ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ. ಆದರೆ ಸಿನಿಮಾ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರೀ-ರಿಲೀಸ್ ಆಗಲಿದೆ ಎಂಬ ಸುದ್ದಿ ಇದೀಗ ಕೇಳಿಬರುತ್ತಿರುವ ಬೆನ್ನಲ್ಲೇ, ಚಿತ್ರದ ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್ ಅವರ ಸಹೋದರ ಬಾಲಾಜಿ ವೀರಾಸ್ವಾಮಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುವ ಆಸೆ ತಮ್ಮ ಕುಟುಂಬಕ್ಕೂ ಇದೆ. ಆದರೆ ಚಿತ್ರದ ಮೂಲ ನೆಗೆಟಿವ್ಸ್‌ಗಳು ಹಾಳಾಗಿರುವುದರಿಂದ ರೀ-ರಿಲೀಸ್ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಅಗತ್ಯ ಮೂಲಗಳನ್ನು ಪತ್ತೆಹಚ್ಚಿ, ತಾಂತ್ರಿಕವಾಗಿ ಸಿನಿಮಾವನ್ನು ಮರುಸಿದ್ಧಪಡಿಸಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಬಾಲಾಜಿ ತಿಳಿಸಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ಕುಟುಂಬದಿಂದಲೂ ಸ್ಪಂದನೆ

‘ಶಾಂತಿ ಕ್ರಾಂತಿ’ ಸಿನಿಮಾದ ಬಗ್ಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಮತ್ತು ಉತ್ಸಾಹಕ್ಕೆ ಬಾಲಾಜಿ ವೀರಾಸ್ವಾಮಿ ಧನ್ಯವಾದ ತಿಳಿಸಿದ್ದಾರೆ. “‘ಶಾಂತಿ ಕ್ರಾಂತಿ’ ಸಿನಿಮಾಗಾಗಿರಬಹುದು, ನಮ್ಮ ಅಣ್ಣನಿಗಾಗಿರಬಹುದು ಅಥವಾ ನಮಗಾಗಿರಬಹುದು, ನೀವು ತೋರಿಸುತ್ತಿರುವ ಪ್ರೀತಿ ಅಪಾರ. ಅದಕ್ಕೆ ನಾವು ಎಂದೆಂದಿಗೂ ಚಿರಋಣಿಗಳು. ಈ ಪ್ರೀತಿ ವ್ಯಕ್ತವಾಗಲು ಆರಂಭವಾದ ಎರಡು-ಮೂರು ದಿನಗಳಲ್ಲೇ ನಾನು ಮತ್ತು ನಮ್ಮ ಅಣ್ಣ ರೀ-ರಿಲೀಸ್ ಬಗ್ಗೆ ಮಾತನಾಡಿದ್ದೇವೆ. ಅಂದಿನಿಂದಲೇ ನಮ್ಮ ಪ್ರಯತ್ನವೂ ಶುರುವಾಗಿದೆ” ಎಂದು ಅವರು ಹೇಳಿದ್ದಾರೆ.

ಹಾಳಾಗಿವೆ ಚಿತ್ರದ ಮೂಲ ನೆಗೆಟಿವ್ಸ್!

ರೀ-ರಿಲೀಸ್‌ಗೆ ಎದುರಾಗಿರುವ ದೊಡ್ಡ ಸವಾಲಿನ ಬಗ್ಗೆಯೂ ಬಾಲಾಜಿ ಮಾಹಿತಿ ನೀಡಿದ್ದಾರೆ. ‘ಶಾಂತಿ ಕ್ರಾಂತಿ’ ಚಿತ್ರದ ಮೂಲ ನೆಗೆಟಿವ್ಸ್‌ಗಳು ಹಾಳಾಗಿದ್ದು, ಅವುಗಳನ್ನು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸುವುದು ಸುಲಭದ ಕೆಲಸವಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬೇರೆ ಮೂಲಗಳಲ್ಲಿ ಚಿತ್ರದ ನೆಗೆಟಿವ್ಸ್ ಅಥವಾ ಅಗತ್ಯವಿರುವ ಮೂಲ ಪ್ರತಿಗಳು ಲಭ್ಯವಿದೆಯೇ ಎಂಬುದನ್ನು ಹುಡುಕಲಾಗುತ್ತಿದೆ. ಯಾವುದಾದರೂ ಉತ್ತಮ ಮೂಲ ಸಿಕ್ಕರೆ, ಸಿನಿಮಾವನ್ನು ಖಂಡಿತವಾಗಿಯೂ ಮತ್ತೆ ಪ್ರೇಕ್ಷಕರ ಮುಂದೆ ತರುವ ಆಸೆ ಇದೆ ಎಂದು ಹೇಳಿದ್ದಾರೆ.

ರೀ-ರಿಲೀಸ್‌ಗೆ 8-10 ತಿಂಗಳು ಬೇಕಾಗಬಹುದು!

ಅಭಿಮಾನಿಗಳು ಈಗಲೇ ಸಿನಿಮಾ ಮತ್ತೆ ಯಾವಾಗ ತೆರೆಗೆ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ ತಕ್ಷಣವೇ ರೀ-ರಿಲೀಸ್ ಸಾಧ್ಯವಿಲ್ಲ ಎಂಬುದನ್ನು ಬಾಲಾಜಿ ಸ್ಪಷ್ಟಪಡಿಸಿದ್ದಾರೆ. “ನಾಳೆಯೇ ಕೆಲಸ ಆರಂಭಿಸಿದರೂ ಸಿನಿಮಾ ಪೂರ್ಣಗೊಳ್ಳಲು 8ರಿಂದ 10 ತಿಂಗಳು ಅಥವಾ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಬೇಕಾಗಬಹುದು. ಕಲರಿಂಗ್, ಹಾಳಾಗಿರುವ ನೆಗೆಟಿವ್ಸ್‌ಗಳ ದುರಸ್ತಿ, ಮ್ಯೂಸಿಕ್, ರೀ-ರೆಕಾರ್ಡಿಂಗ್, ಎಫೆಕ್ಟ್ಸ್, ಡಿಐ ಹಾಗೂ ಮತ್ತೆ ಸೆನ್ಸಾರ್ ಸೇರಿದಂತೆ ಸಾಕಷ್ಟು ಕೆಲಸಗಳಿವೆ” ಎಂದು ಅವರು ಹೇಳಿದ್ದಾರೆ.

ಹಳೆಯ ಸಿನಿಮಾ… ಹೊಸ ತಂತ್ರಜ್ಞಾನದಲ್ಲಿ!

‘ಶಾಂತಿ ಕ್ರಾಂತಿ’ಯನ್ನು ಕೇವಲ ಹಳೆಯ ಪ್ರತಿಯೊಂದಿಗೆ ರೀ-ರಿಲೀಸ್ ಮಾಡುವುದಲ್ಲ, ಇಂದಿನ ತಾಂತ್ರಿಕ ಗುಣಮಟ್ಟಕ್ಕೆ ತಕ್ಕಂತೆ ಮತ್ತಷ್ಟು ಅದ್ಧೂರಿಯಾಗಿ ಪ್ರೇಕ್ಷಕರಿಗೆ ನೀಡಬೇಕು ಎಂಬುದು ಚಿತ್ರತಂಡದ ಆಶಯ. “ನಮ್ಮ ಅಣ್ಣ ಅದ್ಭುತ ತಾಂತ್ರಿಕ ಗುಣಮಟ್ಟದಲ್ಲಿ ಈ ಸಿನಿಮಾವನ್ನು ಕೊಟ್ಟಿದ್ದರು. ಈಗ ನಿಮ್ಮ ಆಸೆಯಂತೆ ಅದನ್ನು ಮತ್ತೆ ತೆರೆಗೆ ತರಬೇಕಾದರೆ, ಅದೇ ಗುಣಮಟ್ಟವನ್ನು ಉಳಿಸಿಕೊಳ್ಳಬೇಕು. ಇಂದಿನ ಪೀಳಿಗೆಗೆ ಇಷ್ಟವಾಗುವಂತಹ ಸೌಂಡ್ ಅನುಭವ ನೀಡಬೇಕು. ಡಾಲ್ಬಿ, ಡಿಟಿಎಸ್ ಮತ್ತು ಅಟ್ಮಾಸ್‌ನಂತಹ ತಂತ್ರಜ್ಞಾನಗಳಿಗೆ ಅಪ್‌ಗ್ರೇಡ್ ಮಾಡಬೇಕಿದೆ” ಎಂದು ಬಾಲಾಜಿ ತಿಳಿಸಿದ್ದಾರೆ.

‘ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರಿಲೀಸ್’ ಸುದ್ದಿ ಸುಳ್ಳು!

ಇದರ ನಡುವೆ ‘ಶಾಂತಿ ಕ್ರಾಂತಿ’ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರೀ-ರಿಲೀಸ್ ಆಗಲಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೂ ಬಾಲಾಜಿ ವೀರಾಸ್ವಾಮಿ ತೆರೆ ಎಳೆದಿದ್ದಾರೆ. “ಮಾಧ್ಯಮಗಳು, ಅಭಿಮಾನಿಗಳು ಹಾಗೂ ಕಲಾಭಿಮಾನಿಗಳು ಕರೆ ಮಾಡಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ಅದೆಲ್ಲವೂ ಸುಳ್ಳು. ಸದ್ಯಕ್ಕೆ ಅದು ನಮ್ಮ ಕೈಯಲ್ಲಾಗುವುದಿಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಮೊದಲು ಮೂಲ ಪ್ರತಿ ಹುಡುಕಾಟ… ನಂತರವೇ ರೀ-ರಿಲೀಸ್!

ಸದ್ಯ ಚಿತ್ರದ ಮೂಲ ಪ್ರತಿಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ. ಅದು ಸಿಕ್ಕ ನಂತರವೇ ಮುಂದಿನ ಹಂತದ ಕೆಲಸ ಆರಂಭವಾಗಲಿದೆ. ಸಿನಿಮಾ ರೀ-ರಿಲೀಸ್‌ಗೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆಯನ್ನೂ ಅಭಿಮಾನಿಗಳಿಗೆ ತಿಳಿಸಿಯೇ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಬಾಲಾಜಿ ಭರವಸೆ ನೀಡಿದ್ದಾರೆ.

ಹೀಗಾಗಿ ‘ಶಾಂತಿ ಕ್ರಾಂತಿ’ ಮತ್ತೆ ತೆರೆಗೆ ಬರಬೇಕು ಎಂಬ ಕ್ರೇಜಿಸ್ಟಾರ್ ಅಭಿಮಾನಿಗಳ ಬಹುದಿನಗಳ ಆಸೆ ಈಡೇರುವ ಸಾಧ್ಯತೆ ಇದ್ದರೂ, ಅದಕ್ಕೆ ಇನ್ನಷ್ಟು ಸಮಯ ಕಾಯಲೇಬೇಕಾಗಿದೆ. ಸಿನಿಮಾ ಯಾವಾಗ ರೀ-ರಿಲೀಸ್ ಆಗಲಿದೆ ಎಂಬುದಕ್ಕೆ ಸದ್ಯ ಯಾವುದೇ ಅಧಿಕೃತ ದಿನಾಂಕ ಇಲ್ಲ. ಮೂಲ ಪ್ರತಿಗಳು ಸಿಕ್ಕು ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ರೀ-ರಿಲೀಸ್ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.