ಮೇಘನಾ ರಾಜ್ಗೆ ಚಿರಂಜೀವಿ ಸರ್ಜಾ ಹೇಳಿದ ಕೊನೆಯ ಮಾತುಗಳಿವು!
ಪತಿ ಚಿರಂಜೀವಿ ಸರ್ಜಾ ಅಸುನೀಗಿದ ಬಳಿಕ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಮೊದಲ ಸಂದರ್ಶನದಲ್ಲಿ ಮೇಘನಾ ರಾಜ್ ಹಂಚಿಕೊಂಡ ಮನದಾಳದ ಮಾತುಗಳಿವು.
ಸ್ಯಾಂಡಲ್ವುಡ್ ಯುವ ನಟ ಚಿರಂಜೀವಿ ಸರ್ಜಾ ಅಗಲಿ ನಾಲ್ಕು ತಿಂಗಳಾದವು. ಕುಟುಂಬಸ್ಥರು, ಸ್ನೇಹಿತರು ಆಯೋಜಿಸಿದ ಸೀಮಂತ ಕಾರ್ಯಕ್ರಮದ ನಂತರ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೇ ನೋಡಿದರೂ ಮೇಘನಾ ರಾಜ್ ಮತ್ತು ಚಿರಂಜೀವಿ ಪೋಟೋ ರಾರಾಜಿಸುತ್ತಿವೆ. ಅಭಿಮಾನಿಗಳು ತೋರಿಸಿದ ಪ್ರೀತಿ ಮತ್ತು ಚಿರಂಜೀವಿ ಸರ್ಜಾ ಹೇಳಿದ ಕೊನೆ ಮಾತುಗಳು ಏನೆಂದು ಮೇಘನಾ ಇದೇ ಮೊದಲ ಬಾರಿಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಮೈದುನನಿಗೆ ಮೇಘನಾ ಬರ್ತ್ಡೇ ವಿಶ್: ಧ್ರುವನಿಗೆ ಅತ್ತಿಗೆ ಕೊಟ್ಟ ಪ್ರಾಮಿಸ್ ಇದು
9 ತಿಂಗಳ ಗರ್ಭಿಣಿ ಮೇಘನಾ ರಾಜ್ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಲಾಕ್ಡೌನ್ನಲ್ಲಿ ಮೇಘನಾ ಗರ್ಭಿಣಿಯಂದು ತಿಳಿದ ಕ್ಷಣ ಚಿರು ಪ್ರತಿಯೊಂದೂ ಕ್ಷಣವನ್ನು ಪತ್ನಿ ಜೊತೆ ಕಳೆಯಬೇಕೆಂದು ಬಯಸಿದ್ದರಂತೆ. ಅದಕ್ಕೆ ಸರಿಯಾಗಿ ಲಾಕ್ಡೌನ್ ಅನೌನ್ಸ್ ಆಗಿದ್ದರಿಂದ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ, ಪ್ರತೀ ದಿನವನ್ನೂ ಸೆಲೆಬ್ರೇಶನ್ನಂತೆ ಕಳೆದರಂತೆ. ಕೆಲಸದಲ್ಲಿ ಬ್ಯುಸಿ ಇದ್ದಿದ್ದರೆ ಚಿರುಗೆ ತನ್ನೊಂದಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲ. ಚಿರು ಕೊನೇ ದಿನಗಳನ್ನು ಅದ್ಭುತವಾಗಿ ಕಳೆಯಲಾಗಿದೆ. ಅಲ್ಲದೇ ಅದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳೆಂದು, ನೆನಪಿಸಿಕೊಂಡಿದ್ದಾರೆ ಚಿರು ಪತ್ನಿ ಮೇಘನಾ.
ಅಂದು ಜೂನ್ 8. ಮಟ ಮಟ ಮಧ್ಯಾಹ್ನ. ಮೇಘನಾ, ಧ್ರುವ ಸರ್ಜಾ ಹಾಗೂ ಪ್ರೇರಣಾ ಒಟ್ಟಾಗಿ ಮನೆ ಹೊರಗಿದ್ದರಂತೆ. ಆಗ ಚಿರು ಆಯ ತಪ್ಪಿ ಬಿದ್ದರೆಂದು ಮಾವ ಇವರಿಗೆ ಹೇಳಿದಾಗ ಒಮ್ಮೆಯೇ ಶಾಕ್ ಆಯಿತು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಹೃದಯಾಘಾತವಾಗಿತ್ತು ಚಿರುಗೆ. ಚಿರು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರು ಕೊನೆಯುಸಿರೆಳೆದಿದ್ದು...ಎಲ್ಲವೂ ಕೆಲವೇ ಕ್ಷಣಗಳಲ್ಲಿ ಮುಗಿದು ಹೋದವು, ಎಂದು ಮರಗುತ್ತಾರೆ ಸುಂದರ್ ರಾಜ್ ಪುತ್ರಿ.
ತುಂಬು ಗರ್ಭಿಣಿ ಮೇಘನಾ ಜೊತೆ ಹೆಜ್ಜೆ ಹಾಕ್ತಿರೋ ಚಿರು: ಮನಮುಟ್ಟುವ ಫೋಟೋ ವೈರಲ್
ಕೊನೆಯ ಮಾತು:
ಚಿರು ಮನೆಯಲ್ಲಿ ಪ್ರಜ್ಞೆ ತಪ್ಪಿದರೂ, ನಡುವೆ ಒಮ್ಮೆ ಕಣ್ಣು ಬಿಟ್ಟಿದ್ದರಂತೆ. ಎಚ್ಚರವಾದಾಗ ಮೇಘನಾ ಜೊತೆ ಮಾತನಾಡಿದ್ದಾರೆ. 'ನೀನು ಏನೂ ಟೆನ್ಶನ್ ತಗೋಬೇಡ. ನನಗೆ ಏನಾಗೋಲ್ಲ,' ಎಂಬ ಭರವಸೆಯನ್ನೂ ನೀಡಿದ್ದರಂತೆ. ಆದರೆ, ಎಲ್ಲವೂ ವಿಧಿಯಾಟ. ಜೀವನದಲ್ಲಿ ಏನೇನೋ ಆಗಿ ಹೋಯಿತು, ಎಂದು ಮಮ್ಮುಲ ಮರುಗಿದ್ದಾರೆ ಸ್ಯಾಂಡಲ್ವುಡ್ ನಟಿ.
ಯಾವಾಗ ಮೇಘನಾ ಗರ್ಭಿಣಿ ಎಂದು ತಿಳಿಯಿತೋ, ಚಿರುಗೆ ಸಂಭ್ರಮವೋ ಸಂಭ್ರಮವಂತೆ. ಅಭಿಮಾನಿಗಳೊಂದಿಗೆ ಈ ಸಂತೋಷದ ವಿಷಯದ ವಿಷಯವನ್ನು ಹೇಗೆ ಹಂಚಿಕೊಳ್ಳಬೇಕಂದೂ ಹತ್ತು, ಹಲವು ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದರಂತೆ. ಆದರೆ, ಮನೆಯ ಹಿರಿಯರು ಈಗಲೇ ಯಾರಿಗೂ ಹೇಳುವುದು ಬೇಡ. ಐದು ತಿಂಗಳಾಗಲೆಂದು ಸಹಜವಾಗಿಯೇ ಹೇಳಿದ್ದರಿಂದ ವಿಷಯವನ್ನು ಬಚ್ಚಿಟ್ಟಿದ್ದರಂತೆ. ಆದ್ದರಿಂದ ಮನೆಯವರು ಹಾಗೂ ಕೆಲವೇ ಆಪ್ತರಿಗೆ ಮಾತ್ರ ಈ ಸಂತೋಷದ ಸುದ್ದಿ ತಿಳಿಸಿದ್ದರಂತೆ. ಆದರೆ, ಅಂದುಕೊಂಡಿದ್ದು ಆಗಲೇ ಇಲ್ಲ. ತಾವು ಅಮ್ಮನಾಗುತ್ತಿರುವ ವಿಷಯ ಅಭಿಮಾನಿಗಳಿಗೆ ಗೊತ್ತಾಗುವಾಗ, ಚಿರುವನ್ನೇ ಕಳೆದುಕೊಳ್ಳಬೇಕಾಯಿತೆಂದು ಕಣ್ಣೀರಿಡುತ್ತಾರೆ ಮೇಘನಾ.
"
ಮನೆಯಲ್ಲಿಯೇ ಮಾಡಿದ ಸಾಂಪ್ರಾದಾಯಿಕ ಸೀಮಂತ, ಸ್ನೇಹಿತರಾದ ಪನ್ನಗಾಭರಣ ಮತ್ತು ಟೀಂ ನಡೆಸಿದ ಸೀಮಂತ ಹಾಗೂ ಧ್ರುವ ಸರ್ಜಾ ಆಯೋಜಿಸಿದ್ದ ಸೀಮಂತದ ಬಗ್ಗೆ ಮಾತನಾಡಿದ ಮೇಘನಾ, ಚಿರು ಇರುವಾಗಲೇ ಸೀಮಂತ ಹೀಗೇ ಆಗಬೇಕೆಂದು ಕನಸು ಕಂಡಿದ್ದರು. ಅದರಂತೆಯೇ ನಮ್ಮ ಮದುವೆಯಾದ ಸ್ಥಳದಲ್ಲಿಯೇ, ಚಿರುವಿನ ದೊಡ್ಡ ಕಟ್ ಔಟ್ ನಿಲ್ಲಿಸಿ, ಸೀಮಂತ ಮಾಡಿ ನನ್ನ ಖುಷಿಯನ್ನು ಹೆಚ್ಚಿಸಿದ್ದಾರೆ. ನನಗೆ ಅದ್ಯಾವ ಸಂಭ್ರಮವೂ ಇರಲಿಲ್ಲ. ಆದರೆ, ಮನೆಯವರು, ಸ್ನೇಹಿತರು ನನ್ನ ಖುಷಿಯನ್ನು ಹೆಚ್ಚಿಸಿದ್ದಾರೆಂದರು.
"
ಚಿರು ನಾಲ್ಕು ಜನರಿಗೆ ಮಾಡಿರುವ ಕೆಲಸವನ್ನು ಯಾವತ್ತೂ ಜಗಜ್ಜಾಹಿರವಾಗುವಂತೆ ಮಾಡುತ್ತಿರಲಿಲ್ಲ. ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಸದಾ ನಗುತ್ತಲೇ ಇದ್ದ ಜೀವನೋತ್ಸಾಹಿ. ಸೋತರೂ, ತಲೆ ಕೆಡಿಸಿಕೊಳ್ಳದೇ ಫೀನಿಕ್ಸ್ನಂತೆ ಎದ್ದು ಬರುತ್ತಿದ್ದ ಆಶಾವಾದಿ. ಅವರ ಆದರ್ಶಗಳೇ ನನಗೆ ಶ್ರೀ ರಕ್ಷೆ. ನನ್ನ ಮಗುವನ್ನೂ ಚಿರುವಿನ ಆದರ್ಶದಡಿಯಲ್ಲಿಯೇ ಬೆಳೆಸುತ್ತೇನೆ. ಜೀವನದಲ್ಲಿ ಭರವಸೆ ಕಳೆದುಕೊಳ್ಳದೇ ಬದುಕುತ್ತೇನೆ, ಎಂದ ಮೇಘನಾ, ಪತಿಗೆ ಕೊಟ್ಟ ಮಾತು ಉಳಿಸಿಕೊಳ್ಳುವೆ ಎಂದಿದ್ದಾರೆ.
ತುಂಬು ಗರ್ಭಿಣಿಯಾದ ಮೇಘನಾ ಯಾವ ಕ್ಷಣದಲ್ಲಾದರೂ ಮಗುವಿಗೆ ಜನ್ಮ ನೀಡಬಹುದು. ದೇವರು ಅವರಿಗೆ ಒಳ್ಳೇಯದು ಮಾಡಲಿ. ಬಂದ ಕಷ್ಟವನ್ನು ಎದುರಿಸುವ ಶಕ್ತಿಯನ್ನು ಆ ದೇವರು ಮತ್ತಷ್ಟು ನೀಡಲೆಂದು ನಮ್ಮೆಲ್ಲರ ಪ್ರಾರ್ಥನೆಯೂ ಹೌದು.