ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ನಾಗಶೇಖರ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಮಹಿಳೆಯೊಬ್ಬರಿಗೆ ಗಾಯಗಳಾಗಿವೆ. ಈ ಘಟನೆಯ ನಂತರ ನಾಗಶೇಖರ್ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ.

ಬೆಂಗಳೂರು (ಸೆ.06): ಕನ್ನಡ ಚಿತ್ರರಂಗಕ್ಕೆ ನಾಗದೋಷವಿದೆಯಾ ಎಂಬ ಅನುಮಾನ ಕಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ನಾಗರಾಜನ ಹೆಸರು ಇಟ್ಟುಕೊಂಡಿರುವ ನಟ, ನಿರ್ದೇಶಕರು ಅಪಘಾತ ಮಾಡುತ್ತಿದ್ದಾರೆ. ಇತ್ತೀಚೆಗೆ ನಟ ನಾಗಭೂಷಣ ಅವರು ಕಾರು ಗುದ್ದಿಸಿ ಆಕ್ಸಿಡೆಂಟ್ ಮಾಡಿದ್ದರು. ಇದೀಗ ನಿರ್ದೇಶಕ ನಾಗಶೇಖರ್ ಮಹಿಳೆಗೆ ಕಾರು ಗುದ್ದಿಸಿ ಅಲ್ಲಿಂದ ಪರಾರಿ ಆಗಿರುವ ಘಟನೆ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಕನ್ನಡ ಚಿತ್ರರಂಗದಲ್ಲಿ ಸಂಜು ವೆಡ್ಸ್ ಗೀತಾ ಸೇರಿದಂತೆ ಹಲವು ಫೇಮಸ್ ಸಿನಿಮಾಗಳ ನಿರ್ದೇಶನ ಮಾಡಿರುವ ಪ್ರಸಿದ್ಧ ನಿರ್ದೇಶಕ ನಾಗಶೇಖರ್ ಅವರ ಕಾರು ಶುಕ್ರವಾರ ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿರುವ ನಿರ್ದೇಶಕ ನಾಗಶೇಖರ್ ಅಲ್ಲಿ ಮರವೊಂದಕ್ಕೆ ಗುದ್ದಿಸಿದ್ದಾರೆ. ಆದರೆ, ಮರಕ್ಕೆ ಗುದ್ದುವ ಮೊದಲು ಮಹಿಳೆಯೊಬ್ಬರಿಗೆ ಕಾರು ಗುದ್ದಿಸಿ ಅಪಘಾತ ಮಾಡಿದ್ದಾರೆ. ಇನ್ನು ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ ನಂತರ ಕಾರನ್ನು ಅಲ್ಲಿಯೇ ಬಿಟ್ಟು, ಬೇರೊಬ್ಬರ ಬೈಕ್‌ನಲ್ಲಿ ಡ್ರಾಪ್ ಕೊಡುವಂತೆ ಮನವಿ ಮಾಡಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಜ್ಞಾನ ಭಾರತಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅಕ್ಕಪಕ್ಕದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿ ವೇಗವಾಗಿ ಬಂದು ಮಹಿಳೆಯೊಬ್ಬರಿಗೆ ತಾಗಿಸಿ ನಂತರ ನಿಯಂತ್ರಣ ತಪ್ಪಿ ರಭಸವಾಗಿ ಬಂದು ಮರಕ್ಕೆ ಗುದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರು ಯಾರೆಂಬುದನ್ನು ಗುರುತಿಸಿದ ಪೊಲೀಸರು ನಿರ್ದೇಶಕ ನಾಗಶೇಖರ್ ಅವರ ಬೆಂಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಈ ಘಟನೆಯಲ್ಲಿ ಮಹಿಳೆಗೆ ಗಾಯವಾಗಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ನಿರ್ದೇಶಕ ನಾಗಶೇಖರ್ ಕಾರನ್ನು ಹಾಗೂ ಗಾಯಾಳು ಮಹಿಳೆಯನ್ನು ಸ್ಥಳದಲ್ಲೆ ಬಿಟ್ಟು ಬೇರೊಬ್ಬರ ಬೈಕಿನಲ್ಲಿ ಡ್ರಾಪ್ ಪಡೆದು ಅಲ್ಲಿಂದ ಹೊರಟು ಹೋಗಿದ್ದಾರೆ.

ಸ್ಯಾಂಡಲ್‌ವುಡ್‌ಗೆ ನಾಗದೋಷ ತಪ್ಪಲಿಲ್ವಾ? 
ಇನ್ನು ಕನ್ನಡ ಚಿತ್ರರಂಗದ ಮೇಲೆ ನಾಗದೋಷವಿದೆ ಎಂದು ಇತ್ತೀಚೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಡ ಗಣ್ಯರೆಲ್ಲರೂ ಸೇರಿಕೊಂಡು ನಾಗಪೂಜೆಯನ್ನು ನೆರವೇರಿಸಿದ್ದರು. ಈ ವೇಳೆ ಹೋಮ, ಹವನವನ್ನು ಕೂಡ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಹಲವು ನಟರು ತಪ್ಪು ಮಾಡಲು ಯಾವುದೋ ದುಷ್ಟ ಶಕ್ತಿ ಪ್ರಭಾವ ಬೀರಿದೆ. ಅಥವಾ ನಾಗದೋಷದ ಹಿನ್ನೆಲೆಯಲ್ಲಿ ಈ ದುರ್ಘಟನೆಗಳು ಸಂಭವಿಸುತ್ತಿವೆ ಎಂಬ ಅನುಮಾನಗಳೂ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂಜೆಯನ್ನು ನೆರವೇರಿಸಲಾಗಿತ್ತು. ಇದಾದ ನಂತರ ಬಿಡುಗಡೆ ಆಗಿದ್ದ ದುನಿಯಾ ವಿಜಯ್ ಅವರ ಭೀಮ ಸಿನಿಮಾ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯಂ ಸಖಿ ಸಿನಿಮಾಗಳು ಹಿಟ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. 

ನಾಗ ಹೆಸರು ಇಟ್ಟುಕೊಂಡವರಿಗೆ ಬಿಡುತ್ತಿಲ್ಲ ದೋಷ: ಕನ್ನಡ ಚಿತ್ರರಂಗದಲ್ಲಿ ನಾಗ ಎಂಬ ಹೆಸರುಳ್ಳವರಿಗೆ ಇತ್ತೀಚೆಗೆ ಹೆಚ್ಚು ಸಂಕಷ್ಟಗಳು ಎದುರಾಗುತ್ತಿವೆ. ಕಳೆದ ವರ್ಷವಷ್ಟೇ ಟಗರುಪಲ್ಯ ನಟ ನಾಗಭೂಷಣ್ ಅವರ ಕಾರು ಅಪಘಾತಕ್ಕೀಡಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಗುದ್ದಿದ್ದರು. ಈ ವೇಳೆ ಮಹಿಳೆಯು ಸಾವನ್ನಪ್ಪಿದ್ದು, ಅವರ ಪತಿ ಗಂಭೀರ ಗಾಯಗೊಂಡಿದ್ದರು. ಇದಾದ ನಂತರ ಇದೀಗ ಪುನಃ ನಿರ್ದೇಶಕ ನಾಗಶೇಖರ್ ಅವರ ಬೆಂಜ್ ಕಾರು ಅಪಘಾತವಾಗಿದೆ. ಇಲ್ಲಿಯೂ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಆದರೆ, ಎರಡೂ ಪ್ರಕರಣದಲ್ಲಿ ಚಿತ್ರರಂಗದ ಇಬ್ಬರಿಗೂ ಯಾವುದೇ ದೈಹಿಕ ಪೆಟ್ಟುಗಳಾಗಿಲ್ಲ.

ಇದನ್ನೂ ಓದಿ: ದರ್ಶನ್ ಮಾತ್ರವಲ್ಲ, ಅವನ ಅಭಿಮಾನಿಯೂ ಕಿಲ್ಲಿಂಗ್ ಸ್ಟಾರ್ಸ್; ಮೂವರ ಸಾವಿಗೆ ಕಾರಣವಾದ ಡಿಬಾಸ್ ಫ್ಯಾನ್!

ನಟ ದರ್ಶನ್‌ಗೂ ಕಾಡುತ್ತಿದೆಯೇ ನಾಗಸರ್ಪದ ತಿಲಕದ ದೋಷ: ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಧುರ್ಯೋಧನ ಪಾತ್ರ ಮಾಡಲು ನಾಗ ಸರ್ಪದ ತಿಲಕ ಇಟ್ಟುಕೊಂಡಿದ್ದರು. ಅಲ್ಲಿಂದಲೇ ನಾಗದೋಷ ಉಂಟಾಗಿ ಸಮಸ್ಯೆ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕುರುಕ್ಷೇತ್ರ ಸುನಿಮಾದ ನಂತರ ನಟ ದರ್ಶನ್ ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕಿಕೊಂಡು ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದಾರೆ. ಅವರೇ ಅಪರಾಧಿ ಎನ್ನುವಂತೆ ಪೊಲೀಸರಿಗೆ ಹಲವು ಸಾಕ್ಷಿಗಳು ಕೂಡ ಲಭ್ಯವಾಗಿದ್ದು, 3,990ಕ್ಕೂ ಅಧಿಕ ಪುಟಗಳ ಚಾರ್ಜ್‌ ಶೀಟ್ ಅನ್ನು ಸಲ್ಲಿಕೆ ಮಾಡಲಾಗಿದೆ.