ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ಕಾದಂಬರಿಕಾರ ಗಜಾನನ ಶರ್ಮಾ ಅವರ ಕಾದಂಬರಿ ಆಧರಿತ ‘ಚೆನ್ನಭೈರಾದೇವಿ’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ಕಾದಂಬರಿಕಾರ ಗಜಾನನ ಶರ್ಮಾ ಅವರ ಕಾದಂಬರಿ ಆಧರಿತ ‘ಚೆನ್ನಭೈರಾದೇವಿ’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ‘ಈ ಸಿನಿಮಾದಲ್ಲಿ ರಮ್ಯಾ ಅವರು ಚೆನ್ನಭೈರಾದೇವಿ ಪಾತ್ರ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಅವರ ಜೊತೆಗೆ ಮಾತುಕತೆ ನಡೆಯಲಿದೆ’ ಎಂದೂ ತಿಳಿಸಿದ್ದಾರೆ.

ರಾಜೇಂದ್ರಸಿಂಗ್‌ ಬಾಬು ನಿರ್ದೇಶನದಲ್ಲಿ ಉಪೇಂದ್ರ, ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜೇಂದ್ರಸಿಂಗ್‌ ಬಾಬು ಮಾತನಾಡಿದರು. ‘ರಕ್ತ ಕಾಶ್ಮೀರ ಚಿತ್ರದಲ್ಲಿ 18 ನಿಮಿಷಗಳ ಸುದೀರ್ಘ ಹಾಡೊಂದಿದೆ. ಇದರಲ್ಲಿ ವಿಷ್ಣುವರ್ಧನ್‌, ಅಂಬರೀಶ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ದರ್ಶನ್‌ ಸೇರಿದಂತೆ 11 ಮಂದಿ ಸ್ಟಾರ್‌ ಕಲಾವಿದರು ಕಾಣಿಸಿಕೊಂಡಿದ್ದಾರೆ. ಅವರೆಲ್ಲ ತಮ್ಮ ಬಿರುದಿಗೆ ತಕ್ಕಂತೆ ಸಂದೇಶ ನೀಡಲಿದ್ದಾರೆ. ಅಂಬರೀಶ್‌ ಬದುಕಲ್ಲಿ ಯಾಕೆ ರೆಬೆಲ್‌ ಆಗಬೇಕು ಅಂತ ಹೇಳಿದರೆ ಪುನೀತ್‌ ಪವರ್‌ ಬಗ್ಗೆ ಮಾತನಾಡಿದ್ದಾರೆ.

ಶೂಟಿಂಗ್‌ ಮಾಡಿದ್ದೇ ಭಿನ್ನ ಅನುಭವ

ಈ ಸಿನಿಮಾ ಭಯೋತ್ಪಾದನೆ ಕುರಿತಾದ ಕಥೆಯಾಗಿದ್ದು, ಇದರಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಉಪೇಂದ್ರ ಅವರಿಗೆಲ್ಲ ಮಾಸ್ಟರ್‌. ರಮ್ಯಾ ಗ್ಲಾಮರಸ್‌ ಆಗಿ ಹಂಟರ್‌ವಾಲಿ ರೀತಿ ಮಿಂಚಿದ್ದಾರೆ. ನಾಗರಹೊಳೆ ಸಿನಿಮಾದಂತೆ ಮಕ್ಕಳು, ದೊಡ್ಡವರು ಜೊತೆಗೆ ಬಂದು ನೋಡುವ ಸಿನಿಮಾ. ದಶಕದ ಹಿಂದೆ ಶ್ರೀನಗರದಲ್ಲಿ ಈ ಸಿನಿಮಾ ಶೂಟಿಂಗ್‌ ಮಾಡಿದ್ದೇ ಭಿನ್ನ ಅನುಭವ. ಕನ್ನಡದಲ್ಲಿ ಇಂಥಾ ಸಿನಿಮಾ ಇನ್ಯಾವತ್ತೂ ಮಾಡೋದಕ್ಕಾಗಲ್ಲ’ ಎಂದು ಹೇಳಿದರು. ಈ ಸಿನಿಮಾ ನ.28ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.