ಇತ್ತೀಚೆಗೆ 'ಕರಾವಳಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಕೆಲವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಏನಿದು ಪ್ರಕರಣ? ಈ ಸ್ಟೋರಿ ಓದಿ
ಬೆಂಗಳೂರು: ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ತಂಡದಲ್ಲಿ ಬಿರುಕು ಮೂಡಿದ್ದು, ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಡೆದ ಗಲಾಟೆ ಸಂಬಂಧ ನಟ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?
ಇತ್ತೀಚೆಗೆ 'ಕರಾವಳಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಕೆಲವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಗುಂಪು ಕಟ್ಟಿಕೊಂಡು ಬಂದಿದ್ದ ಇವರು, ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಅಲ್ಲಿದ್ದ ಸಿಬ್ಬಂದಿಗೆ ತೊಂದರೆ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ.
ಮೂವರ ವಿರುದ್ಧ ಕೇಸ್ ದಾಖಲು
ನಿರ್ದೇಶಕ ಗುರುದತ್ ಗಾಣಿಗ ನೀಡಿದ ದೂರಿನ ಅನ್ವಯ, ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಎಂಬುವರ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 352, 292 ಮತ್ತು 3(5) ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಈ ಗಲಾಟೆ ಬಗ್ಗೆ ನಿರ್ದೇಶಕರು ಗಂಭೀರ ಆರೋಪ ಮಾಡಿದ್ದಾರೆ. ಗಲಾಟೆ ಮಾಡಿದವರು ಕೇವಲ ಅಭಿಮಾನಿಗಳಲ್ಲ, ಬದಲಾಗಿ ಅವರು ನಟ ಪ್ರಜ್ವಲ್ ದೇವರಾಜ್ ಅವರ ಜೊತೆ ಕೆಲಸ ಮಾಡುವವರು ಮತ್ತು ಅವರ ಅಸಿಸ್ಟೆಂಟ್ಗಳಾಗಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಪ್ರಜ್ವಲ್ ದೇವರಾಜ್ ಅವರಿಗೆ ಇವರು ಸಹಾಯಕವಾಗಿ ಕೆಲಸ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವ್ಯವಹಾರದ ಕಿರಿಕ್ ಕಾರಣವೇ?
ನಟ ಪ್ರಜ್ವಲ್ ದೇವರಾಜ್ ಅವರು ಉದ್ದೇಶಪೂರ್ವಕವಾಗಿಯೇ ಈ ಗಲಾಟೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದ ವ್ಯವಹಾರಕ್ಕೆ (Business) ಸಂಬಂಧಿಸಿದಂತೆ ನಿರ್ಮಾಣ ತಂಡ ಹಾಗೂ ನಟನ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ವ್ಯವಹಾರದಲ್ಲಿ ವ್ಯತ್ಯಾಸವಾಗಿದ್ದಕ್ಕೆ ಪ್ರಜ್ವಲ್ ಅವರೇ ಈ ವ್ಯಕ್ತಿಗಳನ್ನು ಕಳುಹಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದ್ದ 'ಕರಾವಳಿ' ಸಿನಿಮಾ ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ನಟ ಪ್ರಜ್ವಲ್ ದೇವರಾಜ್ ಅವರ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.


