ಜೀಬ್ರಾ ದತ್ತು ಪಡೆದ ಶ್ರುತಿ ನಾಯ್ಡು; ಬಿಳಿ ನವಿಲು ದತ್ತು ಪಡೆದ ಪ್ರಮೋದ್!
ಮೈಸೂರು ಮೃಗಾಲಯದಿಂದ ಜೀಬ್ರಾಕ್ಕೆ ಸುಂದರ ಕೃಷ್ಣ ಅರಸ್ ಮೊಮ್ಮಗನ ಹೆಸರು. ದರ್ಶನ್ಗೆ ಸಾಥ್ ಕೊಟ್ಟ ಪ್ರೇಮಿಯರ್ ಪದ್ಮಿನಿ ಜೋಡಿ.
ನಟ ದರ್ಶನ್ ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆಯಲು ಕರೆ ಕೊಟ್ಟಿರುವುದಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಸ್ಪಂದಿಸಿದ್ದಾರೆ. ಹಿರಿಯ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ಧೀರ ರಾಜೇಂದ್ರ ಅರಸ್ ಹೆಸರಿನಲ್ಲಿ ಮೈಸೂರು ಮೃಗಾಲಯದಿಂದ ಜೀಬ್ರಾವೊಂದನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶ್ರುತಿ ಅವರು, ‘ನೆಕ್ಸಟ್ ಜನರೇಶನ್ನ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಪ್ರೀತಿ, ನಿಸರ್ಗದ ಬಗೆಗೆ ಗೌರವ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಚಿಕ್ಕ ಹುಡುಗ ಧೀರ ರಾಜೇಂದ್ರ ಅರಸ್ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದೇನೆ’ ಎಂದಿದ್ದಾರೆ.
ದರ್ಶನ್ ಸಮ್ಮುಖದಲ್ಲಿಯೇ ಪ್ರಾಣಿ ದತ್ತು ಪಡೆದ ಇಂಡುವಾಳು ಸಚ್ಚಿದಾನಂದ
ಕನ್ನಡಪ್ರಭ ಹಾಗೂ ಏಶ್ಯಾನೆಟ್ ಸುವರ್ಣ ನ್ಯೂಸ್ನ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲೂ ಶ್ರುತಿ ನಾಯ್ಡು ಅವರು ಭಾಗವಹಿಸಿದ್ದಾರೆ. ಪ್ರಕೃತಿ ಬಗೆಗಿನ ಅವರ ಪ್ರೀತಿಗೆ ಈ ಜೀಬ್ರಾ ದತ್ತು ಸ್ವೀಕಾರ ಮತ್ತೊಂದು ನಿದರ್ಶನವಾಗಿದೆ.
ನಟ ಪ್ರಮೋದ್ ಮೈಸೂರು ಮೃಗಾಲಯದಲ್ಲಿ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ನಟ ದರ್ಶನ್ ಅಭಿಮಾನಿಗಳು, ಸೆಲೆಬ್ರಿಟಿಗಳು, ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿ ಇರುವವರು ಹೀಗೆ ರಾಜ್ಯಾದ್ಯಾಂತ ನೂರಾರೂ ಮಂದಿ ಮೃಗಾಲಯಗಳಲ್ಲಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸಿದ್ದು, ಪ್ರಮೋದ್ ಕೂಡ ಜತೆಯಾಗಿದ್ದಾರೆ.