ಎವರ್‌ಗ್ರೀನ್‌ ಸುಂದರಿ ಸುಮನ್‌ ರಂಗನಾಥ್‌ ಇತ್ತೀಚೆಗೆ ಮದುವೆ ಕಾರಣಕ್ಕೆ ಸುದ್ದಿಯಲ್ಲಿದ್ದರು. ಇದೀಗ ರಿಲೀಸ್‌ಗೆ ರೆಡಿ ಆಗಿರುವ ‘ದಂಡುಪಾಳ್ಯಂ 4’ ಚಿತ್ರದಲ್ಲಿನ ಸುಂದ್ರಿ ಪಾತ್ರದ ಮೂಲಕ ಸಿಕ್ಕಾಪಟ್ಟೆಸದ್ದು ಮಾಡುತ್ತಿದ್ದಾರೆ. 

ಈ ಚಿತ್ರ ನವೆಂಬರ್‌ ಮೊದಲ ವಾರ ತೆರೆಗೆ ಬರುತ್ತಿದೆ. ಫಸ್ಟ್‌ ಟೈಮ್‌ ದಂಡುಪಾಳ್ಯಂ ಗ್ಯಾಂಗ್‌ಗೆ ಎಂಟ್ರಿ ಆಗಿರುವ ನಟಿ ಸುಮನ್‌ ರಂಗನಾಥ್‌ ಈಗಾಗಲೇ ತಮ್ಮ ಖತರ್ನಾಕ್‌ ಲುಕ್‌ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಬೀಡಿ ಸೇದುತ್ತಾ ರಗಡ್‌ ಆಗಿರುವ ಅವರ ಪಾತ್ರದ ಫಸ್ಟ್‌ ಲುಕ್‌ ಈಗಾಗಲೇ ಸಾಕಷ್ಟುಸುದ್ದಿ ಆಗಿದೆ. ಕನ್ನಡದ ಸಿನಿ ಪ್ರೇಕ್ಷಕರ ಪಾಲಿಗೆ ‘ನೀರ್‌ ದೋಸೆ’ ತಿನ್ನಿಸಿ ರಂಜನೆಯ ಭರಪೂರ ಕಿಕ್‌ ನೀಡಿದ್ದ ಸುಮನ್‌ ಈಗ ನಟೋರಿಸ್‌ ಪಾತ್ರದೊಂದಿಗೆ ತೆರೆ ಮೇಲೆ ಬರುತ್ತಿರುವುದೇ ಕುತೂಹಲದ ಸುದ್ದಿ.

Add Asianetnews Kannada as a Preferred SourcegooglePreferred

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನ್ ರಂಗನಾಥನ್

ಫಸ್ಟ್‌ ಟೈಮ್‌ ಇದು...

‘ ನನ್ನ ಆ್ಯಕ್ಟಿಂಗ್‌ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಮತ್ತು ವಿಶಿಷ್ಟವಾದ ಪಾತ್ರ. ಸುಂದ್ರಿ ಅಂತ ಆ ಪಾತ್ರದ ಹೆಸರು. ಅವಳ ಆ್ಯಟಿಟ್ಯೂಡ್‌ ತುಂಬಾ ರಫ್‌. ಆಕೆ ಎಲ್ಲಿ ಬೇಕಾದ್ರೂ ಊಟ ಮಾಡ್ತಾಳೆ, ಎಲ್ಲಿ ಬೇಕಾದ್ರೂ ಮಲಗುತ್ತಾಳೆ, ಸ್ಮೋಕ್‌ ಮಾಡ್ತಾಳೆ. ಯಾರಿಗೂ ಕೇರ್‌ ಮಾಡದ ರಫ್‌ ಹೆಂಗಸು. ಅವಳ ಮಾತು, ಸ್ವಭಾವ ಎಲ್ಲವೂ ವಿಚಿತ್ರ. ಸಾಮಾನ್ಯವಾಗಿ ಇಂತಹ ಪಾತ್ರಕ್ಕೆ ನಾನು ಇಲ್ಲಿ ತನಕ ಬಣ್ಣ ಹಚ್ಚಿರಲಿಲ್ಲ. ಅಂತಹ ಪಾತ್ರಗಳೂ ಸಿಕ್ಕಿರಲಿಲ್ಲ. ನಿರ್ದೇಶಕರು ಪಾತ್ರದ ಬಗ್ಗೆ ಹೇಳಿದಾಗ ಅರಗಿಸಿಕೊಳ್ಳುವುದೇ ಕಷ್ಟಎನಿಸಿತು. ಯಾಕಂದ್ರೆ ಅಂತಹ ಪಾತ್ರಗಳನ್ನು ನಿಭಾಯಿಸುವುದು ಕಲಾವಿದರಿಗೆ ಕಷ್ಟ. ನನಗೂ ಹಾಗೆ ಎನಿಸಿತು. ನಿಭಾಯಿಸುವುದಕ್ಕೆ ತಯಾರಿಯೂ ಬೇಕೆನಿಸಿತು. ಕೊನೆಗೆ ಒಂದಷ್ಟುಸಮಯ ತೆಗೆದುಕೊಂಡು ಪಾತ್ರವನ್ನು ಡೈಜೆಸ್ಟ್‌ ಮಾಡಿಕೊಂಡೆ. ಆನಂತರವೇ ಅಭಿನಯಿಸಲು ಸಾಧ್ಯವಾಯಿತು’ಎನ್ನುತ್ತಾರೆ ನಟಿ ಸುಮನ್‌ ರಂಗನಾಥ್‌.

ನಮ್ಮ ಮ್ಯಾರೇಜ್‌ ಲೈಫ್‌ ಚೆನ್ನಾಗಿದೆ. ಇಬ್ಬರದೂ ಪರಸ್ಪರ ಅರ್ಥ ಮಾಡಿಕೊಳ್ಳುವ ಮನಸ್ಥಿತಿ. ಅವರು ಬಿಸಿನೆಸ್‌, ನಾನು ನಟನೆ. ಜೀವನ ಸುಂದರವಾಗಿದೆ. ಸಿನಿಮಾ ಬದುಕು ಕೂಡ ಅಷ್ಟೇ ಸೊಗಸಾಗಿದೆ.- ಸುಮನ್‌ ರಂಗನಾಥ್‌, ನಟಿ

ಪಾತ್ರದ ಬಗ್ಗೆ ಕೇಳಿ ಶಾಕ್‌ ಆಗಿದ್ದೆ...

ಇದು ‘ದಂಡು ಪಾಳ್ಯಂ’ ಚಿತ್ರ ಸರಣಿಯ ನಾಲ್ಕನೇ ಭಾಗ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ ತೆರೆ ಕಂಡ ಅದರ ಮೂರು ಭಾಗಗಳ ಕತೆ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅದೊಂದು ನಟೋರಿಸ್‌ ಗ್ಯಾಂಗ್‌ನ ಕತೆ. ಆದರೆ ಆ ಕತೆಗೂ, ಈ ಸಿನಿಮಾಕ್ಕೂ ಹೆಚ್ಚು ಕನೆಕ್ಷನ್‌ ಇಲ್ಲ. ಇದೊಂದು ಹೊಸ ಕತೆ ಅಂತಾರೆ ನಿರ್ಮಾಪಕ ವೆಂಕಟ್‌. ಆದರೆ ಸುಮನ್‌ ರಂಗನಾಥ್‌ ಅವರಿಗೆ ಹಿಂದಿನ ಸಿನಿಮಾಗಳ ಅಸಲಿ ಕತೆ ಏನು ಅಂತ ಗೊತ್ತಿಲ್ಲ. ಯಾಕಂದ್ರೆ ಅವರು ಆ ಸಿನಿಮಾ ನೋಡಿಲ್ಲ. ನಿರ್ದೇಶಕರು ಫಸ್ಟ್‌ ಟೈಮ್‌ ಈ ಸಿನಿಮಾಕ್ಕೆ ಅವರನ್ನು ಭೇಟಿ ಮಾಡಿ, ಕತೆ ಜತೆಗೆ ಪಾತ್ರದ ಬಗ್ಗೆ ಹೇಳಿದಾಗ ಇದೇನೋ ಹೊಸ ತರದ ಕತೆ, ಜನ ಹೀಗೆಲ್ಲ ಇರ್ತಾರೆಯೇ ಅಂತ ಚಿತ್ರತಂಡವನ್ನೇ ಪ್ರಶ್ನಿಸಿದ್ದರಂತೆ.

ದಾಂಪತ್ಯಕ್ಕೆ ಕಾಲಿಟ್ಟ ತಕಧಿಮಿತ ಜಡ್ಜ್, ಸ್ಯಾಂಡಲ್‌ವುಡ್ ಬ್ಯೂಟಿ ಸುಮನ್

‘ಒಂದು ಪಾತ್ರದ ಬಗ್ಗೆ ಕೇಳುವಾಗ ಆ ಬಗೆಯ ವ್ಯಕ್ತಿಗಳನ್ನು ಕಲ್ಪಿಸಿಕೊಳ್ಳುವುದು ಸಹಜ. ಆದರೆ ನನಗೆ ಈ ಕತೆ ಮತ್ತು ಪಾತ್ರ ಕೇಳುವಾಗ ಜನ್ರು ಹೀಗೂ ಇರ್ತಾರಾ ಎನ್ನುವ ಪ್ರಶ್ನೆ ಎದುರಾಯ್ತ. ಯಾಕಂದ್ರೆ ಅಂತಹ ವ್ಯಕ್ತಿಗಳ ಬಗ್ಗೆ ನನಗೆ ಕೇಳಿ ನೋಡಿ ಗೊತ್ತಿರಲಿಲ್ಲ’ ಎನ್ನುತ್ತಾರೆ ಸುಮನ್‌.

ಡಿಸ್ಟರ್ಬ್‌ ಮಾಡಿದ ಪಾತ್ರ...

‘ದಂಡುಪಾಳ್ಯಂ’ ಚಿತ್ರದ ಸರಣಿ ನೋಡಿದವರಿಗೆ ಅಲ್ಲಿನ ಕ್ರೌರ್ಯದ ಚಿತ್ರಣ ಗೊತ್ತೇ ಇದೆ. ಅದರ ಭಾಗ 4 ರಲ್ಲೂ ಅದು ಮುಂದುವರೆದಿದೆ ಅಂತ ಚಿತ್ರದ ಟ್ರೇಲರ್‌ ಹೇಳುತ್ತಿದೆ. ಸುಮ್ಮನೆ ನೋಡಿದ್ರೆ ಎದೆ ಝಲ್‌ ಎನಿಸೋ ಸುಂದ್ರಿ ಪಾತ್ರ ನಿಭಾಯಿಸಿ ಬರುವ ಹೊತ್ತಿಗೆ ಸುಮನ್‌ ಕೂಡ ತುಂಬಾ ಡಿಸ್ಟರ್ಬ್‌ ಆಗಿದ್ದರಂತೆ. ಅದರ ಹ್ಯಾಂಗೋವರ್‌ನಿಂದ ಬರುವುದಕ್ಕೆ ಒಂದಷ್ಟುಸಮಯ ಬೇಕಾಯಿತ್ತಂತೆ. ‘ಅಂತಹ ಪಾತ್ರಗಳಿಗೆ ಜೀವ ತುಂಬುವುದು ತುಂಬಾ ಕಠಿಣ. ಆದ್ರೂ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಬೇಕಾದ್ರೆ ಅಷ್ಟೇ ಕ್ರೌರ್ಯ ತುಂಬಿಕೊಂಡು ಅಭಿನಯಿಸುವುದು ಅನಿವಾರ್ಯ. ನನಗೂ ಕಠಿಣ ಎನಿಸಿತು. ಮೈಂಡ್‌ ತುಂಬಾ ಡಿಸ್ಟರ್ಬ್‌ ಆದಂತಾಯ್ತು’ ಎನ್ನುತ್ತಾರೆ ಸುಮನ್‌ ರಂಗನಾಥ್‌. ವೆಂಕಟ್‌ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ನಾಯಕ್‌ ನಿರ್ದೇಶಕರು. ತೆಲುಗು ನಟ ಸಂಜೀವ್‌, ವಿಠಲ್‌ ರಾಮ್‌ ದುರ್ಗ, ಮುಲೆಟ್‌ ಓಮು, ಅರುಣ್‌ ಬಚ್ಚನ್‌ ಸೇರಿ ಹಲವರು ಚಿತ್ರದಲ್ಲಿದ್ದಾರೆ.