ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಓವರ್ ಅಸಿಡಿಟಿ ಸಮಸ್ಯೆಯಿಂದ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾರೆ. 'UI' ಚಿತ್ರೀಕರಣದ ವೇಳೆಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಒತ್ತಡ ಮತ್ತು ಆಹಾರ ಪದ್ಧತಿಯಿಂದ ಸಮಸ್ಯೆ ಉಂಟಾಗಿರಬಹುದು. ಅಭಿಮಾನಿಗಳು ಉಪ್ಪಿ ಆರೋಗ್ಯಕ್ಕಾಗಿ ಶುಭ ಹಾರೈಸಿದ್ದಾರೆ.

ಬೆಂಗಳೂರು (ಮೇ 5): ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಓವರ್ ಅಸಿಡಿಟಿಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ. ಉಪೇಂದ್ರ ಅವರು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಕೆಲಕಾಲ ಚಿಕಿತ್ಸೆ ಪಡೆದಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಪ್ತ ಮೂಲಗಳು ತಿಳಿಸಿದ್ದಾರೆ.

ವಿಶೇಷವೆಂದರೆ, ಉಪೇಂದ್ರ ಅವರು ತಮ್ಮ ಬಹು ನಿರೀಕ್ಷಿತ 'UI' ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯೂ ಇದೇ ರೀತಿಯ ಅಸ್ವಸ್ಥತೆಯನ್ನು ಅನುಭವಿಸಿದ್ದರು. ದೀರ್ಘ ಸಮಯದ ಚಿತ್ರೀಕರಣ, ಉದ್ಯೋಗದ ಒತ್ತಡ ಮತ್ತು ಆಹಾರದ ಅವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿಂದ ಈ ಆರೋಗ್ಯ ಸಮಸ್ಯೆ ಉಂಟಾಗಿರಬಹುದೆಂಬ ಅಂದಾಜು ವ್ಯಕ್ತವಾಗಿದೆ. ಆದರೆ ಅಭಿಮಾನಿಗಳು ಗಾಬರಿಯಾಗಬೇಕಾದ ಅಗತ್ಯವಿಲ್ಲ. ಚಿಕಿತ್ಸೆ ಬಳಿಕ ಉಪ್ಪಿ ಅವರು ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೆಲವು ದಿನ ವಿಶ್ರಾಂತಿಯ ಬಳಿಕ ಅವರು ಚೇತರಿಸಿಕೊಂಡು ತಮ್ಮ ಕೆಲಸಕ್ಕೆ ಹಿಂದಿರುಗುವ ಸಾಧ್ಯತೆ ಇದೆ.

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಅವರಿಗೆ ಬೇಗನೇ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ. ಉಪೇಂದ್ರ ಅವರ ಆರೋಗ್ಯ ಚೇತರಿಕೆ ಆಗುತ್ತಿದೆ ಎಂದು ತಿಳಿದುಬಂದಿದ್ದು, ಶೀಘ್ರವೇ ಗುಣಮುಖರಾಗಿ ಸಿನಿಮಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎಂದು ಹಾರೈಸಿದ್ದಾರೆ.