'ಬೆಂಗಳೂರು 69' ಚಿತ್ರದಲ್ಲಿ ಕಲರ್ಫುಲ್ ಹಾಡು!
ನಟಿ ಅನಿತಾ ಭಟ್ ಸದ್ದಿಲ್ಲದೆ ಹೊಸ ಸಿನಿಮಾ ಒಪ್ಪಿಕೊಂಡು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಿಕೊಂಡ ಈ ಸಿನಿಮಾದ ಹಾಡು ಸಿಕ್ಕಾಪಟ್ಟೆ ಹಾಟ್ ಆಗಿವೆ. ಈ ಹಾಡಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಅಂದಹಾಗೆ ಈ ಚಿತ್ರದ ಹೆಸರು ‘ಬೆಂಗಳೂರು 69’
ಕ್ರಾಂತಿ ಚೈತನ್ಯ ಎಂಬುವವರು ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು, ಗುಲ್ಜಾರ್ ನಿರ್ಮಾಪಕರು. ಸದ್ಯ ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಚಿತ್ರದಲ್ಲಿ ಬರುವ ಬಹು ಮುಖ್ಯವಾದ ಹಾಡಿನ ಚಿತ್ರೀಕರಣ ಕಬಿನಿಯಲ್ಲಿ ಚಿತ್ರೀಕರಿಸಿರುವುದು ಹೈಲೈಟ್. ಅನಿತಾ ಭಟ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಪವನ್ ಶೆಟ್ಟಿ, ಜಯದೇವ್ ಮೋಹನ್, ತೆಲುಗಿನ ಶೆಫಿ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿದ್ದಾರೆ.
ನಟಿ ಅನಿತಾ ಭಟ್ ಹೊಸ ಬ್ಯುಸಿನೆಸ್ ಆರಂಭ : ಏನದು..? ..
ಇದೊಂದು ಥ್ರಿಲ್ಲರ್. ಇಬ್ಬರು ಸ್ನೇಹಿತರು ಸೇರಿ ಒಬ್ಬ ಶ್ರೀಮಂತ ಹುಡುಗಿಯನ್ನು ಅಪಹರಣ ಮಾಡುತ್ತಾರೆ. ಈ ಕೃತ್ಯದ ಹಿಂದೆ ಹಣದ ಬೇಡಿಕೆ ಇರುತ್ತದೆ. ಆದರೆ, ಕಿಡ್ನಾಪ್ಗೆ ಒಳಗಾದ ಹುಡುಗಿಯ ತಂದೆ ಹಣ ಕೊಟ್ಟು ಮಗಳನ್ನು ರಕ್ಷಿಸುತ್ತಾನೆಯೇ ಅಥವಾ ಸಿನಿಮಾ ಬೇರೆ ತಿರುವು ಪಡೆದುಕೊಳ್ಳುತ್ತಾ ಅನ್ನೋದು ಸಸ್ಪೆನ್ಸ್. ಈ ಕಿಡ್ನಾಪ್ ಗ್ಯಾಂಗ್ ಜತೆ ಅನಿತಾ ಭಟ್ ಪಾತ್ರ ಯಾವ ರೀತಿ ಸೇರಿಕೊಳ್ಳುತ್ತದೆ ಅನ್ನೋದು ಮತ್ತೊಂದು ಮುಖ್ಯ ಅಂಶ.
ಹೀಗೆ ಕುತೂಹಲಕಾರಿ ಕತೆಯೊಂದಿಗೆ ಬರುತ್ತಿರುವ ‘ಬೆಂಗಳೂರು ೬೯’ ಚಿತ್ರಕ್ಕೆ ಪರುಶುರಾಮ್ ಕ್ಯಾಮೆರಾ ಹಿಡಿದಿದ್ದಾರೆ. ‘ಇದೊಂದು ವಿಶೇಷವಾದ ಕತೆಯ ಸಿನಿಮಾ. ಹೀಗಾಗಿ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ತುಂಬಾ ಮಹತ್ವ ಇದೆ. ಹೊಸಬರ ಚಿತ್ರವಾದರೂ ನೋಡುಗರಿಗೆ ಆಸಕ್ತಿ ಮೂಡಿಸುವ ಕತೆ ಮತ್ತು ತಿರುವುಗಳು ಇಲ್ಲಿವೆ’ ಎನ್ನುತ್ತಾರೆ ಅನಿತಾ. ಸದ್ಯ ಅವರ ಕೈಯಲ್ಲಿ ನಾಲ್ಕು ಚಿತ್ರಗಳಿವೆ.
ಈ ಹೊಸ ರೀತಿಯ ಹೆಸರಿನ ಚಿತ್ರಕ್ಕಾಗಿ ನಾವು ಕಬಿನಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ ಹಾಡು ತುಂಬಾ ಚೆನ್ನಾಗಿದೆ. ಈ ಹಾಡಿನಲ್ಲಿ ನನ್ನ ಕಾಸ್ಟ್ಯೂಮ್ ಕೂಡ ಚೆನ್ನಾಗಿದೆ. ಚಿತ್ರದ ಫಸ್ಟ್ ಲುಕ್ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕ್ರಾಂತಿ ಚೈತನ್ಯ ಅವರು ಒಳ್ಳೆಯ ಕತೆಯನ್ನು ಮಾಡಿಕೊಂಡಿದ್ದಾರೆ. ಚಿತ್ರದ ಪ್ರತಿ ಪಾತ್ರವೂ ನೋಡುಗರಿಗೆ ಹತ್ತಿರವಾಗಲಿದೆ.- ಅನಿತಾ ಭಟ್ ನಟಿ
ಖಳನಟ ರವಿಶಂಕರ್ ನಾಯಕನಾಗಿ ನಟಿಸುತ್ತಿರುವ ‘ಸದ್ಗುಣ ಸಂಪನ್ನ ಮಾಧವ’, ಹೊಸ ತಂಡದ ಜತೆಗೆ ‘ಕಲಿವೀರ’, ‘ಕನ್ನೇರಿ’ ಹಾಗೂ ‘ಪ್ರಭುತ್ವ’ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಪೈಕಿ ‘ಕನ್ನೇರಿ’ ಹಾಗೂ ‘ಸದ್ಗುಣ ಸಂಪನ್ನ ಮಾಧವ’ ಚಿತ್ರಗಳು ಈ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆಯಂತೆ.