ಶಿವರಾತ್ರಿ ಹಬ್ಬದಂದು ಕುಟುಂಬಕ್ಕೆ ಅವಳಿ ಗಂಡು ಮಕ್ಕಳು ಬರ ಮಾಡಿಕೊಂಡ ಗೋಲ್ಡನ್ ಕ್ವೀನ್.

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್ ಅಮೂಲ್ಯ ಇಂದು ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ಶಿವರಾತ್ರಿ ಹಬ್ಬದಂದು ಜಗದೀಶ್ ನಿವಾಸಕ್ಕೆ ಎರಡು ಮುದ್ದಾದ ಗಂಡು ಮಕ್ಕಳ ಆಗಮನವಾಗಿವೆ. ಜಯನಗರದಲ್ಲಿರುವ ಕ್ಲೌಡ್‌ ನೈನ್ ಆಸ್ಪತ್ರೆಯಲ್ಲಿ ಇಂದು 11.45ಕ್ಕೆ ಅವಳಿ ಗಂಡು ಮಕ್ಕಳು ಜನಿಸಿವೆ.

Add Asianetnews Kannada as a Preferred SourcegooglePreferred

ತಾಯಿ ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ.

ಗರ್ಭ ಧರಿಸಿದ ಕೆಲವು ತಿಂಗಳ ನಂತರ ಪತಿ ಜಗದೀಶ್ ಜೊತೆ ಇರುವ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದ ನಟಿ, ನಂತರ ತಮ್ಮ ಫೋಟೋಗಳನು ಶೇರ್ ಮಾಡಿ ಕೊಳ್ಳುತ್ತಲೇ ಇದ್ದರು. ಕನ್ನಡ ಚಿತ್ರರಂಗ ಸೇರಿ, ಅಭಿಮಾನಿಗಳು, ಸಂಬಂಧಿಗಳು ಹಾಗೂ ಕೊರೋನಾ ವಾರಿಯರ್ಸ್‌ನಿಂದಲೂ ಬಗೆ ಬಗೆಯ ಸೀಮಂತ ಕಾರ್ಯಕ್ರಮಗಳು ನಡೆದಿದ್ದವು. ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಷಯ ಖುಷಿಯಾಗಿದೆ ಎಂದು ಪತಿ ಜಗದೀಶ್ ಹೇಳಿದ್ದಾರೆ.

ಕೊರೋನಾ ವಾರಿಯರ್ಸ್‌ನಿಂದ ಅಮೂಲ್ಯಗೆ ಸೀಮಂತ

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ಚಿರಪರಿಚಿತರಾದರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಕೀರ್ತಿ ಈ ಬ್ಯುಟಿಯದ್ದು. ಇತ್ತ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ 2017ರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

ಆರಂಭದಿಂದಲೂ ಚಿತ್ರರಂಗದಲ್ಲಿ ಅಮೂಲ್ಯ ವಿಭಿನ್ನ ಎಂದೇ ಗುರುತಿಸಿಕೊಂಡಿದ್ದಾರೆ. ಸಿನಿಮಾ ಆಯ್ಕೆಯಿಂದ ಹಿಡಿದು ಲೈಫ್‌ ಪಾರ್ಟರ್‌ ಆಯ್ಕೆವರೆಗೂ ಎಲ್ಲಾ ವಿಷಯಗಳಲ್ಲಿಯೂ ಅಮೂಲ್ಯ ನಡೆದಿದ್ದೇ ದಾರಿ ಎಂದೇ ಹೇಳಬಹುದು. ಇದೀಗ ಅವಳಿ ಮಕ್ಕಳು ಕೂಡ ಅಮೂಲ್ಯ ಎಲ್ಲರಿಗಿಂತ ವಿಭಿನ್ನ ಎಂಬುದಕ್ಕೆ ಸಾಕ್ಷಿಯಾದಂತಾಗಿದೆ. ಚಿತ್ರರಂಗದಲ್ಲಿ ಯಾವ ನಟಿಯೂ ಅವಳಿ ಮಕ್ಕಳು ಆಗಿರಲಿಲ್ಲ. ಹೀಗಾಗಿ ಅಭಿಮಾನಿಗಳು ಜಗದೀಶ್‌ ಕುಟುಂಬಕ್ಕೆ ಡಬಲ್ ಧಮಾಕ ಎಂದೇ ಹೇಳುತ್ತಿದ್ದಾರೆ. 

ಮೊದಲು ವಿವಿಧ ಆಹಾರ ತಿನಿಸುಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಜಗದೀಶ್ ಮತ್ತು ಅಮೂಲ್ಯ ಫೋಟೋ ಹಂಚಿಕೊಂಡಿದ್ದರು. ಅಮೂಲ್ಯ ತುಂಬಾನೇ ಫುಡ್ಡೀ ಆಗಿರುವ ಕಾರಣ ಇದು ಅವರಿಗೆ ಸೂಟ್ ಆಗುತ್ತದೆ ಎನ್ನುತ್ತಿದ್ದರು. ಕಳೆದ ತಿಂಗಳು ಜಗದೀಶ್ ನಿವಾಸದಲ್ಲಿ ಸಂಪ್ರದಾಯದಂತೆ ಅದ್ಧೂರಿಯಾಗಿ ಸೀಮಂತ ಮಾಡಿದ್ದರು. ಜನಪ್ರಿಯ ಈವೆಂಟ್ ಮ್ಯಾನೇಜರ್ ಇವರು ಸೀಮಂತಕ್ಕೆ ಹೂವಿನ ಅಲಂಕಾರ ಮಾಡಿದ್ದರು. ಕೆಂಪು ಮತ್ತು ಕ್ರೀಮ್ ಕಾಂಬಿನೇಷನ್‌ನಲ್ಲಿರುವ ಸೀರೆ ಧರಿಸಿದ್ದ ಅಮೂಲ್ಯ ಹಿಂದೆ ಹಸಿರು ಬಣ್ಣದ ಗಿಣಿಗಳಿರುವ ಹೂವಿನ ಅಲಂಕಾರ ಮಾಡಿದ್ದರು. ರಾಜಕೀಯ ಗಣ್ಯರೂ ಆಗಮಿಸಿ ಶುಭ ಹಾರೈಸಿದ್ದರು. 

ಕೊರೋನಾ ವಾರಿಯರ್ಸ್‌ಯಿಂದ ನಟಿ ಅಮೂಲ್ಯಗೆ ಸೀಮಂತ!

ಅದಾದ ನಂತರ ಅಮೂಲ್ಯ ಕಾಲೇಜ್ ಸ್ನೇಹಿತರು ಖಾಸಗಿ ಹೋಟೆಲ್‌ನಲ್ಲಿ ಬೇಬಿ ಶವರ್ ಹಮ್ಮಿಕೊಂಡಿದ್ದರು. ಈ ವೇಳೆ ಬಿಗ್ ಬಾಸ್ ಸೀಸನ್‌ 8ರ ವೈಷ್ಣವಿ ಗೌಡ ಕೂಡ ಭಾಗಿಯಾಗಿದ್ದರು. ಸಿನಿಮಾ ರಂಗದಲ್ಲಿ ಎಲ್ಲರೊಟ್ಟಿಗೆ ಉತ್ತಮ ಸ್ನೇಹ ಹೊಂದಿರುವ ಅಮೂಲ್ಯಗೆ ಐಷಾರಾಮಿ ತಾಜ್‌ ಹೋಟೆಲ್‌ನಲ್ಲಿ ಮಾಡ್ರನ್ ಸೀಮಂತವನ್ನೂ ಮಾಡಲಾಗಿತ್ತು. ಸಿನಿ ರಂಗದ ಒಬ್ಬರನ್ನೂ ಮಿಸ್ ಮಾಡದೇ ಆಹ್ವಾನಿಸಿದ್ದರು. ಮೂರು ಸಲ ಸೀಮಂತ ಆಯ್ತು ಅಂದುಕೊಳ್ಳುವಷ್ಟರಲ್ಲಿಯೇ ಕೊರೋನಾ ವಾರಿಯರ್ಸ್‌ ಮುಂದೆ ಬಂದು, ಅಮೂಲ್ಯಗೆ ಮುಡಿ ತುಂಬಿದ್ದರು.

ಹೌದು! ಕೊರೋನಾ ಮೊದಲ ಲಾಕ್‌ಡೌನ್‌ ಸಮಯದಲ್ಲಿ ಅಮೂಲ್ಯ ಮತ್ತು ಜಗದೀಶ್ ತಮ್ಮ ವಾರ್ಡ್‌ನಲ್ಲಿರುವ ಗರ್ಭಿಣಿಯರಿಗೆ ಸೀಮಂತ ಮಾಡಿ ಪೌಷ್ಟಿಕಾಂಶ ಇರುವ ಕಿಟ್ ನೀಡಿದ್ದರು. ಹೀಗಾಗಿ ಅವರೆಲ್ಲಾ ನಿವಾಸಕ್ಕೆ ಆಗಮಿಸಿ ಸರಳವಾಗಿ ಅಮೂಲ್ಯಗೆ ಮತ್ತೊಂದು ಸೀಮಂತ ಮಾಡಿದ್ದಾರೆ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಗದೀಶ್‌ ಜೊತೆಗಿರುವ ಸ್ನೇಹಿತರ ಕುಟುಂಬ ಕೂಡ ಆಗಮಿಸಿ ಅಮೂಲ್ಯಗೆ ಬೆಳ್ಳಿ ತೊಟ್ಟಿಲು ಮತ್ತು ಕೃಷ್ಣ ವಿಗ್ರಹವನ್ನು ಕೊಟ್ಟಿದ್ದರು.

ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಮ್‌ ವತಿಯಿಂದ ನಾವು ಅಮೂಲ್ಯ ಮತ್ತು ಜಗದೀಶ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ.