ಅತಿ ವೇಗದಿಂದ ಮರಕ್ಕೆ ಕಾರು ಡಿಕ್ಕಿ: ರಾಜೇಂದ್ರ ಸಿಂಗ್ ಪುತ್ರಿಗೆ ಪೆಟ್ಟು
ಎರಡು ದಿನಗಳ ಹಿಂದೆ ಯಲಹಂಕ ಸಮೀಪ ಕಾರು ಅಪಘಾತಕ್ಕೀಡಾಗಿ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ಆಕೆಯ ಸ್ನೇಹಿತೆ ಸೇರಿ ಮೂವರು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ ಸಿಂಗ್ (ರಿಷಿಕಾ), ಸ್ನೇಹಿತೆ ಅರ್ಪಿತಾ ಹಾಗೂ ಕಾರು ಚಾಲಕ ಅರ್ಯ ಅವರಿಗೆ ಪೆಟ್ಟಾಗಿದ್ದು, ಶೇಷಾದ್ರಿಪುರ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಸರುಘಟ್ಟದ ಗೆಳೆಯರ ಮನೆಯಿಂದ ರೋಹಿಣಿ ಸಿಂಗ್ ಹಾಗೂ ಆಕೆಯ ಸ್ನೇಹಿತೆ ಕಾರಿನಲ್ಲಿ ಬುಧವಾರ ಮುಂಜಾನೆ 6ರ ವೇಳೆಗೆ ಮನೆಗೆ ಮರಳುತ್ತಿದ್ದರು. ಮಾವಳ್ಳಿ ರಸ್ತೆಯಲ್ಲಿ ಅತಿವೇಗವಾಗಿ ಅರ್ಯ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಆಗ ಆರ್ಯುವೇದಿಕ್ ಕಾಲೇಜು ಸಮೀಪ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ತಕ್ಷಣವೇ ಗಾಯಾಳುಗಳನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯಲ್ಲಿ ರೋಹಿಣಿ ಹಾಗೂ ಅರ್ಪಿತಾ ಅವರಿಗೆ ಸಣ್ಣಪುಟ್ಟಗಾಯವಾಗಿದ್ದು, ಚಾಲಕನಿಗೆ ಗಂಭೀರ ಪೆಟ್ಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ನಟ ಜೈಜಗದೀಶ್ ಪುತ್ರಿ ಕಾರು
ಈ ಘಟನೆಗೆ ಕಾರು ಚಾಲಕನ ಅಜಾಗರೂಕ ಚಾಲನೆಯೇ ಕಾರಣವಾಗಿದೆ ಎಂದು ಆರೋಪಿಸಿ ರೋಹಿಣಿಸಿಂಗ್ ಶುಕ್ರವಾರ ಯಲಹಂಕ ಸಂಚಾರ ಠಾಣೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.