ಲಕ್ಷ್ಮೇ ಬೇಟೆರಾಯ ಕಂಬೈನ್ಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ ಸ್ನೇಹರ್ಷಿ ಚಿತ್ರದ ಮೊದಲ ಹಾಡು ಡಿ ಬಿಟ್ಸ್‌ ಯೂಟ್ಯೂಬ್‌ ಚಾನಲ್‌ ಮೂಲಕ ಬಿಡುಗಡೆಯಾಗಿದೆ. ಗಾಯಕ ನವೀನ್‌ ಸಜ್ಜು ಅವರ ತಮಟೆ ಹಾಡಿಗೆ ನಾಯಕ ಕಿರಣ್‌ ನಾರಾಯಣ್‌ ಸ್ಟೆಪ್‌ ಹಾಕಿದ್ದಾರೆ. ಭಜರಂಗಿ ಮೋಹನ್‌ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸ್ನೇಹರ್ಷಿ ಚಿತ್ರದಲ್ಲಿ ಹೀರೋ ಆಗಿರುವ ಜೊತೆಗೆ ಕತೆ, ಚಿತ್ರಕತೆ, ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ತಾಯಿ ಪ್ರತಿಭಾ ಜೊತೆಗೆ ಕಿರಣ್‌ ಅವರೇ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಹಾಡು ಬಿಡುಗಡೆಗೆಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಣ್‌ ನಾರಾಯಣ್‌, ‘ಈ ಚಿತ್ರಕ್ಕೆ ನನ್ನ ತಾಯಿ ನಾಗತಿಹಳ್ಳಿ ಪ್ರತಿಭಾ ಕಥೆ ಬರೆದಿದ್ದಾರೆ. ಅಮ್ಮ ಹೇಳುವ ಕಥೆ ಬೇರೆಯವರಿಗಿಂತ ನನಗೆ ಬೇಗ ಅರ್ಥವಾಗುತ್ತದೆ. ಹಾಗಾಗಿ ಈ ಚಿತ್ರವನ್ನು ನಿರ್ದೇಶಿಸಲು ಮುಂದಾದೆ. ಸಾಮಾಜಿಕ ಕಾಳಜಿಯ ಕಥಾಹಂದರವಿದ್ದು, ನಾನೆ ಚಿತ್ರಕಥೆ ಬರೆದಿದ್ದೇನೆ’ ಎಂದರು.

ಜನಮೆಚ್ಚಿದ 'ಮೋಕ್ಷ' ಟ್ರೇಲರ್‌;ಏ.16ರಂದು ಸಿನಿಮಾ ಬಿಡುಗಡೆ ಸಾಧ್ಯತೆ! 

ನಟಿ ಸುಧಾ ಬೆಳವಾಡಿ ಮಾತನಾಡಿ, ‘ಕಿರಣ್‌ ನಾರಾಯಣ್‌ ಸಾಧಾರಣ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ತರುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸಿನಿರಂಗ ಪ್ರವೇಶಿಸುತ್ತಿರುವ ಈ ಹುಡುಗನಿಗೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು.

ಚಿತ್ರದಲ್ಲಿ ಮಾಧ್ಯಮ ಪ್ರತಿನಿಧಿ ಪಾತ್ರ ನಿರ್ವಹಿಸಿರುವ ಕಿರಣ್‌ ನಾರಾಯಣ್‌ ಅವರ ಸೋದರ ಮಾವ ನಾಗತಿಹಳ್ಳಿ ಜಯಪ್ರಕಾಶ್‌, ‘ಮಾಧ್ಯಮವನ್ನು ಪ್ರತಿನಿಧಿಸುವ ಪಾತ್ರ ನನ್ನದು. ಮೂಲತಃ ನಾನೊಬ್ಬ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ. ಮಾಧ್ಯಮ ಕೂಡ ಒಂದು ಸಾಮಾಜಿಕ ಕಳಕಳಿಗೆ ಹೇಗೆ ಸ್ಪಂದಿಸಬಲ್ಲದು ಎಂಬ ಅಂಶ ಈ ಚಿತ್ರದಲ್ಲಿ ನೋಡಬಹುದು’ ಎಂದರು.

ಚಿತ್ರ ವಿಮರ್ಶೆ: ಯುವರತ್ನ 

ಚಿತ್ರದ ಬಹುತೇಕ ಎಲ್ಲಾ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಸೆನ್ಸಾರ್‌ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಆಕಾಶ್‌ ಅಯ್ಯಪ್ಪ ಸಂಗೀತ ನೀಡಿದ್ದು, ರವಿಕಿಶೋರ್‌ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿದೆ. ರಾಜು ಎನ್‌.ಕೆ ಗೌಡ ಗೀತರಚನೆ ಮಾಡಿದ್ದಾರೆ.

ತಾರಾಬಳಗದಲ್ಲಿ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್‌ ಜೊತೆಗೆ ಚಕ್ರವರ್ತಿ, ನವೀನ್‌, ದೇವಕಿ, ರಂಗನಾಥ್‌, ಮಾರುತಿ, ಸೌಮ್ಯ ಮುಂತಾದವರಿದ್ದಾರೆ.