Kantara; ಕೊನೆಗೂ OTT ರಿಲೀಸ್ ಡೇಟ್ ಬಹಿರಂಗ; ಯಾವಾಗ ಬರ್ತಿದೆ ರಿಷಬ್ ಸಿನಿಮಾ?
ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಒಟಿಟಿ ರಿಲೀಸ್ ಡೇಟ್ ಬಹಿರಂಗವಾಗಿದೆ. ಯಾವಾಗ ಒಟಿಟಿಗೆ ಬರಲಿದೆ ಎನ್ನುವ ಚರ್ಚೆ ಜೋರಾಗಿತ್ತು. ಇದೀಗ ದಿನಾಂಕ ಬಹಿರಂಗವಾಗಿದೆ.
ಕಾಂತಾರ ಸಿನಿಮಾ ಓಟ ಇನ್ನು ಕಡಿಮಯಾಗಿಲ್ಲ. 50 ದಿನಗಳನ್ನು ಪೂರೈಸಿ ಕಾಂತಾರ ಮುನ್ನುಗ್ಗುತ್ತಿದೆ. ಈಗಾಗಲೇ 400 ಕೋಟಿ ರೂಪಾಯಿ ಬಾಚಿಕೊಂಡಿರುವ ಕಾಂತಾರ ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಒಟಿಟಿಗೆ ಬರಲು ಡೇಟ್ ಫಿಕ್ಸ್ ಆಗಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸಿರುವ ಕಾಂತಾರ ಸಿನಿಮಾ ಒಟಿಟಿಯಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಕಾಂತಾರ ಒಟಿಟಿ ಬಿಡುಗಡೆ ದಿನಾಂಕ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಕೊನೆಗೂ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಅಂದಹಾಗೆ ಕಾಂತಾರ ಒಟಿಟಿಗಳ ದೈತ್ಯ ಅಮೆಜಾಮ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಬ್ಲಾಕ್ ಬಸ್ಟರ್ ಹಿಟ್ ಕಾಂತಾರ ಸಿನಿಮಾ ನವೆಂಬರ್ 24ರಂದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಭಾರತ ಸೇರಿದಂತೆ 240 ದೇಶಗಳು ಪ್ರಾಂತ್ಯಗಳಲ್ಲಿನ ಪ್ರೈಂನ ಪ್ರಧಾನ ಸದಸ್ಯರು ನವೆಂಬರ್ 24ರಿಂದ ಪ್ರೈಂ ವಿಡಿಯೊದಲ್ಲಿ ಚಿತ್ರವನ್ನು ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದು.
ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಚಿತ್ರವನ್ನು ಜಗತ್ತಿನಾದ್ಯಂತ ಡಿಜಿಟಲ್ ಪ್ರೀಮಿಯರ್ ಮೂಲಕ ಬಿಡುಗಡೆಗೊಳಿಸುವುದಾಗಿ ಪ್ರೈಂ ವಿಡಿಯೊ ತಿಳಿಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿರುವ ಕಾಂತಾರ ಚಿತ್ರವನ್ನು ಇದೀಗ ನವೆಂಬರ್ 24ರಿಂದ ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಕರ್ನಾಟಕದ ದಕ್ಷಿಣ ಕರಾವಳಿಯ ಕಾಡುಬೆಟ್ಟು ಕಾಡಿನಲ್ಲಿ ವಾಸಿಸುವ ಸಮುದಾಯವೊಂದರ ಸುತ್ತ ಚಿತ್ರಕಥೆಯನ್ನು ಹೆಣೆಯಲಾಗಿದೆ. ಮಾನವ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನು ಇಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ. ಸಮುದಾಯದಲ್ಲಿ ನಡೆಯುವ ಒಂದು ಸಾವಿನಿಂದಾಗಿ ಹಳ್ಳಿ ಜನರು ಹಾಗೂ ದುಷ್ಟ ಶಕ್ತಿಯ ನಡುವೆ ಸಂಘರ್ಷ ಏರ್ಪಡುತ್ತದೆ. ಶಿವ ಎನ್ನುವ ಪಾತ್ರ ಇಲ್ಲಿ ಪ್ರಮುಖವಾಗಿದ್ದು ದುಷ್ಟ ಶಕ್ತಿಯ ವಿರುದ್ಧ ಬಂಡಾಯವೆದ್ದು ಹಳ್ಳಿಯನ್ನು ಹಾಗೂ ಪ್ರಕೃತಿಯನ್ನು ರಕ್ಷಿಸುತ್ತಾನೆ.
ಒಟಿಟಿಯಲ್ಲಿ ಕಾಂತಾರವನ್ನು ಬಿಡುಗಡೆ ಮಾಡುತ್ತಿರುವ ಕುರಿತು ಮಾತನಾಡಿರುವ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ, 'ದೇಶದ ಮೂಲೆಮೂಲೆಗಳಲ್ಲಿನ ಸಿನಿಮಾ ಪ್ರಿಯರು ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ಹೀಗಾಗಿ ನನಗೆ ತುಂಬಾ ಖುಷಿ ಇದೆ. ಜೊತೆಗೆ ಈ ಚಿತ್ರ ಪ್ರೈಂ ವೀಡಿಯೊ ಮೂಲಕ ಜಾಗತಿಕವಾಗಿ ಡಿಜಿಟಲ್ ಪ್ರೀಮಿಯರ್ನಲ್ಲಿ ಬಿಡುಗಡೆಗೊಳ್ಳುತ್ತಿದೆ. ಚಿತ್ರದೆಡೆಗಿನ ನಮ್ಮ ಒಲವು ಹಾಗೂ ಪರಿಶ್ರಮದ ಕಥೆಯನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಜನರಿಗೆ ತಲುಪುವುದಕ್ಕೆ ವೇದಿಕೆ ಸಿಕ್ಕಿರುವುದು ಸಂತೋಷ ತಂದಿದೆ. ಇದು ಸಾರ್ವತ್ರಿಕವಾಗಿ ಆಕರ್ಷಣೆ ಹೊಂದಿದ ಕಥೆಯಾಗಿದ್ದು, ಕಥಾವಸ್ತುವಿನಲ್ಲಿ ಸ್ಥಳೀಯ ಕಂಪಿದೆ. ಚಿತ್ರದ ಕೊನೆಯ ಕ್ಷಣದವರೆಗೂ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಲೇ ಇರುತ್ತದೆ ' ಎಂದರು.
'ಕಾಂತಾರ' ಸಿನಿಮಾ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲು
ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, 'ಹೊಂಬಾಳೆ ಫಿಲ್ಮ್ಸ್ ಮುಖಾಂತರ ನಾವು ಯಾವಾಗಲೂ ಆಕರ್ಷಕವಾದ ಕಥೆಗಳನ್ನು ಅಸಾಮಾನ್ಯ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕೆ ಇಷ್ಟಪಡುತ್ತೇವೆ. ಕಾಂತಾರ ಸಿನಿಮಾ ನಮ್ಮ ಅಂಥ ಪ್ರಯತ್ನಗಳಲ್ಲೊಂದು. ಚಿತ್ರವು ವಿವಿಧ ಹಿನ್ನೆಲೆ ಹಾಗೂ ಪ್ರದೇಶಗಳಿಂದ ಬಂದ ಪ್ರೇಕ್ಷಕರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ರಿಷಬ್ ಹಾಗೂ ಇಡೀ ಚಿತ್ರತಂಡ ಇಂಥದ್ದೊಂದು ಅತ್ಯದ್ಭುತ ಚಿತ್ರವನ್ನು ನಿರ್ಮಿಸಲು ಸಾಕಷ್ಟು ಪರಿಶ್ರಮ ಪಟ್ಟಿದೆ. ಈಗ ಇಂಥ ಅದ್ಭುತವಾದ ಚಿತ್ರವನ್ನು ಪ್ರೈಂ ವಿಡಿಯೊ ಮುಖಾಂತರ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರನ್ನು ತಲುಪಲು ಉತ್ಸುಕರಾಗಿದ್ದೇವೆ ' ಎಂದರು.
ಕರ್ನಾಟಕದಲ್ಲಿ KGF-2 ದಾಖಲೆ ಬ್ರೇಕ್ ಮಾಡಿದ 'ಕಾಂತಾರ'; 400 ಕೋಟಿ ರೂ. ದಾಟಿದ ರಿಷಬ್ ಸಿನಿಮಾ ಕಲೆಕ್ಷನ್
ಕಾಂತಾರ ಬಗ್ಗೆ,
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನಿಮಾ ಮೂಡಿಬಂದಿದೆ.