಷ್ಟದ ಕಾಲದಲ್ಲಿ ನೊಂದು ಬೆಂದು ನಮಗಿಂತ ಮೊದಲು ಹೋರಾಡಿದ ದಿಟ್ಟ ಮಹಿಳೆಯರಿಂದ ಕಲಿತಿದ್ದೇನೆ.