ಹುಟ್ಟುಹಬ್ಬ ಆಚರಿಸುತ್ತಿಲ್ಲ,ಟೀಸರ್ ಬಿಡುಗಡೆ ಮುಂದಕ್ಕೆ: ಸತೀಶ್ ನೀನಾಸಂ
ಆಪ್ತ ಗೆಳೆಯನಿಲ್ಲದೇ ಹುಟ್ಟುಹಬ್ಬ ಆಚರಿಸಲು ಮನಸ್ಸಿಲ್ಲ ಎಂದು ನಟ ಸತೀಶ್ ನೀನಾಸಂ.
ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರು ಬಹಳ ಮಂದಿ ಇದ್ದಾರೆ. ಆದರೆ ವಿಧಿ ಆಟವೇ ಬೇರೆ ಇತ್ತು, ಕೊನೆಯ ಕ್ಷಣದವರೆಗೂ ಜೊತೆಯಾಗಿ ನಿಂತು ದುಃಖದಿಂದ ವಿದಾಯ ಹೇಳು ಪರಿಸ್ಥಿತಿ ಎದುರಿಸಿದ್ದು ನಟ ಸತೀಶ್ ನೀನಾಸಂ.
ಜೂನ್ 14ರಂದು ರಸ್ತೆ ಅಪಘಾತದಿಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಿಧನರಾದರು. ಜನರ ಸೇವೆ, ಸಮಾಜದ ಒಳಿತಿನ ಬಗ್ಗೆ ಸದಾ ಚಿಂತಿಸುತ್ತಿದ್ದ ನಟನ ಅಂಗಾಂಗಗಳನ್ನು ದಾನ ಮಾಡಿ, 7 ಜನರ ಜೀವನಕ್ಕೆ ಬೆಳಕಾದರು. ಸಂಚಾರಿ ವಿಜಯ್ ಇನ್ನಿಲ್ಲ ಎನ್ನುವ ನೋವು ಗೆಳೆಯ ಸತೀಶ್ಗೆ ಕಾಡುತ್ತಿದೆ. ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ.
'ಗೆಳೆಯರೇ ಇದೇ 20ರಂದು ನನ್ನ ಹುಟ್ಟುಹಬ್ಬ, ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬಾ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹೀಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ. ಥ್ಯಾಂಕ್ ಯೂ..' ಎಂದು ಸತೀಶ್ ಬರೆದುಕೊಂಡಿದ್ದಾರೆ.
ಸತೀಶ್ ಮತ್ತು ವಿಜಯ್ ಅವರ ಗೆಳೆತನವನ್ನು ಇಡೀ ಕರ್ನಾಟಕವೇ ನೋಡಿದೆ. ವಿಜಯ್ ಆಸ್ಪತ್ರೆಗೆ ದಾಖಲಾದ ಕ್ಷಣದಿಂದಲೂ ವಿಜಯ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು ಸತೀಶ್, ಸಹೋದರನಂತೆ ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದರು. ಗುಂಡಿಯೊಳಗೆ ಇಳಿದು ಕೆಲವುೊಂದು ಶಾಸ್ತ್ರಗಳನ್ನೂ ಮಾಡಿದ್ದರು. ಇವರಿಬ್ಬರ ಫೋಟೋ ಹಾಗೂ ವಿಡಿಯೋಗಳನ್ನು ಟ್ರೋಲ್ ಪೇಜ್ಗಳಲ್ಲಿ ಹಂಚಿಕೊಂಡು ಇದು ನಿಜವಾದ ಸ್ನೇಹ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.