ಖ್ಯಾತ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಹೊಸ ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ನೆರವೇರಿಸಿದ್ದಾರೆ. ಆದರೆ, ಪೂಜೆಯ ದಿನದಂದೇ ಊರಿನವರಿಗೆ ಮಾಂಸದೂಟದ ಔತಣಕೂಟ ಏರ್ಪಡಿಸಿದ್ದು, ಇದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವೆಂದು ನೆಟ್ಟಿಗರಿಂದ ತೀವ್ರ ಚರ್ಚೆಗೆ ಕಾರಣವಾಗಿದೆ.
ಹೈದರಾಬಾದ್ (ಮಾ.3): ಖ್ಯಾತ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಸೋಮವಾರದಂದು ತೆಲಂಗಾಣದ ತುಂಬನಪೇಟೆಯಲ್ಲಿರುವ ತಮ್ಮ ಹೊಸ ಮನೆಯಲ್ಲಿ 'ಗೃಹಪ್ರವೇಶ' ಹಾಗೂ 'ಸತ್ಯನಾರಾಯಣ ವ್ರತ' ಪೂಜೆಯನ್ನು ಕೂಡ ಇವರು ನೆರವೇರಿಸಿದ್ದರು. ಆದರೆ, ಸತ್ಯನಾರಾಯಣ ಪೂಜೆಯ ಬಳಿಕ ಊರಿನವರಿಗೆ ಮಾಂಸದೂಟ ಹಾಕಿಸಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಭಾರತದಲ್ಲಿ ಬೀಗರ ಊಟದಂದು ಮಾಂಸದೂಟ ಮಾಡುವ ಪದ್ಧತಿ ಇದ್ದರೂ, ಸತ್ಯನಾರಾಯಣ ವ್ರತ ಇದ್ದಾಗ ಆ ದಿನದಂದು ಮಾಂಸದೂಟವನ್ನು ಮಾಡಲಾಗುವುದಿಲ್ಲ. ಇದನ್ನು ಅಪಚಾರ ಎಂದೇ ಹೇಳಲಾಗುತ್ತದೆ. ಆದರೆ, ರಶ್ಮಿಕಾ ಮಂದಣಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸತ್ಯನಾರಾಯಣ ವ್ರತದ ದಿನವೇ ಊರವರಿಗೆ ಮಾಂಸದೂಟ ಹಾಕಿಸಿದ್ದು ತಪ್ಪು ಎಂದು ನೆಟ್ಟಿಗರು ವಾದ ಮಾಡಿದ್ದಾರೆ.
ತುಂಬನಪೇಟೆಯಲ್ಲಿರುವ ತಮ್ಮ ಹೊಸ ಮನೆಗೆ ನವದಂಪತಿ ಪ್ರವೇಶಿಸುವ ಮುನ್ನ ಗ್ರಾಮಸ್ಥರು ಹಾಡು ಮತ್ತು ನೃತ್ಯದ ಮೂಲಕ ಸಂಭ್ರಮದಿಂದ ಸ್ವಾಗತಿಸಿ, ಸಾಂಪ್ರದಾಯಿಕ ಆರತಿ ಎತ್ತಿದರು.
ಸತ್ಯನಾರಾಯಣ ವ್ರತದ ಪೂಜೆಗಾಗಿ ರಶ್ಮಿಕಾ ಅವರು ಬೂದು ಬಣ್ಣದ (Grey) ಸೀರೆ ಹಾಗೂ ಚಿನ್ನಾಭರಣಗಳನ್ನು ಧರಿಸಿದ್ದರೆ, ವಿಜಯ್ ಅವರು ಹಸಿರು ಮತ್ತು ಬಿಳಿ ಬಣ್ಣದ ಕುರ್ತಾದಲ್ಲಿ ಮಿಂಚಿದರು. ವಿಜಯ್ ಅವರ ತಾಯಿ ಮಾಧವಿ ಅವರು ಕೆಂಪು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ಹಿರಿಯರಿಗೆ ವಿಧಿವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ಕಂಡುಬಂದಿತು.
ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ರಶ್ಮಿಕಾ ಅವರ ತಂಗಿ ಶಿಮನ್ ಮಂದಣ್ಣ ಹಾಗೂ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಅವರು ದಂಪತಿಗಳ ಜೊತೆಯಲ್ಲಿದ್ದರು. ವಿಜಯ್ ಮತ್ತು ರಶ್ಮಿಕಾ ಪ್ರೀತಿಯಿಂದ ಕೈಕೈ ಹಿಡಿದು ಪೂಜೆಗೆ ಕಾಯುತ್ತಿದ್ದರು. ಜಾನಪದ ನೃತ್ಯ ಮತ್ತು ಸಂಗೀತದೊಂದಿಗೆ ಅವರನ್ನು ಹೊಸ ಮನೆಗೆ ಬರಮಾಡಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಮ್ಮ ಸ್ವಗ್ರಾಮದಲ್ಲಿ ಸತ್ಯನಾರಾಯಣ ವ್ರತವನ್ನು ಪೂರೈಸಿದ ನಂತರ, ವಿಜಯ್ ದೇವರಕೊಂಡ ಅವರು ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಗ್ರಾಮದ ಸಮಸ್ತ ಜನರಿಗಾಗಿ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಮಾಂಸದೂಟದ ಖಾದ್ಯವೇ ಹೆಚ್ಚಾಗಿತ್ತು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನೆಟ್ಟಿಗರ ಪ್ರಶ್ನೆ?
'ಸತ್ಯನಾರಾಯಣ ವ್ರತ ಮಾಡುವ ದಿನದಂದು ಮಾಂಸದೂಟ ಮಾಡ್ತಾರಾ?' ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹಲವರು ತೆಲಂಗಾಣದಲ್ಲಿ ಈ ಸಂಪ್ರದಾಯ ಇಲ್ಲ ಎಂದಿದ್ದು, ವ್ರತಕ್ಕೆ ಕುಳಿತ ವ್ಯಕ್ತಿಗಳು ಮಾತ್ರವೇ ಮಾಂಸದೂಟ ಮಾಡೋದಿಲ್ಲ ಎಂದಿದ್ದಾರೆ. ಸನಾತನ ಧರ್ಮ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ, ಸತ್ಯನಾರಾಯಣ ಸ್ವಾಮಿ ವ್ರತವನ್ನು ಆಚರಿಸಿದ ನಂತರ ಮಾಂಸವನ್ನು ಸೇವಿಸಬಾರದು. ಶಾಸ್ತ್ರಗಳ ಪ್ರಕಾರ, ಅದು ದೇವರಿಗೆ ನೈವೇದ್ಯವನ್ನು ಅರ್ಪಿಸಿದಂತೆ ಆಗುತ್ತದೆ. ಸತ್ಯನಾರಾಯಣ ಸ್ವಾಮಿಗೆ ಮಾಂಸವನ್ನು ನೈವೇದ್ಯವಾಗಿ ಹೇಗೆ ಅರ್ಪಿಸಬಹುದು..? ಸನಾತನ ಧರ್ಮ ಮತ್ತು ಹಿಂದೂ ಸಂಪ್ರದಾಯಗಳನ್ನು ಪ್ರಶ್ನಿಸುವವರು ಎಲ್ಲಿದ್ದಾರೆ? ಎಂದು ಇನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ.


