ಮತ್ತೊಂದು ಹಿಟ್ ಸಿನಿಮಾ ನೀಡಲು ಕಾಯುತ್ತಿದ್ದ ಡಾರ್ಲಿಂಗ್ ಕೃಷ್ಣ ಇದೀಗ ರಘು ದೀಕ್ಷಿತ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಬೇಸರದಲ್ಲಿದ್ದ ಕನ್ನಡ ಸಿನಿ ರಸಿಕರಿಗೆ ಮನೋರಂಜನೆ ನೀಡಿದ ಸಿನಿಮಾ ಲವ್‌ ಮಾಕ್ಟೇಲ್ (Love Mocktail) ಮತ್ತು ದಿಯಾ (Dia). ಹಾಡಿನಿಂದ ಹಿಡಿದು, ಸಣ್ಣ ಪುಟ್ಟ ದೃಶ್ಯಗಳಿಂದಲೂ ಗಮನ ಸೆಳೆದಿದ್ದ ಕನ್ನಡ ಚಿತ್ರಗಳಿವು. ಸಿನಿಮಾ ಅದ್ಭುತವಾಗಿದ್ದರೂ, ಕೊರೋನಾ ಕಾಟ ಮತ್ತು ಚಿತ್ರಮಂದಿರಗಳ ಸಮಸ್ಯೆ ಎದುರಾಗಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ವಿಡಿಯೋ ಮೂಲಕ ಬೇಸರ ವ್ಯಕ್ತ ಪಡಿಸಿದ್ದರು. ರಘು ಅವರ ಸಂಗೀತವೇ ಚಿತ್ರಕ್ಕೆ ಮತ್ತೊಂದು ಪ್ಲಸ್‌ ಪಾಯಿಂಟ್ ಆಗಿತ್ತು, ಆದರೀಗ ರಘು ಅವರು ಎರಡನೇ ಭಾಗಕ್ಕೆ ಸಂಗೀತ ಮಾಡುತ್ತಿಲ್ಲ. ಅದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಲವ್ ಮಾಕ್ಟೀಲ್ ಸಿನಿಮಾ ವೀಕ್ಷಿಸಿ ಫಿದಾ ಆಸ್ಟ್ರೇಲಿಯಾ ಪತ್ರಕರ್ತೆ!

ಲವ್ ಮಾಕ್ಟೇಲ್ 2 ಚಿತ್ರಕ್ಕೆ ರಘು ಸಂಗೀತ ಇರುವುದಿಲ್ಲ, ಸಂಭಾವನೆ (Remuneration) ಕಡಿಮೆ ಸಿಕ್ಕಿದೆ ಎನ್ನುವ ರೀತಿಯಲ್ಲಿ ರಘು ದೀಕ್ಷಿತ್ ಹೇಳಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಡಾರ್ಲಿಂಗ್ ಕೃಷ್ಣ (Darling Krishna) ಖಾಸಗಿ ಯುಟ್ಯೂಬ್ (Youtube) ಚಾನೆಲ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ಲವ್ ಮಾಕ್ಟೇಲ್ ಸಿನಿಮಾಗೆ 8 ಲಕ್ಷ ರೂ ಬಜೆಟ್ ಹಾಕಿಕೊಂಡಿದ್ದೆವು. ಸಂಗೀತಕ್ಕೆ ರಘು ಅವರಿಗೆ 10 ಲಕ್ಷ ಕೊಡೋದು ಅಂತ ಮಾತಾಗಿತ್ತು. ಸಿನಿಮಾ ಹಿಟ್ ಆಗಿ ದೊಡ್ಡ ಲಾಭ ಪಡೆದ ನಂತರ ಇನ್ನೂ 4 ಲಕ್ಷ ರೂ. ಕೊಡಿ ಎಂದು ರಘು ಹೇಳಿದ್ದರು. ಮಾರ್ಚ್ ತಿಂಗಳಲ್ಲಿ ನನಗೆ ಹಣ ಬಂದಾಗ 14 ಲಕ್ಷ ರೂ. ನೀಡಿದ್ದೆ. ನಾನು 12 ಲಕ್ಷ ಕೊಟ್ಟಿರುವೆ ಅಂತ ರಘು ಆರೋಪ ಮಾಡಿದ್ದಾರೆ. ಇದುವರೆಗೂ ಚಿತ್ರದ ಆಡಿಯೋ ರಘು ದೀಕ್ಷಿತ್ ಮ್ಯೂಸಿಕ್‌ನಲ್ಲಿ ಪ್ಲೇ ಆಗುತ್ತಿರುವುದು. ಪ್ರೊಡಕ್ಷನ್ ಹೌಸ್ (Production House) ಆಡಿಯೋ ಮಾರಿ ಹಣ ಗಳಿಸುತ್ತದೆ. ನಾನು ಒಂದು ರೂಪಾಯಿಯನ್ನೂ ಪಡೆಯದೇ ರಘು ಅವರಿಗೆ ಆಡಿಯೋ ನೀಡಿರುವೆ,' ಎಂದು ಕೃಷ್ಣ ಮಾತನಾಡಿದ್ದಾರೆ. 

ಜನ ಗುರುತಿಸಲು ಕಾರಣ 'Love You Chinna..!’ : ಶ್ರುತಿ ವಿ ಎಸ್

'ಲಾಭ ಇಲ್ಲದೆ ನೀಡಿರುವ ಆಡಿಯೋ ಈಗ 30-40 ಲಕ್ಷ ರೂಪಾಯಿ ರೂ. ಮಾಡಿರುತ್ತದೆ. ಅಂದು 3-4 ಲಕ್ಷ ಸಿಗುತ್ತಿತ್ತು. ಈಗ ಲವ್ ಮಾಕ್ಟೇಲ್ 2 ಆಡಿಯೋ ರೈಟ್ಸ್‌ಗೆ 32 ಲಕ್ಷ ರೂ ಆಫರ್ ಬಂದಿದೆ. ಇದಕ್ಕೆ 20 ಲಕ್ಷ ರೂಪಾಯಿ ಕೊಡಿ ಅಂತ ರಘು ಅವರು ಹೇಳಿದ್ದರು. ನಾನು ಓಕೆ ಅಂದು ಆಡಿಯೋ ರೈಟ್ಸ್‌ ನಾನು ಇಟ್ಟುಕೊಳ್ತೀನಿ ಅಂದೆ. 32 ಲಕ್ಷ ರೂ ಆಡಿಯೋ ರೈಟ್ಸ್ ಕೊಟ್ಟು 20 ಲಕ್ಷ ರೂ ಸಂಭಾವನೆ ಕೊಟ್ಟರೆ, ನಾನು ಸಂಗೀತ ನಿರ್ದೇಶಕರಿಗೆ ಒಟ್ಟಾರೆ 52 ಲಕ್ಷ ಕೊಟ್ಟ ಹಾಗೆ ಆಗುತ್ತೆ. ಮದರಂಗಿ ಚಿತ್ರಕ್ಕೆ ಮಾಡಿದ ಸಾಲವನ್ನು ಕಳೆದ ವರ್ಷ ತೀರಿಸಿದ್ದೇನೆ. ಲವ್ ಮಾಕ್ಟೇಲ್ ಗೆದ್ದಿದೆ ಅಂತ ಈಗ ಖರ್ಚು ಹಾಕ್ಕೊಂಡು ಮತ್ತೆ ಸಿನಿಮಾ ಮಾಡೋಕೆ ಆಗಲ್ಲ. ಪ್ರತಿಯೊಬ್ಬರಿಗೂ ಒಂದು ಸಂಭಾವನೆ ಇರುತ್ತದೆ. ರಘು ಅವರಿಗೂ ಸಂಭಾವನೆ ಕೊಡುವುದಕ್ಕೆ ನಾವು ರೆಡಿ. ಆದರೆ ಆಡಿಯೋ ರೈಟ್ಸ್‌ ಕೂಡ ಬೇಕು ಅಂದ್ರೆ ಹೇಗೆ? ನಿರ್ದೇಶಕನಾಗಿ ರಘು ನನಗೆ ಬೇಕು, ಆದರೆ ನಿರ್ಮಾಪಕನಾಗಿ ಬೇಡ. ನಾವು ಸಿನಿಮಾ ಮಾಡೋದು ಕೂಡ ವ್ಯವಹಾರಕ್ಕಾಗಿ,' ಎಂದು ಕೃಷ್ಣ ಹೇಳಿದ್ದಾರೆ.