ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿದ್ದರು. ಈ ವೇಳೆ, ಕನಕಪುರದ ಹುಡುಗನನ್ನು ಮದುವೆಯಾಗುವ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? ಸ್ಥಳೀಯರು ಫುಲ್ ಖುಷ್ ಆಗಿದ್ಯಾಕೆ?
ನಿನ್ನೆ ಅರ್ಥಾತ್ ಜನವರಿ 30ರಿಂದ ಕನಕನಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೂರು ದಿನಗಳ ಕನಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬೆಳಿಗ್ಗೆ 5.30ಕ್ಕೆ ಯೋಗಾಸನದಿಂದ ಆರಂಭಗೊಂಡು, ಮ್ಯಾರಥಾನ್ ಓಟ, ಕೇಶ ವಿನ್ಯಾಸ ಸ್ಪರ್ಧೆ ಸೇರಿದಂತೆ ಇನ್ನಿತರ ಸ್ಪರ್ಧೆಗಳು ಹಾಗೂ ಸಾಯಂಕಾಲ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬನ್ನಿ, ನಮ್ಮೂರ ಉತ್ಸವ - ಕನಕೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಇದಾಗಲೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನವನ್ನೂ ನೀಡಿದ್ದಾರೆ.
ರಚಿತಾ ರಾಮ್ ಅತಿಥಿ
ಈ ಉತ್ಸವಕ್ಕೆ ಸಿನಿಮಾ ನಟ-ನಟಿಯರು ಬಂದಿದ್ದು, ಉತ್ಸವಕ್ಕೆ ಇನ್ನಷ್ಟು ಕಳೆ ತಂದಿದ್ದಾರೆ. ಅವರಲ್ಲಿ ಒಬ್ಬರು ರಚಿತಾ ರಾಮ್. ಅಷ್ಟಕ್ಕೂ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachita Ram) ಅವರಿಗೆ ಈಗ 33 ವರ್ಷ. ನಟಿಯ ಮದುವೆಯ ಬಗ್ಗೆ ಸದಾ ಅಭಿಮಾನಿಗಳಿಗೆ ಚಿಂತೆ ಇದ್ದೇ ಇದೆ. ಆದ್ದರಿಂದ ಹೋದಲ್ಲಿ ಬಂದಲ್ಲಿ ಆ ಬಗ್ಗೆ ಪ್ರಶ್ನೇ ಕೇಳಲಾಗುತ್ತದೆ. ಕಳೆದ ಅಕ್ಟೋಬರ್ನಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಚಿತಾಗೆ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ರಚಿತಾ, ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ಯೋಚನೆ ಕೂಡ ಬಂದಿದೆ. ತಂದೆ-ತಾಯಿಯಂದಿರಿಗೂ ಹೇಳಿದ್ದೇನೆ. ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಇಂಥದ್ದೇ ಕ್ವಾಲಿಟಿ ಅಂತೇನೂ ಇಲ್ಲ. ಯಾರನ್ನೇ ಕರೆದುಕೊಂಡು ಬಂದು ಮದುವೆಯಾಗು ಎಂದರೆ ಆಗುತ್ತೇನೆ. ದೇವರು ಯಾರನ್ನು ಕಳಿಸುತ್ತಾನೋ ಅದನ್ನು ನಾನು ಅಕ್ಸೆಪ್ಟ್ ಮಾಡುತ್ತೇನೆ ಎನ್ನುವ ಮೂಲಕ ಮದುವೆ ಹುಡುಗನ ಸಂಪೂರ್ಣ ಜವಾಬ್ದಾರಿಯನ್ನು ಪಾಲಕರ ಮೇಲೆ ಬಿಟ್ಟಿರುವುದಾಗಿ ಹೇಳುವ ಮೂಲಕ ಶಾಕ್ ಕೊಟ್ಟಿದ್ದರು.
ಕನಕಪುರದ ಹುಡುಗ
ಇದೀಗ ಡಿ.ಕೆ.ಶಿವಕುಮಾರ್ ಅವರ ಎದುರೇ ಕನಕಪುರದ ಹುಡುಗನನ್ನು ಮದ್ವೆಯಾಗ್ತಿರೋದಾಗಿ ನಾಚಿಕೆಯಿಂದ ಹೇಳಿದ್ದಾರೆ. ಅಷ್ಟಕ್ಕೂ ಪ್ರತಿ ಬಾರಿಯಂತೆ ಈ ಸಲವೂ ರಚಿತಾ ರಾಮ್ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಕನಕಪುರದ ಹುಡುಗನನ್ನು ಮದ್ವೆಯಾಗ್ತೀರಾ ಕೇಳಿದಾಗ, ರಚಿತ ಜೋರಾಗಿ ನಕ್ಕು, ಓಕೆ ಎಂದಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
ವಿಲನ್ ರೋಲ್
ಅಷ್ಟಕ್ಕೂ ನಟಿ ರಚಿತಾ ರಾಮ್ ಈಚೆಗೆ 'ಕೂಲಿ' ಚಿತ್ರದಲ್ಲಿ ಖಡಕ್ ವಿಲನ್ ಪಾತ್ರ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ರಜನಿಕಾಂತ್, ಉಪೇಂದ್ರ, ನಾಗಾರ್ಜುನ ಸೇರಿದಂತೆ ಘಟಾನುಘಟಿ ತಾರೆಯರು ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ರಚಿತಾ ರಾಮ್, ಕಲ್ಯಾಣಿ ಎಂಬ ಚಾಲಾಕಿ ಪಾತ್ರವನ್ನು ಮಾಡಿ ಭೇಷ್ ಎನ್ನಿಸಿಕೊಂಡಿದ್ದಾರೆ. 'ಕೂಲಿ' (Coolie) ಚಿತ್ರದಲ್ಲಿ ಇವರ ರೋಲ್ ಸಖತ್ ಟ್ವಿಸ್ಟ್ ಮತ್ತು ರೋಚಕ ಟರ್ನ್ಗಳಿಂದ ಕೂಡಿದೆ. ಆರಂಭದಲ್ಲಿ ಒಂದು ಪುಟ್ಟ ಪಾತ್ರ ಏನಿಸಿದರೂ, ಎರಡನೆಯ ಭಾಗದಲ್ಲಿ ಇಡೀ ಸಿನಿಮಾದ ಮೇನ್ ವಿಲನ್ ಎಂಬಂತೆ ಕಲ್ಯಾಣಿ ಪಾತ್ರವನ್ನು ರಚಿಸಿದ್ದಾರೆ ನಿರ್ದೇಶಕರು. ರಚಿತಾ ರಾಮ್ ಕೂಡ ಮೊದಲ ಬಾರಿಗೆ ಬೇರೆ ಥರದ ಇಮೇಜ್ನಲ್ಲಿ ಕಾಣಿಸಿಕೊಂಡಿದ್ದಾರೆ.


