Asianet Suvarna News Asianet Suvarna News

ಕೂಡ್ಲಿಗಿ ವಿಸ್ಮಯ ಕಲ್ಲು ನೋಡಿ ವಾವ್‌ ಎಂದಿದ್ದ ಪುನೀತ್‌ ರಾಜಕುಮಾರ್‌

*  ಪುನೀತ್‌ ನಿಧನ ಉಭಯ ಜಿಲ್ಲೆಯಲ್ಲಿ ನೀರವ ಮೌನ
*  ವಿಜಯನಗರ ಜಿಲ್ಲೆಯಾದ್ಯಂತ ಅಪ್ಪುಗೆ ಶ್ರದ್ಧಾಂಜಲಿ
*  ಗುಡೇಕೋಟೆ ಕರಡಿಧಾಮ ವೀಕ್ಷಣೆ ಮಾಡಿದ್ದ ಪವರ್‌ಸ್ಟಾರ್‌ ಪುನೀತ್‌
 

Puneeth Rajkumar Happy After Saw Kudligi Marvelous Rock grg
Author
Bengaluru, First Published Oct 31, 2021, 10:18 AM IST

ಕೂಡ್ಲಿಗಿ(ಅ.31):  ಸೆಪ್ಟೆಂಬರ್‌ 4ರಂದು ತಾಲೂಕಿನ ಗುಡೇಕೋಟೆ ಕರಡಿಧಾಮದ ಪ್ರದೇಶಕ್ಕೆ ಶೂಟಿಂಗ್‌(shooting) ಉದ್ದೇಶದಿಂದ ಭೇಟಿ ನೀಡಿದ್ದ ಅಪ್ಪು ಅಲ್ಲಿನ ಅರಣ್ಯಪ್ರದೇಶದಲ್ಲಿನ ಅಪರಿಚಿತವಾದ ವಿಸ್ಮಯ ಕಲ್ಲುಗಳನ್ನು(Marvelous Rock) ನೋಡಿ ನಿಬ್ಬೆರಗಾಗಿ ವಾವ್‌ ಸೂಪರ್‌ ಎಂದಿದ್ದರು. ಬಯಲುಸೀಮೆಯಲ್ಲಿ ಇಂತಹ ಸ್ಥಳ ನೋಡಿ ಖುಷಿಯಾಗಿದೆ ಎಂದು ವಿಸ್ಮಯ ಕಲ್ಲುಗಳ ಮುಂದೆ ನಿಂತು ವನ್ಯಜೀವಿ ಸಾಕ್ಷ್ಯಚಿತ್ರದ(Documentary) ನಿರ್ದೇಶಕ ಅಮೋಘ ವರ್ಷ ಅವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಾದ ಸಾಕ್ಷಚಿತ್ರ ಚಿತ್ರಿಕರಣದಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್‌ 4ರಂದು ಶನಿವಾರ ಗುಡೇಕೋಟೆ ಕರಡಿಧಾಮಕ್ಕೆ ಭೇಟಿ ನೀಡಿ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ವನ್ಯಜೀವಿ ಸಾಕ್ಷ್ಯ ಚಿತ್ರದ ನಿರ್ದೆಶಕ ಅಮೋಘವರ್ಷ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ವರ್ಲ್ಡ್‌ ಕರ್ನಾಟಕ(World Karnataka) ಎಂಬ ಹೆಸರಿನ ಸಾಕ್ಷಚಿತ್ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಬಳಿಕ ಕೆಲಹೊತ್ತು ಗುಡೇಕೋಟೆ ಕರಡಿಧಾಮ ವೀಕ್ಷಣೆ ಮಾಡಿದರು.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಗುಡೇಕೋಟೆಯ ಅರಣ್ಯ ಹಾಗೂ ಕರಡಿಧಾಮದ ಕುರಿತು ಮಾತನಾಡಿ, ಇಲ್ಲಿನ ಕರಡಿಧಾಮಕ್ಕೆ ಮೊದಲ ಬಾರಿಗೆ ಬಂದಿದ್ದು ತುಂಬಾ ಖುಷಿಯಾಗಿದೆ. ಬಯಲು ಸೀಮೆಯಲ್ಲಿನ ಈ ಕರಡಿಧಾಮದ ಪ್ರದೇಶದಲ್ಲಿ ಮಲೆನಾಡಿನ ಸೊಬಗು ಕಾಣಬಹುದಾಗಿದೆ ಎಂದಿದ್ದರು. ಕರಡಿಧಾಮದಲ್ಲಿನ ಸಾಕ್ಷ್ಯಚಿತ್ರ ಚಿತ್ರೀಕರಣದ ನಂತರ ಗುಡೇಕೋಟೆ ಸರ್ವೋದಯ ವಸತಿ ಶಾಲೆಗೆ ನಟ ಪುನೀತ ರಾಜಕುಮಾರ್‌ ಭೇಟಿ ನೀಡಿ ನಂತರ ವಿದ್ಯಾರ್ಥಿಗಳೊಂದಿಗೆ(Students) ಭಾಗಿಯಾಗಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಷಯ ಹಂಚಿಕೊಂಡಿದ್ದರು.

ಅಭಿಮಾನಿಗಳ ದಂಡು:

ಚಿತ್ರನಟ ಪುನೀತ್‌ ರಾಜಕುಮಾರ್‌(Puneeth Rajkumar) ಕರಡಿಧಾಮಕ್ಕೆ ಬಂದಿರುವ ವಿಷಯ ತಿಳಿದ ಕೂಡಲೇ ಸುತ್ತಲಿನ ಹತ್ತಾರು ಹಳ್ಳಿಯ ಅಭಿಮಾನಿಗಳು(Fans) ದಂಡು ದಂಡಾಗಿ ಕರಡಿಧಾಮದತ್ತ ದೌಡಾಯಿಸಿದ್ದರು. ಸಂಜೆ ವೇಳೆಗೆ ಕರಡಿಧಾಮದ ಗೆಸ್ಟ್‌ಹೌಸ್‌ಗೆ ಆಗಮಿಸಿದಾಗ ಅಭಿಮಾನಿಗಳು ಸೆಲ್ಫಿಗಾಗಿ(Selfie) ಮುಗಿಬಿದ್ದದರು. ಈ ಸನ್ನಿವೇಶವನ್ನು ನೆನೆದು ಅಭಿಮಾನಿಗಳು ಈಗ ಕಣ್ಣೀರು ಹಾಕುತ್ತಿದ್ದಾರೆ. ಯುವರತ್ನ ಬರೀ ನಟನಾಗಿರದೆ ಪರಿಸರ ಪ್ರೇಮಿಯೂ ಆಗಿದ್ದರು. ಅವರು ಮತ್ತೊಮ್ಮೆ ಕರ್ನಾಟಕದಲ್ಲೇ(Karnataka) ಹುಟ್ಟಿಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಪುನೀತ್‌ ನಿಧನ ಉಭಯ ಜಿಲ್ಲೆಯಲ್ಲಿ ನೀರವ ಮೌನ

ಪವರ್‌ ಸ್ಟಾರ್‌(Power Star) ಪುನೀತ್‌ ರಾಜಕುಮಾರ ನಿಧನ ಹಿನ್ನೆಲೆಯಲ್ಲಿ ವಿಜಯನಗರ(Vijayanagara) ಹಾಗೂ ಬಳ್ಳಾರಿ(Ballari) ಜಿಲ್ಲಾದ್ಯಂತ ನೀರವಮೌನ ಆವರಿಸಿದೆ. ಜಿಲ್ಲೆಯ ಆರೂ ತಾಲೂಕುಗಳಲ್ಲಿ ಪುನೀತ್‌ ಅವರ ಅಭಿಮಾನಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆ(Hosapete) ಸೇರಿದಂತೆ ಹಳ್ಳಿ, ತಾಂಡಾ, ಕ್ಯಾಂಪ್‌, ಕಾಲೋನಿಗಳಲ್ಲೂ ಮೇಣದ ಬತ್ತಿ ಹಚ್ಚಿ ಪುನೀತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಅವರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆ, ಹೂವಿನಹಡಗಲಿ ತಾಲೂಕುಗಳಲ್ಲೂ ಪುನೀತ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶ್ರದ್ಧಾಂಜಲಿ ಸಲ್ಲಿಕೆ:

ನಗರದ ಚಿತ್ತವಾಡ್ಗಿಯ ಸಂತೆಬಯಲು, ಗೋವಿಂದ ನಗರ, ಅಗಸರ ಓಣಿ, ಕೊರವರ ಓಣಿ, ಹಳೇ ಪೊಲೀಸ್‌ ಠಾಣೆ ವೃತ್ತ, ವರಕೇರಿ, ಅಂಬೇಡ್ಕರ್‌ ಸರ್ಕಲ್‌, ಪಟೇಲ್‌ ನಗರ, ರಾಣಿಪೇಟೆ, ಹಂಪಿ ರಸ್ತೆ, ಏಕಲವ್ಯ ವೃತ್ತ, ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಚಿತ್ರಕೇರಿ ಸರ್ಕಲ್‌, ಉಕ್ಕಡಕೇರಿ, ಬಾಣದ ಕೇರಿ ಗರಡಿ, ಹರಿಜನ ಕೇರಿ, ಛಲವಾದಿ ಕೇರಿ, ನೆಹರು ಕಾಲೋನಿ, ಚೆಕ್‌ಪೋಸ್ಟ್‌, ಅಮರಾವತಿ, ಬಳ್ಳಾರಿ ರಸ್ತೆ, ಹೊಸೂರು ಗ್ರಾಮ, ಅನಂತಶಯನ ಗುಡಿ, ಪಾಂಡುರಂಗ ಕಾಲೋನಿ, ಕಮಲಾಪುರ, ಸೀತರಾಂ ತಾಂಡಾ, ಕೆರೆ ತಾಂಡಾ, ಬುಕ್ಕಸಾಗರ, ಹಂಪಿ, ಕಡ್ಡಿರಾಂಪುರ, ಮಲಪನಗುಡಿ, ಕೊಂಡನಾಯಕನ ಹಳ್ಳಿ, ಕಾರಿಗನೂರು, ಇಂಗಳಿಗಿ, ಪಾಪಿನಾಯಕಹಳ್ಳಿ, ವಡ್ರಹಳ್ಳಿ, ಗಾದಿಗನೂರು ಭುವನಹಳ್ಳಿ, ಬುಕ್ಕಸಾಗರ ಹಾಗೂ ವೆಂಕಟಾಪುರ ಗ್ರಾಮಗಳಲ್ಲಿ ಪುನೀತ್‌ ಅವರ ಫ್ಲೆಕ್ಸ್‌ಗಳನ್ನು ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಮಲಾಪುರದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ನಗರದ ಈಶ್ವರ ನಗರ ಇತರೆ ಕಡೆಗಳಲ್ಲಿ ಅಭಿಮಾನಿಗಳು ಅಹೋರಾತ್ರಿ ಭಜನೆ ಮಾಡುವ ಮೂಲಕ ನೆಚ್ಚಿನ ನಟನ ಆತ್ಮಕ್ಕೆ ಶಾಂತಿ ಕೋರಿದರು.

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

ಕರವೇಯಿಂದ ಶ್ರದ್ಧಾಂಜಲಿ:

ಕರವೇ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ನಟ ಪುನೀತ್‌ ರಾಜಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಟ ಪುನೀತ್‌ ಅಗಲಿಕೆಯಿಂದ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಸಂತಾಪ ವ್ಯಕ್ತಪಡಿಸಿದರು.

ಕಾಂಗ್ರೆಸ್‌(Congress) ಮುಖಂಡ ಗುಜ್ಜಲ ನಾಗರಾಜ ಮಾತನಾಡಿ, ಪುನೀತ್‌ ರಾಜಕುಮಾರ್‌ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರದೆ ಸಾಮಾಜಿಕ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟವಾಗಿದೆ ಎಂದು ವಿಷಾದಿಸಿದರು.

ಮುಖಂಡರಾಧ ಮೀರ್‌ ಜಾಫರ್‌, ಅಮೀರ್‌ ಖಾನ್‌, ಎನ್‌. ರಾಮಕೃಷ್ಣ, ಎನ್‌. ಶ್ರೀನಿವಾಸ, ಶಿವಪ್ಪ, ಶೇಖ್‌ ಮೊಹಮ್ಮದ್‌, ಮುನೀರ್‌ ಬಾಷಾ, ಶೇಖರಪ್ಪ, ರುದ್ರಪ್ಪ, ಜೆ.ಲಿಂಗಪ್ಪ ಹಾಗೂ ಅನೀಲ್‌ ಕುಮಾರ್‌ ಮತ್ತಿತರರಿದ್ದರು.

ಬ್ಲಾಕ್‌ ಕಾಂಗ್ರೆಸ್‌ನಿಂದ:

ನಟ ಪುನೀತ್‌ ರಾಜಕುಮಾರ್‌ ಅವರ ನಿಧನದ ಹಿನ್ನೆಲೆಯಲ್ಲಿ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮೇಣದಬತ್ತಿ ಮೆರವಣಿಗೆ ನಡೆಯಿತು. ಮುಖಂಡರಾದ ಎಚ್‌.ಎನ್‌. ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ ನಾಗರಾಜ ಮತ್ತಿತರರಿದ್ದರು. ನಗರದಲ್ಲಿ ಆರ್ಯ ಈಡಿಗ ಸಮಾಜ, ನಗರದ ಶಂಕರ ಆನಂದ್‌ ಸಿಂಗ್‌ ಸರ್ಕಾರಿ ಪದವಿ ಕಾಲೇಜ್‌ನಲ್ಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
 

Follow Us:
Download App:
  • android
  • ios