ಹುಚ್ಚ ವೆಂಕಟ್ ಮೇಲೆ ಕೈ ಮಾಡಿದವರು ಕಂಬಿ ಹಿಂದೆ; ಜಗ್ಗೇಶ್ ಧನ್ಯವಾದ!
ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ನಟ ಹುಚ್ಚ ವೆಂಕಟ್ ಹಲ್ಲೆಗೈದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಡ್ಯ ಎಸ್ಪಿಗೆ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ ಮಾಸ್ ನಟ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಲು ಹೋಗಿ, ಈಗ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಹುಚ್ಚ ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವೆಂಕಟ್ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ಕುಡಿದು ಹಣ ಕೇಳಿದ್ದ ವ್ಯಕ್ತಿ ಮೇಲೆಯೇ ಹಲ್ಲೆ ಮಾಡಿದ್ದಾರೆ. ವೆಂಕಟ್ ಮಾಡಿದ್ದು ಸರಿಯಿಲ್ಲ. ಆದರೆ, ನಂತರ ಗುಂಪಾಗಿ ಸೇರಿದ ಸ್ಥಳೀಯರು ವೆಂಕಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ವೈರಲ್ ಆಗಿತ್ತು. ರಾತ್ರೋರಾತ್ರಿ ವೈರಲ್ ಆದ ವಿಡಿಯೋ ನೋಡಿ ಸ್ಟಾರ್ ನಟರು ಹಾಗೂ ಸಾರ್ವಜನಿಕರು ವೆಂಕಟ್ ಮೇಲೆ ಅನುಕಂಪ ತೋರಿದ್ದರು. ವೆಂಕಟ್ ಅವರಿಗೆ ಯಾರೂ ತೊಂದರೆ ನೀಡದಂತೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹುಚ್ಚ ವೆಂಕಟ್ ಮೇಲೆ ಹಲ್ಲೆ ವಿರುದ್ಧ ಧ್ವನಿ ಎತ್ತಿದ ನವರಸನಾಯಕ ಜಗ್ಗೇಶ್!
ಆಪ್ತಬಾಂಧವ ಜಗ್ಗಣ್ಣ:
ಯಾರೇ ಕಷ್ಟದಲ್ಲಿದ್ದರೂ, ಯಾರಿಗಾದರೂ ಮತ್ತೊಬ್ಬರಿಂದ ತೊಂದರೆ ಆಗುತ್ತಿದೆ ಎಂದು ತಿಳಿದರೆ ಅವರ ರಕ್ಷಣೆಗೆ, ಸಹಾಯಕ್ಕೆ ಮೊದಲು ಮುಂದಾಗುವವರು ನಟ ಜಗ್ಗೇಶ್. ಚಿತ್ರರಂಗದ ನಟ-ನಟಿಯರಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಸಹಾಯ ಮಾಡುವುದರಲ್ಲಿ ನವರಸ ನಾಯಕನದ್ದು ಎತ್ತಿದ ಕೈ.
ಸೋಷಿಯಲ್ ಮೀಡಿಯಾದಲ್ಲಿ ಹುಚ್ಚ ವೆಂಕಟ್ ಬಗ್ಗೆ ಹರಿದಾಡುತ್ತಿರುವ ವಿಡಿಯೋ ನೋಡಿ ಜಗ್ಗೇಶ್ ಸಹಾಯ ಮಾಡಲು ಮುಂದಾಗಿದ್ದಾರೆ. ಮಂಡ್ಯ ಎಸ್ಪಿ ಶೋಭಾ ಮೇಡಂ ಅವರ ಸಹಾಯ ಪಡೆದು, ವೆಂಕಟ್ ಮೇಲೆ ಹಲ್ಲೆಗೈದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು. ಹಲ್ಲೆ ಮಾಡಿದ ಆರೋಪಿ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣಾ ಪೋಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಜಗ್ಗೇಶ್ ಈ ಬಗ್ಗೆ ಟ್ಟೀಟ್ ಮಾಡಿದ್ದಾರೆ.
'ವೆಂಕಟ್ ಮೇಲೆ ಕೈ ಮಾಡಿದವರ ಮೇಲೆ #FIR ದಾಖಲು ಮಾಡಿದ ಮಂಡ್ಯ ಎಸ್ಪಿ ಶೋಭಾ ಮೇಡಂ ಅವರಿಗೆ ಕಲಾಪ್ರೇಮಿಗಳ ಧನ್ಯವಾದ ಅರ್ಪಿಸಿ. ನನ್ನ ವೈಯಕ್ತಿಕ ಧನ್ಯವಾದಗಳು, ಸಹೃದಯಿ ದಕ್ಷ ಅಧಿಕಾರಿ ಸಹೋದರಿಗೆ... ' ಎಂದು ಬರೆದುಕೊಂಡಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್ಲೈನ್ಸ್
"