ಹುಚ್ಚ ವೆಂಕಟ್ ಮೇಲೆ ಹಲ್ಲೆ ವಿರುದ್ಧ ಧ್ವನಿ ಎತ್ತಿದ ನವರಸನಾಯಕ ಜಗ್ಗೇಶ್!
ಸ್ಯಾಂಡಲ್ವುಡ್ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಟ್ಟ ವೆಂಕಟ್ ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ಮಾಡಿದ ರಂಪಾಟಕ್ಕೆ ಗೂಸ ತಿಂದಿದ್ದಾರೆ. ಈ ವಿಚಾರದ ಬಗ್ಗೆ ನಟ ಜಗ್ಗೇಶ್ ಧ್ವನಿ ಎತ್ತಿದ್ದಾರೆ...
ಕೊರೋನಾದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ರಸ್ತೆ ವ್ಯಾಪಾರಿಗಳಿಗೆ ಸಹಾಯ ಆಗಬೇಕೆಂದು ಮನೆ ಮನೆಗೂ ಹೋಗಿ ಹಣ ಬೇಡುತ್ತಿರುವ ಹುಚ್ಚ ವೆಂಕಟ್.
ಶ್ರೀರಂಗಪಟ್ಟಣದಲ್ಲಿ ಹಣ ಬೇಡಿ ದೇವಸ್ಥಾನದ ಮೈದಾನದಲ್ಲಿ ಮಲಗುತ್ತಿದ್ದ ವೆಂಕಟ್ ಜನರಿಗೆ ತೊಂದರೆ ನೀಡುತ್ತಿದ್ದಾರೆಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಊರಿಂದ ಹೊರಗೆ ಕಳುಹಿಸಿದ್ದಾರೆ.
ಅದಾದ ನಂತರ ಮಂಡ್ಯಕ್ಕೆ ಹೋಗಿದ್ದ ವೆಂಕಟ್ ಜ್ಯೂಸ್ ಕುಡಿದು ಹಣ ನೀಡದೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ.
ತಕ್ಷಣವೇ ಸ್ಥಳೀಯರು ವೆಂಕಟ್ಗೆ ಗೂಸ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದ ಜಗ್ಗೇಶ್ ವೆಂಕಟ್ ಪರ ನಿಂತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
'ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆಂದು. ಆತನಿಗೆ ಸಹಾಯ ಮಾಡಿ ಆಗದಿದ್ದರೆ ಪೊಲೀಸರನ್ನು ಕರೆಸಿ ಆದರೆ ಹೀಗೆ ಮೃಗೀಯವಾಗಿ ಕೈ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೈ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ ಕೇಳಿದ್ದಾರೆ.
'ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್ ರೀತಿ ಮಾನಸಿಕ ರೋಗಿಯಾಗಿದ್ದರೆ ಅವರ ಮೇಲೆ ಕೈ ಮಾಡಿದರೆ ನಿಮಗೆ ನೋವಾಗದೇ ? ಎಂದು ಪ್ರಶ್ನಿಸಿದ್ದಾರೆ.
'ಒಬ್ಬ ನಟ ಸತ್ತಾಗ ಮರುಗದಿರಿ ಬದುಕಿದ್ದಾಗ ಅವರ ಕೈ ಹಿಡಿದು ಸಹಾಯ ಮಾಡಿ' ಎಂದು ಹೇಳಿದ್ದಾರೆ.
'ಮಾಧ್ಯಮಮಿತ್ರರೇ ದಯಮಾಡಿ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ ಎಂದು ವಿನಂತಿ ಮಾಡುವೆ. ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈ ಮಾಡುವ ಘಟನೆ ಕೊನೆ ಮಾಡಿ'. ಎಂದು ಜಗ್ಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ.