Asianet Suvarna News Asianet Suvarna News

‘ಪ್ರೀತಿಯಿಂದ ರಮೇಶ್‌’ ಬಿಡುಗಡೆ: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ!

  • ರಮೇಶ್‌ ಪುಸ್ತಕ ಸಮಾಜಕ್ಕೆ ಕೊಡುಗೆ: ಅನಂತನಾಗ್‌
  • ಇದು ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ
  • ‘ಪ್ರೀತಿಯಿಂದ ರಮೇಶ್‌’ ಬಿಡುಗಡೆ ಮಾಡಿದ ನಟ
Kannada actor Ramesh Aravind book Preetiinda ramesh for college students vcs
Author
First Published Sep 12, 2022, 11:29 AM IST | Last Updated Sep 12, 2022, 11:29 AM IST

ನೈತಿಕತೆ, ಮೌಲ್ಯಗಳ ಬಗ್ಗೆ ಮಾರ್ಗದರ್ಶನ ನೀಡುವ ಕೃತಿಯನ್ನು ನಟ ರಮೇಶ್‌ ಅರವಿಂದ್‌ ನೀಡಿದ್ದಾರೆ. ಇದು ಯುವ ಸಮೂಹ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಎಂದು ಹಿರಿಯ ನಟ ಅನಂತ್‌ನಾಗ್‌ ತಿಳಿಸಿದ್ದಾರೆ.

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್‌ ಅರವಿಂದ್‌ ಅವರ ‘ಪ್ರೀತಿಯಿಂದ ರಮೇಶ್‌ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬಾಲ್ಯದಲ್ಲಿ ನಮಗೆ 30-40 ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್‌ ಅವರ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್‌ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ರಮೇಶ್‌ ಒಬ್ಬ ಶಿಸ್ತಿನ ಸಿಪಾಯಿ. ಅವರು ಸಾತ್ವಿಕತೆಯ ಪ್ರತಿರೂಪ. ಯಾರ ಬಗ್ಗೆಯೂ ಕಟು ಮಾತುಗಳನ್ನು ಆಡಿದವರಲ್ಲ. ಸಿನಿಮಾ, ಟಿವಿ, ಬರವಣಿಗೆಯಿಂದ ಅವರೊಬ್ಬ ಅಲ್‌ ರೌಂಡರ್‌ ಆಗಿ ಬೆಳೆದಿದ್ದಾರೆ. ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಮೂಲಕ ಅನಂತನೊಳಗಿದ್ದ ಅನಂತ ಅಂತಃಸತ್ವವನ್ನು ನನಗೇ ಪರಿಚಯಿಸಿದವರು ಎಂದು ನೆನಪಿಸಿಕೊಂಡರು.

 

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಮಾತನಾಡಿ, ರಮೇಶ್‌ ಆವರಿಂದ ಒಂದು ಕೆಟ್ಟಮಾತು ಬರಬಹುದು ಎಂದು ಕಳೆದ 25 ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ. ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಝೀ ಕನ್ನಡದ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ವೇದಿಕೆಯಲ್ಲಿದ್ದರು.

ಶಿವಾಜಿ ಪಾತ್ರ ಇನ್ನೂ ಇಂಟರೆಸ್ಟಿಂಗ್‌ ಆಗಿದೆ : Ramesh Aravind

ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಏರುವ ಬಗ್ಗೆ ಕೃತಿ: ಲೇಖಕ

ಕೃತಿಕಾರ ರಮೇಶ್‌ ಅರವಿಂದ್‌ ಮಾತನಾಡಿ, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದು ಹೇಳಿದರು.

ಜೀವನದ ವಿವಿಧ ಹಂತಗಳಲ್ಲಿ ಮನುಷ್ಯನ ಆಸೆಗಳು ಮತ್ತು ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ನಾನು ಮೊದಲು ಲೂನಾದಲ್ಲಿ ಓಡಾಡುತ್ತಿದೆ. ಆಮೇಲೆ ಟಿವಿಎಸ್‌ 50 ತೆಗೆದುಕೊಂಡೆ. ಆಮೇಲೆ ಬೈಕ್‌, ಆನಂತರ ಪ್ರೀಮಿಯರ್‌ ಪದ್ಮಿನಿ, ಆಮೇಲೆ ಮಾರುತಿ ಎಸ್ಟೀಮ್‌, ಬಳಿಕ ಸ್ಕೋಡಾ, ಈಗ ಇನ್ನೊಂದು ಯಾವುದೋ ಕಾರು ಇದೆ. ಇಷ್ಟುಸಾಧಿಸಲು ನನಗೆ 30 ವರ್ಷ ಬೇಕಾಯಿತು. ಹೀಗೆ ಎಲ್ಲರ ಜೀವನವೂ ಸರಳವಾಗಿ ಪ್ರಾರಂಭಗೊಂಡು ಹಂತ ಹಂತವಾಗಿ ಬೆಳೆಯುತ್ತದೆ. ಮೊದಲು ಎರಡು ಲಕ್ಷ ರು. ಬ್ಯಾಂಕಲ್ಲಿ ಇದ್ದರೆ ಸಾಕು ಎನ್ನುತ್ತಿದ್ದ ನನಗೆ ಅನಂತರ ಎಂಟು ಲಕ್ಷ ರು.ಗಳಾದರೂ ಬೇಕು ಅನಿಸಿತ್ತು. ಮೊದಲು ಹೊಟ್ಟೆಗಾಗಿ ಹೋರಾಟ, ಅನಂತರ ಸುರಕ್ಷತೆ, ಆಮೇಲೆ ಪ್ರೀತಿ ಪ್ರೇಮ, ಹೆಂಡತಿ ಮಕ್ಕಳು, ತದನಂತರ ಪ್ರಶಸ್ತಿ ಪುರಸ್ಕಾರ, ಕೊನೆಗೆ ನೆಮ್ಮದಿ, ಸಂತೋಷ, ಸಮಾಜಕ್ಕೆ ಏನಾದರೂ ಕೊಡಬೇಕು ತುಡಿತ ಹೀಗೆ ಸಾಗುತ್ತದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸುಲಭವಾಗಿ ಏರುವುದು ಹೇಗೆ ಎಂದು ಈ ಕೃತಿಯ ಮೂಲಕ ಹೇಳಲು ಹೊರಟಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್‌ ಅರವಿಂದ್‌ ಅವರ ‘ಪ್ರೀತಿಯಿಂದ ರಮೇಶ್‌ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್‌ನಾಗ್‌ ಲೋಕಾರ್ಪಣೆ ಮಾಡಿದರು. ಕೃತಿಕಾರ ರಮೇಶ್‌ ಅರವಿಂದ್‌, ಜೋಗಿ, ರಾಘವೇಂದ್ರ ಹುಣಸೂರು, ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios