'ಕಾಂತಾರ' ಸಕ್ಸಸ್ ಬಳಿಕ ಬಾಲಿವುಡ್ಗೆ ಹಾರಿದ ಸಪ್ತಮಿ ಗೌಡ; ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಸಿನಿಮಾದಲ್ಲಿ ನಟನೆ
ಕಾಂತಾರ ಸೂಪರ್ ಸಕ್ಸಸ್ ಬೆನ್ನಲ್ಲೇ ನಟಿ ಸಪ್ತಮಿ ಗೌಡ ಬಾಲಿವುಡ್ಗೆ ಹಾರಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
![Kantara fame Sapthami Gowda to debut in Hindi with Vivek Agnihotri's The Vaccine War sgk Kantara fame Sapthami Gowda to debut in Hindi with Vivek Agnihotri's The Vaccine War sgk](https://static-ai.asianetnews.com/images/01gpn87amnnawb0vadb1pj6w17/saptami_363x203xt.jpg)
ಸಪ್ತಮಿ ಗೌಡ, ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದ ಸಪ್ತಮಿ ಗೌಡ ಲೀಲಾ ಪಾತ್ರದ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದರು. ಕಾಂತಾರ ಸಕ್ಸಸ್ ಬಳಿಕ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದ ಸಪ್ತಮಿ ಈಗ ಬಾಲಿವುಡ್ಗೆ ಹಾರುವ ಅವಕಾಶ ಗಿಟ್ಟಿಸಿ ಕೊಂಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಕುತೂಹಲ ಹೆಚ್ಚಾಗಿದೆ. ಸಪ್ತಮಿ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಹೆಚ್ಚಾಗಿತ್ತು. ಯಾವ ರೀತಿಯ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕನ್ನಡದಲ್ಲಿ ಅಭಿಷೇಕ ಅಂಬರೀಷ್ಗೆ ನಾಯಕಿಯಾಗಿ ನಟಿಸುವ ಜೊತೆಗೆ ಬಾಲಿವುಡ್ಗೆ ಹಾರುತ್ತಿರುವುದು ವಿಶೇಷ.
ಅಂದಹಾಗೆ ಸಪ್ತಮಿ ಹಿಂದಿ ಸಿನಿಮಾ ಮಾಡುತ್ತಿರುವುದು ಖ್ಯಾತ ನಿರ್ದೇಶಕ ಅಗ್ನಿಹೋತ್ರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಮೂಲಕ ಎನ್ನುವುದು ವಿಶೇಷವಾಗಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸದ್ಯ ದಿ ವ್ಯಾಕ್ಸಿನ್ ವಾರ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದಾರೆ. ಇದೀಗ ಈ ಚಿತ್ರಕ್ಕೆ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಸಿನಿಮಾದ ಹೆಸರೇ ಹೇಳುವ ಹಾಗೆ ಇದು ಕೊರೊನಾ ಕ್ಯಾಕ್ಸಿನ್ ಬಗ್ಗೆ ಬಗ್ಗೆ ಇರುವ ಸಿನಿಮಾವಾಗಿದೆ.
ಈ ಬಗ್ಗೆ ನಿರ್ದೇಶಕ ಅಗ್ನಿಹೋತ್ರಿ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಕಾಂತಾರ ಸಿನಿಮಾ ನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದ ಸಪ್ತಮಿ ಗೌಡ ಅವರ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ಅವರನ್ನು ನಮ್ಮ ಸಿನಿಮಾಗೆ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ಬಳಿಕ ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ ಅಪ್ರೋಚ್ ಮಾಡಿದೆ. ಅವರು ನಟಿಸಲು ಒಪ್ಪಿಕೊಂಡರು. ಅವರು ದಿ ವ್ಯಾಕ್ಸಿನ್ ವಾರ್ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ' ಎಂದು ಹೇಳಿದ್ದಾರೆ.
Kantara ಲೀಲಾ ಇಷ್ಟೊಂದು ಫಿಟ್ ಆಗಿರಲು ಕಾರಣ ಈ ವರ್ಕೌಟ್; ಫೋಟೋ ವೈರಲ್
ಬಳಿಕ ಮಾತು ಮುಂದುವರೆಸಿದ ವಿವೇಕ್ ಅಗ್ನಿಹೋತ್ರಿ ಉತ್ತರ-ದಕ್ಷಿಣ ಎನ್ನುವ ವಿಭಜನೆಯನ್ನು ಮುರಿಯಲು ಬಯಸುವುದಾಗಿ ಹೇಳಿದರು. 'ನಾನು ಭಾರತೀಯ ಸಿನಿಮಾ ಮಾಡುತ್ತಿದ್ದೀನಿ. ಸರಿಯಾದ ಪಾತ್ರ ವರ್ಗ ಬೇಕು ನಮಗೆ, ಉತ್ತಮ ಕಲಾವಿದರ ಜೊತೆ ಕೆಲಸ ಮಾಡಲು ನಾವು ಬಯಸುತ್ತೇವೆ ಅವರು ಎಲ್ಲಿಂದ ಬಂದರೂ ಪರವಾಗಿಲ್ಲ' ಎಂದು ಹೇಳಿದರು.
ವ್ಯಕ್ಸಿನ್ ವಾರ್ ಸಿನಿಮಾ ಈ ವರ್ಷ ಆಗಸ್ಟ್ 15 ರಂದು ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಹಿಂದಿ ಜೊತೆಗೆ ಇಂಗ್ಲಿಷ್, ಗುಜರಾತಿ, ಪಂಜಾಬಿ, ಭೋಜ್ಪುರಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಕನ್ನಡ, ಉರ್ದು ಮತ್ತು ಅಸ್ಸಾಮಿ ಸೇರಿದಂತೆ 11 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶ್ ಮತ್ತು ನಾನಾ ಪಾಟೇಕರ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಕೂಡ ಸಖತ್ ಎಕ್ಸಾಯಿಟ್ ಆಗಿದ್ದಾರೆ.
ಸಪ್ತಮಿ ಗೌಡ ತಂದೆ ಬಳಿ ಕತೆ ಹೇಳಿದ ಡೈರೆಕ್ಟರ್: ಏನಿದು ಯಂಗ್ ಡೈರೆಕ್ಟರ್ ಕಿಕ್ ಸ್ಟೋರಿ?
ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿರುವ ವಿವೇಕ್ ಅಗ್ನಿಹೋತ್ರಿ ಉತ್ತರ ಭಾರತದ ಚಿತ್ರೀಕರಣ ಮುಗಿಸಿ ಶೀಘ್ರದಲ್ಲೇ ಹೈದರಾಬಾದ್ನಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ. ಆಗ ಸಪ್ತಮಿ ಗೌಡ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಾಂತಾರ ಲೀಲಾ ಆಗಿ ಎಲ್ಲರ ಹೃದಯ ಗೆದ್ದಿದ್ದ ಸಪ್ತಮಿ ವ್ಯಾಕ್ಸಿನ್ ವಾರ್ ಮೂಲಕ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.