ನರೇಶ್‌ ಜೊತೆಗಿನ ಸಂಬಂಧದ ಕುರಿತು ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ

ತೆಲುಗು ನಟ ನರೇಶ್‌ ಹಾಗೂ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ನಡುವಿನ ಸಂಬಂಧ ಹಾಗೂ ಈ ಕುರಿತು ನರೇಶ್‌ ಪತ್ನಿ ರಮ್ಯಾ ಹೇಳಿಕೆಗಳ ಬಗ್ಗೆ ಕಳೆದೊಂದು ವಾರದಿಂದ ಚರ್ಚೆ ನಡೆಯುತ್ತಿವೆ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಜೋರು ಸದ್ದು ಮಾಡುತ್ತಿರುವ ಈ ವಿಚಾರದ ಕುರಿತು ಪವಿತ್ರಾ ಲೋಕೇಶ್‌ ಸುವರ್ಣ ನ್ಯೂಸ್‌ ಜತೆಗೆ ಆಡಿದ ಮಾತುಗಳು ಇಲ್ಲಿವೆ.

Add Asianetnews Kannada as a Preferred SourcegooglePreferred

ನಾನು ಮದುವೆಯೇ ಆಗಿಲ್ಲ: ನರೇಶ್‌ ಪತ್ನಿ ರಮ್ಯಾ ಅವರ ಕುಟುಂಬ ಕಲಹದಲ್ಲಿ ನನ್ನ ಹೆಸರು ತೆಗೆದುಕೊಂಡು ಬರುತ್ತಿದ್ದಾರೆ. ನಾನು ಸುಚೇಂದ್ರ ಪ್ರಸಾದ್‌ ಅವರಿಗೆ ಡಿವೋರ್ಸ್‌ ಕೊಡದೆ ಅವರನ್ನು ಬಿಟ್ಟು ನರೇಶ್‌ ಅವರನ್ನು ಮದುವೆ ಆಗಿದ್ದೇನೆ ಎನ್ನುತ್ತಿದ್ದಾರೆ. ನಾನು ಸುಚೇಂದ್ರ ಪ್ರಸಾದ್‌ ಅವರನ್ನು ಮದುವೆಯೇ ಆಗಿಲ್ಲ. ಮದುವೆ ಆಗದೆ ಇರೋ ವ್ಯಕ್ತಿಗೆ ನಾನು ಹೇಗೆ ಡಿವೋರ್ಸ್‌ ಕೊಡಲಿ?

11 ವರ್ಷಗಳಿಂದ ಜತೆಗಿದ್ವಿ: ನಾನು ಮತ್ತು ಸುಚೇಂದ್ರ ಪ್ರಸಾದ್‌ ಮದುವೆ ಆಗದೇ 11 ವರ್ಷಗಳಿಂದ ಜತೆಗೆ ವಾಸಿಸುತ್ತಿದ್ದದ್ದು ನಿಜ. ಐದಾರು ವರ್ಷಗಳಿಂದ ಅವರಿಂದ ದೂರ ಇದ್ದೇನೆ. ಅದು ನನ್ನ ವೈಯಕ್ತಿಕ ಹಾಗೂ ಕುಟುಂಬದ ವಿಚಾರ. ನರೇಶ್‌ ಹಾಗೂ ರಮ್ಯಾ ಅವರ ಕಲಹದಲ್ಲಿ ನನ್ನ ಹೆಸರು ಬರುತ್ತಿರುವುದಕ್ಕೆ ಇಲ್ಲಿ ಬಂದು ಪ್ರತಿಕ್ರಿಯೆ ನೀಡಬೇಕಾಯ್ತು.

Exclusive: ನನಗೆ ರಕ್ಷಣೆ ಬೇಕು, ನನ್ನ ಜೀವನ ಹಾಳಾಗಿದೆ- ಪವಿತ್ರಾ ಲೋಕೇಶ್

ಮದುವೆ ಆಗದಿರುವುದಕ್ಕೆ ಅವರೇ ಕಾರಣ: ನಾನು ಹಾಗೂ ಸುಚೇಂದ್ರ ಪ್ರಸಾದ್‌ ಮದುವೆ ಆಗದೆ ಇರೋದಕ್ಕೆ ಸುಚೇಂದ್ರ ಪ್ರಸಾದ್‌ ಅವರೇ ಕಾರಣ. ಅವರು ಯಾವ ತೀರ್ಮಾನವೂ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಿತ್ತು. ಹೀಗೆ 11 ವರ್ಷ ಜತೆಗೆ ಕೆಳೆದಿದ್ದೇವೆ.

ದುಡ್ಡಿಗಾಗಿ ಯಾರೋ ಹಿಂದೆ ಹೋಗುವ ವ್ಯಕ್ತಿತ್ವ ನನ್ನದಲ್ಲ: ದುಡ್ಡಿನಾಸೆಗೆ ನರೇಶ್‌ ಹಿಂದೆ ಹೋಗಿದ್ದೇನೆ ಅಥವಾ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಸುಚೇಂದ್ರ ಪ್ರಸಾದ್‌ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಹಾಗೊಂದು ವೇಳೆ ದುಡ್ಡು, ಆಸೆಗಾಗಿ ಬೇರೆ ನಟರ ಹಿಂದೆ ಹೋಗುವವಳೇ ಆಗಿದ್ದರೆ 11 ವರ್ಷಗಳ ಕಾಲ ಸುಚೇಂದ್ರ ಪ್ರಸಾದ್‌ ಜತೆಗೆ ಇರುತ್ತಿರಲಿಲ್ಲ. ನಾನು ಅವರೊಂದಿಗಿದ್ದಾಗ ಅವರ ಬಳಿ ಏನೂ ಇರಲಿಲ್ಲ. ಸುಚೇಂದ್ರ ಪ್ರಸಾದ್‌ ಅವರ ಬಗ್ಗೆ ಗೌರವ ಇಟ್ಟುಕೊಂಡೇ ಈ ಮಾತು ಹೇಳುತ್ತಿದ್ದೇನೆ.