ಪ್ರತಿಯೊಬ್ಬ ನಿರ್ಮಾಪಕರು ಸಿನಿಮಾ ಮಾಡುವಾಗ ಇಂತಿಷ್ಟು ಸಮಯ, ಬಜೆಟ್ ಇಟ್ಟಿರುತ್ತಾರೆ. ಆದರೆ ಈ ಚಿತ್ರಕ್ಕೆ ಎಲ್ಲವೂ ಮೀರಿ ಹೋಗಿದೆ. ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕರಾದ ಕೆ. ವೆಂಕಟ್ ನಾರಾಯಣ್ ಹೀಗೆ ಹೇಳಿದ್ದು ಜೋಗಿ ಪ್ರೇಮ್.
‘ಪ್ರತಿಯೊಬ್ಬ ನಿರ್ಮಾಪಕರು ಸಿನಿಮಾ ಮಾಡುವಾಗ ಇಂತಿಷ್ಟು ಸಮಯ, ಬಜೆಟ್ ಇಟ್ಟಿರುತ್ತಾರೆ. ಆದರೆ ಈ ಚಿತ್ರಕ್ಕೆ ಎಲ್ಲವೂ ಮೀರಿ ಹೋಗಿದೆ. ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕರಾದ ಕೆ. ವೆಂಕಟ್ ನಾರಾಯಣ್. ಅವರ ಧೈರ್ಯ ಮತ್ತು ಪ್ಯಾಷನ್ನಿಂದ ಈ ಸಿನಿಮಾ ಆಗಿದೆ’. ಹೀಗೆ ಹೇಳಿದ್ದು ಜೋಗಿ ಪ್ರೇಮ್. ‘ಕೆಡಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಅವರು, ‘ಕೆಡಿ ಚಿತ್ರವೇ ಒಂದು ಟ್ರೇಲರ್ನ ಹಾಗಿದೆ’ ಎಂದರು.
ಬಹುತೇಕ ಇಡೀ ತಂಡದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವ ನಿರಾಳತೆ ಕಾಣುತ್ತಿತ್ತು. ರಕ್ಷಿತಾ ಪ್ರೇಮ್, ‘ಎಲ್ಲರಿಗೂ ಇದೊಂದು ತ್ರಾಸದಾಯಕ ಪಯಣವಾಗಿತ್ತು. ಬಿಡುಗಡೆ ದಿನ ಬಹುಶಃ ನಾನು ಅಳುತ್ತೇನೆ’ ಎಂದರು. ರಮೇಶ್ ಅರವಿಂದ್ ಅವರು ಪ್ರೇಮ್ ತಾಳ್ಮೆಯನ್ನು ಹೊಗಳುತ್ತಾ, ‘ಮೂರು ವರ್ಷವನ್ನು ಒಂದು ಚಿತ್ರಕ್ಕೆ ಕೊಡುವುದು, ಅಷ್ಟು ಸಮಯ ಇಡೀ ತಂಡ ಜೊತೆಗಿಟ್ಟುಕೊಳ್ಳುವುದು ಬಹಳ ಕಷ್ಟ. ಅದಕ್ಕೆ ಕೆವಿಎನ್ ಸಪೋರ್ಟ್ ಅದ್ಭುತ. ಇಡೀ ತಂಡ ಸೊಗಸಾಗಿ ಕೆಲಸ ಮಾಡಿದೆ’ ಎಂದರು.
ಪ್ರೇಮ್ ಬಹಳ ಕಷ್ಟ ಪಟ್ಟಿದ್ದಾರೆ
ಧ್ರುವ ಸರ್ಜಾ, ‘ನಿರ್ದೇಶಕ ಪ್ರೇಮ್ ಈ ಚಿತ್ರಕ್ಕಾಗಿ ಬಹಳ ಕಷ್ಟ ಪಟ್ಟಿದ್ದಾರೆ. ಅವರ ಕಷ್ಟ ಸಿನಿಮಾದಲ್ಲಿ ಕಾಣಿಸುತ್ತದೆ. ನಮ್ಮ ನಿರ್ಮಾಪಕರು ಕತೆಯನ್ನು ನಂಬಿ ಸಿನಿಮಾ ಮಾಡಿದ್ದಾರೆ. ಪ್ರೇಕ್ಷಕರು ನಮಗಾಗಿ ನಿಮ್ಮ 2 ಗಂಟೆ ಇಪ್ಪತ್ತು ನಿಮಿಷ ಕೊಟ್ಟು ಈ ಸಿನಿಮಾ ನೋಡಿ’ ಎಂದರು.
ದತ್ತಣ್ಣ ಮಾತನಾಡಿ, ‘ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ನಾವು ಅಂಥಾ ಒಳ್ಳೆಯ ಸಿನಿಮಾಗಳನ್ನು ಕೊಡುವುದು ನಮ್ಮ ಜವಾಬ್ದಾರಿ. ಪ್ರೇಮ್ ಅದನ್ನು ಸರಿಯಾಗಿ ನಿಭಾಯಿಸಿದ್ದಾರೆ ಅಂದುಕೊಳ್ಳುತ್ತೇನೆ’ ಎಂದರು. ನಾಯಕ ನಟಿ ರೀಷ್ಮಾ ನಾಣಯ್ಯ, ನಿರ್ಮಾಪಕರಾದ ಕೆ ವೆಂಕಟ್ ನಾರಾಯಣ್, ಕೆವಿಎನ್ ಸಂಸ್ಥೆಯ ಸುಪ್ರೀತ್, ಅರ್ಜುನ್ ಜನ್ಯಾ ಇದ್ದರು.


