Asianet Suvarna News Asianet Suvarna News

Drishya 2: 'ಮಳೆಬಿಲ್ಲೇ ಮರೆಯಾಗುವೇ ನೀ ಏಕೆ' ಎಂದು ಹಾಡಿದ ರಾಜೇಂದ್ರ ಪೊನ್ನಪ್ಪ

ಕ್ರೇಜಿಸ್ಟಾರ್​ ವಿ.ರವಿಚಂದ್ರನ್ ಅಭಿನಯದ 'ದೃಶ್ಯ 2' ಚಿತ್ರವು ಡಿಸೆಂಬರ್​ 10ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಈ ನಡುವೆ ಚಿತ್ರತಂಡ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ.

Kannada Movie Drishya 2 Malebille Lyrical Song Out Starrer Ravichandran gvd
Author
Bangalore, First Published Dec 5, 2021, 11:35 PM IST

ಕ್ರೇಜಿಸ್ಟಾರ್​ ವಿ.ರವಿಚಂದ್ರನ್ (V.Ravichandran) ಅಭಿನಯದ 'ದೃಶ್ಯ 2' (Drishya 2) ಚಿತ್ರದ ಟ್ರೇಲರ್ (Trailer) ಇತ್ತೀಚೆಗೆ ಬಿಡುಗಡೆಯಾಗಿ ಸಿನಿರಸಿಕರಿಂದ ಮೆಚ್ಚುಗೆಯನ್ನು ಪಡೆದಿತ್ತು. ಚಿತ್ರವು ಡಿಸೆಂಬರ್​ 10ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಈ ನಡುವೆ ಚಿತ್ರತಂಡ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ. 'ಮಳೆಬಿಲ್ಲೇ ಮರೆಯಾಗುವೇ ನೀ ಏಕೆ' (Malebille) ಎಂಬ ಲಿರಿಕಲ್ ಹಾಡನ್ನು ಚಿತ್ರತಂಡ ಜೀ ಮ್ಯೂಸಿಕ್ ಸೌಥ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಅನೂಪ್ ಭಂಡಾರಿ (Anup Bhandari) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಹರಿಚರಣ್ (Haricharan) ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಅಜನೀಶ್‌ ಲೋಕನಾಥ್ (Ajaneesh Loknath) ಸಂಗೀತ ಸಂಯೋಜನೆ ಹಾಡಿಗಿದೆ.

'ದೃಶ್ಯ 2' ಚಿತ್ರದ ಈ ಹಾಡಿನ ಬಗ್ಗೆ ರವಿಚಂದ್ರನ್ ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ನಮ್ಮವರು ನಮ್ಮ ನೆರಳಾಗಿ ಕಾದರೆ, ಇರದು ಯಾವ ತೊಂದರೆ! ಮಳೆಬಿಲ್ಲೇ ಹಾಡು ಬಿಡುಗಡೆಯಾಗಿದೆ' ಎಂದು ಬರೆದುಕೊಂಡು ಹಾಡಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿದ್ದರು. ಜೊತೆಗೆ 'ದೃಶ್ಯ' (Drishya) ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ 'ಮಾಣಿಕ್ಯ' ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್‌ಗೆ ಒಂದು ಚೆನ್ನಾಗಿರುವ ಮಲಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ಹೀಗೆ 'ದೃಶ್ಯ' ಚಿತ್ರ ಆರಂಭವಾಯಿತು ಎಂದು ಸುದೀಪ್ ಟ್ರೇಲರ್ ಸಮಾರಂಭದಲ್ಲಿ ಹೇಳಿದ್ದರು.

Drishya 2 Trailer: ಕ್ರೇಜಿಸ್ಟಾರ್​ ವಿ.ರವಿಚಂದ್ರನ್‌ಗೆ ಕಿಚ್ಚ ಸುದೀಪ್ ಸಾಥ್

ಮಲಯಾಳಂನಲ್ಲಿ ನಟ ಮೋಹನ್‌ಲಾಲ್‌ (Mohanlal) ನಟಿಸಿದ್ದ 'ದೃಶ್ಯಂ 2' (Drishyam 2) ಚಿತ್ರದ ರಿಮೇಕ್‌ ಇದಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್‌ ಆಗಿದೆ. ವಿಶೇಷವೆಂದರೆ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್​ ಆಗಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. 'ದೃಶ್ಯ' ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ನವ್ಯ ನಾಯರ್ (Navya Nair)​ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ (Arohi Narayan)​ ಕಾಣಿಸಿಕೊಂಡಿದ್ದಾರೆ. 

ಪಿ.ವಾಸು (P.Vasu) 'ದೃಶ್ಯ 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ. 'ದೃಶ್ಯ' ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್ (Ananth Nag) ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್ ಎಂದು ವಿ.ರವಿಚಂದ್ರನ್ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ರವಿಚಂದ್ರನ್‌ ನಟನೆಯ Drishya 2 ತೆರೆಗೆ!

ಇನ್ನು 'ದೃಶ್ಯ 2' ಚಿತ್ರದ ಟ್ರೇಲರ್​ ಸಾಕಷ್ಟು ಸಸ್ಪೆನ್ಸ್​ಗಳಿಂದ ಕೂಡಿದ್ದು, ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್​ನಲ್ಲಿ ಮೂಡಿಬಂದಿದೆ. ಜಿ.ಎಸ್.ವಿ. ಸೀತಾರಾಂ ಕ್ಯಾಮರಾ ಕೈಚಳಕ, ರವಿ ಸಂತೆಹುಕ್ಲು ಕಲಾ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ಲೋಕೇಶ್ ಬಿ.ಕೆ ಗೌಡ, ಭರತ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ‌. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯುಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
 

Follow Us:
Download App:
  • android
  • ios