Boss Movie: ಬಾಸ್ ಸಿನಿಮಾ ರಿಲೀಸ್ ಮಾಡಬೇಡಿ ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಕರ್ನಾಟಕ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ವಜಾ ಮಾಡಿದೆ. ಹೀಗಾಗಿ ಇಂದಿನಿಂದ ಸಿನಿಮಾ ರಿಲೀಸ್ ಮಾಡಬಹುದು.
‘ಬಾಸ್’ ಚಲನಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದ್ದು, ‘ಬಾಸ್’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ. ಈ ಮೂಲಕ ಸುಮಾರು ಒಂದೂವರೆ ತಿಂಗಳಿನಿಂದ ನಡೆದಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದ್ದು, ‘ಬಾಸ್’ ಚಿತ್ರತಂಡಕ್ಕೆ ಮಹತ್ವದ ಜಯ ದೊರೆತಿದೆ.
ಹೀರೋ ತನುಷ್ ಶಿವಣ್ಣ ಹೇಳಿದ್ದೇನು?
ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ, ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕರಾದ ಲವಾ ವಿ ಸಂತೋಷ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ, “ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದರು.
ನಿರ್ದೇಶಕ ಲವಾ ವಿ ಏನಂದ್ರು?
ನಿರ್ದೇಶಕ ಲವಾ ವಿ ಮಾತನಾಡಿ, “ಸುಮಾರು ಒಂದೂವರೆ ತಿಂಗಳಿನಿಂದ ನ್ಯಾಯಾಲಯದಲ್ಲಿ ನಿರಂತರ ಕಾನೂನು ಹೋರಾಟ ನಡೆಸಿದ್ದೇವೆ. ಇಂದು ಸತ್ಯ ಮತ್ತು ನ್ಯಾಯಕ್ಕೆ ಜಯ ದೊರೆತಿದೆ. ಭಾರತದ ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಮಗೆ ಅಚಲ ನಂಬಿಕೆ ಇದೆ. ನ್ಯಾಯ ಎಲ್ಲರಿಗೂ ಒಂದೇ. ನ್ಯಾಯಾಂಗದ ಮೇಲೆ ನಮ್ಮ ಗೌರವ ಮತ್ತು ವಿಶ್ವಾಸ ಇನ್ನಷ್ಟು ಗಟ್ಟಿಯಾಗಿದೆ. ಭಾರತದ ಕಾನೂನನ್ನು ಗೌರವಿಸೋಣ ಹಾಗೂ ಪ್ರೀತಿಸೋಣ,” ಎಂದು ಹೇಳಿದರು.
ಲವಾ ಕೂಡ, “ಈ ಕಾನೂನು ಹೋರಾಟದಿಂದ ನಮಗೆ ಸಾಕಷ್ಟು ಸಮಯ ವ್ಯರ್ಥವಾಗಿದ್ದು, ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವೂ ಉಂಟಾಗಿದೆ. ಆದರೂ ಯಾರ ಮೇಲೂ ದ್ವೇಷವಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರವೇ ಎಲ್ಲ ಸಂಕಷ್ಟಗಳಿಂದ ಹೊರಬಂದು, ಅವರಿಗೆ ದೇವರು ಇನ್ನಷ್ಟು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇವೆ. ಯಾರಿಗೂ ಕೆಟ್ಟದನ್ನು ನಾವು ಬಯಸುವುದಿಲ್ಲ” ಎಂದು ತಿಳಿಸಿದರು.
ಸತ್ಯ ಗೆದ್ದಾಯ್ತು!
ಸಿನಿಮಾ ಬಿಡುಗಡೆ ತಡೆಯುವ ಉದ್ದೇಶದಿಂದ ಕೆಲವರು ಸುಳ್ಳು ಮಾಹಿತಿಗಳನ್ನು ಹರಡಲು ಪ್ರಯತ್ನಿಸಿದ್ದರೂ, ಅಂತಿಮವಾಗಿ ಸತ್ಯವೇ ಗೆದ್ದಿದೆ ಎಂದು ಚಿತ್ರತಂಡ ತಿಳಿಸಿದೆ. “ನಮ್ಮ ವಿರುದ್ಧ ತಪ್ಪು ಮಾಹಿತಿ ಹರಡಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಈಗ ನಮ್ಮ ಸಂಪೂರ್ಣ ಗಮನ ಪ್ರೇಕ್ಷಕರಿಗೆ ಉತ್ತಮ ಚಿತ್ರವನ್ನು ತಲುಪಿಸುವುದರ ಮೇಲಿದೆ,” ಎಂದು ಹೇಳಿದೆ.
‘ಬಾಸ್’ ಸಿನಿಮಾ ಇಂದು ಸಂಜೆದಿಂದ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದ್ದು, ಜೊತೆಗೆ ಮುಂಬೈ ಹಾಗೂ ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿಯೂ ಪ್ರದರ್ಶನ ಆರಂಭವಾಗಲಿದೆ. ತನುಷ್ ಸಿನಿಮಾಸ್ ನಿರ್ಮಾಣದ ಈ ಚಿತ್ರವು ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.


