Rishab Shetty: ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟ 'ಕಾಂತಾರ' ಸ್ಟಾರ್, ಏನದು?
ಕನ್ನಡದ ಖ್ಯಾತ ನಟ, ನಿರ್ದೇಶಕ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.
ಕಾಂತಾರ ಸಿನಿಮಾ ಮೂಲಕ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಗಳಿಸಿರುವ ನಟ ರಿಷಬ್ ಶೆಟ್ಟಿ ಭಾರತದ ಬಹುಬೇಡಿಕೆಯ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ-2ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿರುವ ರಿಷಬ್ ಶೆಟ್ಟಿ ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸುವ ತಯಾರಿಯಲ್ಲಿದ್ದಾರೆ. ಈ ನಡುವೆ ರಿಷಬ್ ಶೆಟ್ಟಿ ಹೊಸ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಫಿಲ್ಮ್ ಸಿಟಿ ಬೆಂಗಳೂರಿನಲ್ಲಿಯೇ ನಿರ್ಮಾಣವಾಗಬೇಕು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕೇಂದ್ರ ಸರ್ಕಾರವು ಆಯೋಜಿಸಿದ್ದ ಭಾರತದ ಯುವಜನತೆಯ ಕುರಿತಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಸಾರ ಮತ್ತು ಮಾಹಿತಿ ಸಚಿವಾಲಯವು ಆಯೋಜಿಸಿದ್ದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶಕ್ಕೆ ಪ್ಯಾನೆಲಿಸ್ಟ್ ಆಗಿ ರಿಷಬ್ ಅವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಮಾತನಾಡಿದ ಕಾಂತಾರ ಸ್ಟಾರ್ ಕನ್ನಡ ಚಿತ್ರೋದ್ಯಮ ಸರ್ಕಾರದಿಂದ ಹೇಗೆ ಬೆಂಬಲವನ್ನು ಪಡೆಯುತ್ತಿದೆ ಎಂಬುದರ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಮನರಂಜನೆ ಮತ್ತು ಸಿನಿಮಾದ ಏಕೈಕ ಪ್ರತಿನಿಧಿಯಾಗಿದ್ದರು ರಿಷಬ್. ತಮ್ಮ ಮನವಿಯನ್ನು ಮುಂದಿಟ್ಟುಕೊಂಡ ರಿಷಬ್, 'ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲಾಗಿದೆ. ನಮಗೆ ಸರ್ಕಾರದಿಂದ ಬೆಂಬಲ ಸಿಗುತ್ತಿದೆ. ಆದರೆ ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ಅವಶ್ಯಕತೆಯಿದೆ' ಎಂದು ಹೇಳಿದರು. ಫಿಲ್ಮ ಸಿಟಿ ಕನ್ನಡ ಚಿತ್ರರಂಗದ ದೊಡ್ಡ ಕನಸಾಗಿದೆ. ಆದರೆ ಇದಿನ್ನೂ ಕನಸಾಗೆ ಉಳಿದಿರುವುದು ಬೇಸರ ಸಂಗತಿ. ಫಿಲ್ಮ್ ಸಿಟಿ ಎಲ್ಲಿ ಆಗಬೇಕು, ಬೆಂಗಳೂರು, ಮೈಸೂರು ಹೀಗೆ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ರಿಷಬ್ ಶೆಟ್ಟಿ ಬೆಂಗಳೂರಿನಲ್ಲಿ ಆಗಲಿ ಎಂದು ಮನವಿ ಮಾಡಿದ್ದಾರೆ.
ಮುದ್ದಾದ ಕುಟುಂಬದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ ಪತ್ನಿ; ಕರ್ಲಿ ಫ್ಯಾಮಿಲಿ ಎಂದ ಫ್ಯಾನ್ಸ್
ಕಾಂತಾರ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ ಕಾಂತಾರ ಕನ್ನಡದ ಎರಡನೇ ಸಿನಿಮಾವಾಗಿದೆ. ಈ ಸಿನಿಮಾ ಸೂಪರ್ ಸಕ್ಸಸ್ ಬಳಿಕ ಕರ್ನಾಟಕ ಸರ್ಕಾರ 60 ವರ್ಷಕ್ಕಿಂತ ಮೇಲ್ಪಟ್ಟ ಭೂತ ಕೋಲ ಕಲಾವಿದರಿಗೆ ಮಾಸಿಕ ಭತ್ಯೆಯನ್ನು ಘೋಷಿಸಿತು. ಕಾಂತಾರ ಸಿನಿಮಾ ಡಿವೈನ್ ಬ್ಲಾಕ್ಬಸ್ಟರ್ ಚಿತ್ರವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾ ಗಣ್ಯರು ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಕಾಂತಾರ-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಸಿನಿಮಾಗಳ ಪ್ರಾಜೆಕ್ಟ್ಗಳನ್ನು ಬದಿಗಿಟ್ಟು ಕಾಂತಾರ -2 ಮೇಲೆ ಗಮನ ಹರಿಸಿದ್ದಾರೆ. ಸದ್ಯದಲ್ಲೇ ಕಾಂತಾರ-2 ಶೂಟಿಂಗ್ಗೆ ಹೊರಡಲಿದೆ ತಂಡ. ಮೊದಲ ಭಾಗದಷ್ಟೆ 2ನೇ ಭಾಗ ಕೂಡ ಸೂಪರ್ ಸಕ್ಸಸ್ ಕಾಣುತ್ತಾ, ಈ ಬಾರಿ ರಿಷಬ್ ಯಾವ ವಿಚಾರ ಹೇಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ ರಿಷಬ್ ಶೆಟ್ಟಿ;ಇದು ಕೆರಾಡಿ ಸ್ಟುಡಿಯೋಸ್!
ಕೆರಾಡಿ ಹೆಸರಿನಲ್ಲಿ ಹೊಸ ಉದ್ಯಮ
ರಿಷಬ್ ಶೆಟ್ಟಿ ಕೆರಾಡಿ ಸ್ಟುಡಿಯೋಸ್ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ರಿಷಬ್ ಪೋಸ್ಟ್ ಶೇರ್ ಮಾಡಿದ್ದರು. 'ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ. ‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ' ಎಂದು ರಿಷಬ್ ಪತ್ರ ಹಂಚಿಕೊಂಡಿದ್ದರು.