ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಸ್ಥಾಪಿತವಾಗಿದ್ದ "ಅಶೋಕ ಬ್ಲೇಡ್" ಈಗ "ದಿ ರೈಸ್ ಆಫ್ ಅಶೋಕ" ಆಗಿ ಮರುನಾಮಕರಣಗೊಂಡು ಪುನಃ ಚಿತ್ರೀಕರಣ ಆರಂಭಿಸಿದೆ. ನೀನಾಸಂ ಸತೀಶ್ ನಾಯಕತ್ವದ ಈ ಚಿತ್ರದ ಬಾಕಿ ಭಾಗವನ್ನು ಮನು ಶೇಡ್ಗಾರ್ ನಿರ್ದೇಶಿಸುತ್ತಿದ್ದಾರೆ. ಫೆಬ್ರವರಿ ೧೫ ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಬಂಡಾಯದ ಕಥಾಹಂದರವಿದ್ದು, ಸತೀಶ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ 'ಅಭಿನಯ ಚತುರ' ಖ್ಯಾತಿಯ ಸತೀಶ್ ನೀನಾಸಂ (Sathish Ninasam) ನಟಿಸುತ್ತಿರುವ 'ಅಶೋಕ ಬ್ಲೇಡ್' ಸಿನಿಮಾವೀಗ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದೆ. ಸಿನಿಮಾದ ಶೀರ್ಷಿಕೆ ಬದಲಾವಣೆ ಮಾಡಿಕೊಂಡಿರುವ ಈ ಅಶೋಕ್ ಬ್ಲೇಡ್, ಈಗ 'ದಿ ರೈಸ್ ಆಫ್ ಅಶೋಕ' ಎಂಬ ಹೊಸ ಟೈಟಲ್‌ಗೆ ಬದಲಾಗಿದೆ. ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಈ ಚಿತ್ರ ನಿಂತು ಹೋಯ್ತು ಎಂಬ ಸುದ್ದಿಯಾಗಿತ್ತು. ಆದರೆ ನಟ ನೀನಾಸಂ ಸತೀಶ್ 'ದಿ ರೈಸ್ ಆಫ್ ಅಶೋಕ' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ವಿನೋದ್ ದೊಂಡಾಲೆ ಶೇಕಡ ಎಂಬತ್ತರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು. 
ಚಮಕ್ ,ಕ್ಷೇತ್ರಪತಿ, ಅವತಾರ ಪುರುಷ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್ 'ದಿ ರೈಸ್ ಆಫ್ ಅಶೋಕ'ನಿಗೆ ಉಳಿದ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ಮಚ್ಚು ಹಿಡಿದು ರಗಡ್ ಲುಕ್ ನಲ್ಲಿ ಸತೀಶ್ ನೀನಾಸಂ ಕಾಣಿಸಿಕೊಂಡಿದ್ದಾರೆ. 

ಮೈಸೂರಿನ ಜೋಡಿ ತೆಂಗಿನಮರದ ಬಳಿ ಅಣ್ಣಾವ್ರು ಯಾಕೆ ಬೆಳಿಗ್ಗೆ 4 ಗಂಟಗೆ ಹೋಗ್ತಾ ಇದ್ರು?

ಇದು ರೆಟ್ರೋ ಕಾಲದ ಕಥೆ ಅನ್ನೋದು ಪೋಸ್ಟರ್ ನಲ್ಲಿ ಗೊತ್ತಾಗ್ತಿದೆ. ಬಂಡಾಯದ ಕಥೆಯನ್ನು ಹರವಿಡೋದಿಕ್ಕೆ ಸತೀಶ್ ಟೀಂ ಸಜ್ಜಾಗಿದೆ. 
ಫೆಬ್ರವರಿ ತಿಂಗಳ 15ರಿಂದ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ. ಸತೀಶ್ ವೃತ್ತಿ ಜೀವನದ ಅತ್ಯುತ್ತಮ ಚಿತ್ರವಾಗಿದ್ದು, ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ. 

ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ, ಸತೀಶ್ ನೀನಾಸಂ ರೈಸ್ ಆಫ್ ಅಶೋಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನೀನಾಸಂ ಸತೀಶ್ ನಾಯಕನಾಗಿ ಅಭಿನಯಿಸುತ್ತಿದ್ದು, ಬಿ.ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!

'ದಿ ರೈಸ್ ಆಫ್ ಅಶೋಕ'ನಿಗೆ ಲವಿತ್ ಕ್ಯಾಮೆರಾ ಹಿಡಿಯುತ್ತಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಎಸ್.ವಿ ಸಂಗೀತ ನಿರ್ದೇಶಕ, ಡಾ.ರವಿವರ್ಮಾ ಮತ್ತು ವಿಕ್ರಮ್ ಮೋರ್ ಸಾಹಸ ನಿರ್ದೇಶಕ, ಸಂತೋಷ್ ಶೇಖರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ನಿರ್ದೇಶನದ ಜೊತೆಗೆ ಮನು ಶೆಡ್ಗಾರ್ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.