ಪ್ರಜ್ವಲ್‌ ದೇವರಾಜ್‌ ನಟನೆಯ ‘ಜಂಟಲ್‌ಮನ್‌’ ಚಿತ್ರಕ್ಕೆ ಚಿತ್ರಮಂದಿರದ ಸಮಸ್ಯೆ ಎದುರಾಗಿದ್ದು, ಇದಕ್ಕೆ ವಿತರಕ ಜಯಣ್ಣ ಕಾರಣಕರ್ತ ಎಂದು ಅವರ ವಿರುದ್ಧ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

‘ನನ್ನ ಸಂಸ್ಥೆಯಿಂದ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ಜಂಟಲ್‌ಮನ್‌’ ಚಿತ್ರವನ್ನು ಫೆ.7ರಂದು ತೆರೆಗೆ ತರುತ್ತಿದ್ದೇವೆ. ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್‌ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈ ಚಿತ್ರಮಂದಿರವನ್ನು ನಿರ್ವಹಣೆ ಮಾಡುತ್ತಿದ್ದ ಜಯಣ್ಣ ಅವರೇ ಖುದ್ದಾಗಿ ನಮಗೆ ಫೆ.7ಕ್ಕೆ ಸಂತೋಷ್‌ ಚಿತ್ರಮಂದಿರ ಬಿಟ್ಟುಕೊಡುವುದಾಗಿ ಹೇಳಿದ್ದರು. ಆದರೆ, ಇದ್ದಕ್ಕಿದ್ದಂತೆ ಅದೇ ಚಿತ್ರಮಂದಿರವನ್ನು ಅದೇ ದಿನ ಬೇರೊಂದು ಚಿತ್ರಕ್ಕೆ ನೀಡಿದ್ದಾರೆ. ಇದು ಜಯಣ್ಣ ಫಿಲಮ್ಸ್‌ ನಮ್ಮ ಚಿತ್ರಕ್ಕೆ ಮಾಡಿರುವ ಮೋಸ’ ಎಂದು ಬುಧವಾರ ನೀಡಿರುವ ದೂರಿನಲ್ಲಿ ಗುರು ದೇಶಪಾಂಡೆ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಮಗೆ ಮೊದಲೇ ಮಾತು ಕೊಟ್ಟಂತೆ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್‌ ಚಿತ್ರಮಂದಿರವನ್ನೇ ನೀಡಬೇಕು. ಇಲ್ಲವೇ ಅದೇ ರಸ್ತೆಯಲ್ಲಿ ಬೇರೊಂದು ಚಿತ್ರಮಂದಿರದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಫೆ.6ರ ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಜ್ವಲ್‌ ದೇವರಾಜ್‌, ಕನ್ನಡ ಸಂಘಟನೆಗಳು, ಅಭಿಮಾನಿಗಳ ಜತೆ ಸೇರಿ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ‘ಜಂಟಲ್‌ಮನ್‌’ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

"