ಆ್ಯಕ್ಷನ್ ಥ್ರಿಲ್ಲರ್ 'ರಾ' ಚಿತ್ರಕ್ಕೆ ಸಂತೋಷ್ ಬಾಲರಾಜ್ ನಾಯಕ
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಸಮಾಜದ ಡಾರ್ಕ್ ಸೈಡ್ ಅನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತೇವೆ. ಇದು ಭೂಗತ ಜಗತ್ತು, ರೌಡಿಸಂ ಕತೆಯಲ್ಲ. ಚಿತ್ರ ಶೀರ್ಷಿಕೆಗೆ ತಕ್ಕಂತೆ ಸಖತ್ ರಗಡ್ ಆಗಿರುತ್ತೆ ಎಂದು ನಿರ್ದೇಶಕ ಮಂಜುನಾಥ.ಕೆ.ಪಿ ಹೇಳಿದರು.
ಸ್ಯಾಂಡಲ್ವುಡ್ನಲ್ಲಿ 'ಗಣಪ' ಮತ್ತು 'ಕರಿಯ 2' ಚಿತ್ರಗಳಿಂದ ಕನ್ನಡ ಸಿನಿರಸಿಕರ ಗಮನ ಸೆಳೆದ ನಟ ಸಂತೋಷ್ ಬಾಲರಾಜ್. ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರರಾಗಿರುವ ಸಂತೋಷ್ ಅಭಿನಯದ 'ರಾ' ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ನಿರ್ಮಾಪಕಿ ವಿನುತಾ ಮಂಜುಳಾ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
'ರಾ' ಚಿತ್ರಕ್ಕೆ ಮಂಜುನಾಥ.ಕೆ.ಪಿ ಆಕ್ಷನ್ ಕಟ್ ಹೇಳಿದ್ದು, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಮಂಜುನಾಥ್, 'ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಸಮಾಜದ ಡಾರ್ಕ್ ಸೈಡ್ ಅನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತೇವೆ. ಇದು ಭೂಗತ ಜಗತ್ತು, ರೌಡಿಸಂ ಕತೆಯಲ್ಲ. ಚಿತ್ರ ಶೀರ್ಷಿಕೆಗೆ ತಕ್ಕಂತೆ ಸಖತ್ ರಗಡ್ ಆಗಿರುತ್ತೆ. ನವೆಂಬರ್ನಿಂದ ಚಿತ್ರೀಕರಣ ನಡೆಯಲಿದೆ' ಎಂದರು. ಬಂಕ್ ಮಂಜುನಾಥ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಾಯಕ ಸಂತೋಷ್ ಬಾಲರಾಜ್ ಮಾತನಾಡಿ, 'ಚಿತ್ರದಲ್ಲಿ ಸೂರ್ಯ ಎಂಬ ಪಾತ್ರ ಮಾಡುತ್ತಿದ್ದೇನೆ. ಮೂರ್ನಾಲ್ಕು ಶೇಡ್ಗಳಿವೆ. ಒಂದೊಂದು ಶೇಡ್ಗೂ ಬೇರೆ ಥರ ಸ್ಕ್ರೀನ್ ಮೇಲೆ ಕಾಣಿಸುತ್ತೇನೆ. ನಾನು ಈ ಹಿಂದೆ ಮಾಡಿದ 'ಗಣಪ', 'ಕರಿಯ 2' ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ಬೇರೆ ಥರದ ಸಿನಿಮಾ ಅಂತ ಹೇಳಬಹುದು. ಇಲ್ಲಿ ಆಕ್ಷನ್ ಸೀನ್ಗಳಿವೆ, ಆದರೆ ಇದು ರೌಡಿಸಂ ಸಿನಿಮಾ ಅಲ್ಲ. ತುಂಬ ಬೇರೆ ರೀತಿಯಲ್ಲಿ ಮಂಜುನಾಥ್ ಅವರು ತೋರಿಸುತ್ತಿದ್ದಾರೆ. ಆರಂಭದಲ್ಲಿ ನಾರ್ಮಲ್ ಹುಡುಗನ ಲುಕ್ನಲ್ಲಿ, ಬಳಿಕ ಬಾಡಿ ಬಿಲ್ಡ್ ಮಾಡಿ ಪೈಲ್ವಾನ್ ಥರದ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನನ್ನು ಇದುವರೆಗೂ ನೋಡಿರದ ಸ್ಟೈಲ್ ಅಲ್ಲಿ ಕಾಣಿಸಿಕೊಳ್ಳಲಿದ್ದೇನೆ.
ನನ್ನ ಗೆಟಪ್ ಕೂಡ ಚೇಂಜ್ ಆಗಲಿದೆ' ಎಂದು ಹೇಳಿದ್ದಾರೆ. 'ರಾ' ಚಿತ್ರವನ್ನು ಬಂಕ್ ಮಂಜುನಾಥ್ ನಿರ್ಮಿಸುತ್ತಿದ್ದು, ನಿರ್ಮಾಪಕರ ಮಗಳು ರಿಯಾ ಚಿತ್ರದ ನಾಯಕಿ. 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಅವರು ಈ ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಕಾಕ್ರೋಚ್ ಸುಧಿ, ಸಾಯಿಕುಮಾರ್ ತಾರಾಗಣದಲ್ಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ವಿನುತಾ ಮಂಜುಳಾ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು.
ಇನ್ನು, ಸಂತೋಷ್ ಬಾಲರಾಜ್ 'ಬರ್ಕ್ಲಿ' ಎಂಬ ಚಿತ್ರದಲ್ಲಿ ನಟಿಸಿದ್ದು, ಸುಮಂತ್ ಕ್ರಾಂತಿ ಆಕ್ಷನ್ ಕಟ್ ಹೇಳಿದ್ದಾರೆ. ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ ಬರ್ಕ್ಲಿ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಚಿತ್ರವನ್ನು ನಾಯಕ ಸಂತೋಷ್ ತಂದೆ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ. 'ಬರ್ಕ್ಲಿ' ಸಾಹಸ ಪ್ರಧಾನ ಹಾಗೂ ಉತ್ತಮ ಮನೋರಂಜನೆಯ ಚಿತ್ರವಾಗಿದ್ದು, ನಿರ್ದೇಶನದ ಜೊತೆಗೆ ಖುದ್ದು ಸುಮಂತ್ ಕ್ರಾಂತಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ
ಈ ಹಿಂದೆ ಕೆಲ ಜಾಹೀರಾತುಗಳಲ್ಲಿ ನಟಿಸಿರುವ ಮಾಡೆಲ್ ಸಿಮ್ರಾನ್ ನಾಟೇಕರ್ 'ಬರ್ಕ್ಲಿ' ಚಿತ್ರದ ನಾಯಕಿ. ಬಹುಭಾಷಾ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಸೇರಿದಂತೆ ಹಲವಾರು ಚಿತ್ರದ ತಾರಾಗಣದಲ್ಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೃಷ್ಣಕುಮಾರ್, ಎಲ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.