ಕನ್ನಡದ ಖ್ಯಾತ ನಟಿ ಕಲ್ಪನಾ ಅವರು ನೀಡಿದ ಆಶೀರ್ವಾದದ ಫೋಟೋವನ್ನು ಖ್ಯಾತ ನಟ, ನಿರ್ದೇಶಕ ಹಂಚಿಕೊಂಡಿದ್ದಾರೆ. 1977 ರಲ್ಲಿ ತಮ್ಮ ಬಾಲ್ಯದ ಫೋಟೋಗೆ ಕಲ್ಪನಾ ಅವರು ಆಶೀರ್ವಾದ ಬರೆದಿದ್ದರು 

ಬೆಂಗಳೂರು: ಮಿನುಗುತಾರೆ ಕಲ್ಪನಾ ಚಂದನವನ ಕಂಡ ಅದ್ಭುತ ನಟಿ. ಕಲ್ಪನಾ ಅವರ ನಟನೆ ನೋಡಲು ಜನರು ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ರಂಗಭೂಮಿ ನಟಿಯಾಗದ್ದ ಕಲ್ಪನಾ ಅವರ ನೈಜ ನಟನೆಗೆ ಮಾರು ಹೋದವರಿಲ್ಲ. ಇಂದಿಗೂ ಕನ್ನಡ ವಾಹಿನಿಗಳ ರಿಯಾಲಿಟಿ ಶೋನಲ್ಲಿ ಕಲ್ಪನಾ ಅವರನ್ನು ನಕಲು ಮಾಡಲು ಯುವ ಕಲಾವಿದರು ಪ್ರಯತ್ನಿಸುತ್ತಾರೆ. ಶರಪಂಜರ, ಬೆಳ್ಳಿ ಮೋಡ, ಕಪ್ಪು ಬಿಳುಪು, ಬಯಲು ದಾರಿ, ಗಂಧದ ಗುಡಿ, ಗೆಜ್ಜೆ ಪೂಜೆ, ಬಂಗಾದರ ಹೂವು ಸೇರಿದಂಯೆ ಹಲವು ಹಿಟ್ ಸಿನಿಮಾಗಳಲ್ಲಿ ಕಲ್ಪನಾ ನಟಿಸಿದ್ದಾರೆ. ಕನ್ನಡದ ಮೇರು ನಟರಾದ ಡಾ.ರಾಜ್‌ಕುಮಾರ್, ಉದಯ್‌ ಕುಮಾರ್, ಗಂಗಾಧರ್ ಜೊತೆಯಲ್ಲಿ ಕಲ್ಪನಾ ಕೆಲಸ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ ಕಣಾಗಲ್ ಅವರ ನೆಚ್ಚಿನ ನಾಯಕಿಯರಲ್ಲಿ ಕಲ್ಪನಾ ಸಹ ಒಬ್ಬರಾಗಿದ್ದರು. ಕಲ್ಪನಾ ಅವರ ಜೀವನಾಧರಿತ ಸಿನಿಮಾಗಳು ತೆರೆ ಕಂಡಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1960 ರಿಂದ 1970ರ ಕಾಲಘಟ್ಟದಲ್ಲಿ ಕಲ್ಪನಾ ಅವರ ಜನಪ್ರಿಯತೆ ಎಷ್ಟಿತ್ತು ಅಂದ್ರೆ ಅಭಿಮಾನಿಗಳು ಅವರನ್ನು ಶೂಟಿಂಗ್ ನೋಡಲು ದೂರ ದೂರದಿಂದ ನಡೆದುಕೊಂಡು ಬರುತ್ತಿದ್ದರು. ಇಂದಿಗೂ ಎಷ್ಟೋ ಅಭಿಮಾನಿಗಳು ಮತ್ತು ಅವರ ಸಹ ಕಲಾವಿದರು ಕಲ್ಪನಾ ನೀಡಿದ ಆಟೋಗ್ರಾಫ್ ಮತ್ತು ಕೊಡುಗೆಗಳನ್ನು ಸುರಕ್ಷಿತವಾಗಿ ಕಾಯ್ದುಕೊಂಡು ಬಂದಿದ್ದಾರೆ. ಕನ್ನಡದ ನಟ, ನಿರ್ದೇಶಕ ಮತ್ತು ಯುಟ್ಯೂಬರ್ ಆಗಿರುವ ಕಲಾವಿದರೊಬ್ಬರು, ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದ ಫೋಟೋ ಹಿಂದೆ ಮಿನುಗುತಾರೆ ಕಲ್ಪನಾ ಅವರು ಆಶೀರ್ವದಿಸಿ ಬರೆದಿರುವ ಸಾಲಿನ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕನ್ನಡದ ನಟ, ನಿರ್ದೇಶಕ ಮತ್ತು ಯುಟ್ಯೂಬರ್ ರಘು ರಾಮ್ ಡಿ.ಪಿ. ಇಂದು, ಕನುಸುಗಳ ಕಾರ್ಖಾನೆ ಹೆಸರಿನ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. 80, 90ರ ಕಾಲಘಟ್ಟದ ಕಲಾವಿದರನ್ನು ಮತ್ತೊಮ್ಮೆ ಯುಟ್ಯೂಬ್ ವೇದಿಕೆಯಲ್ಲಿ ಕರೆತರುವ ಪ್ರಯತ್ನ ಮಾಡುತ್ತಿರುತ್ತಾರೆ. ತೆರೆಯ ಹಿಂದೆ ಸರಿದ ಎಷ್ಟೋ ಕಲಾವಿದರನ್ನು ಹುಡುಕಿ ಅವರ ಸಂದರ್ಶನ ಮಾಡುತ್ತಾರೆ. ಹಾಗೆ ಇತ್ತೀಚೆಗಷ್ಟೇ ತೆರೆ ಕಂಡಿದ್ದ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸುವ ಕೆಲಸ ಮಾಡಿದ್ದರು. 

ಇದನ್ನೂ ಓದಿ: ಸಾವಿಗೂ ಮೊದಲು ನಟಿ ಕಲ್ಪನಾ ಬಾಳಲ್ಲಿ ನಡೆದಿತ್ತು ಮತ್ತೊಂದು ಘೋರ ದುರಂತ!

ಇಂದು ಬೆಳಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಕನ್ನಡದ ಮಿನುಗುತಾರೆ ತಮಗೆ ಆಶೀರ್ವಾದ ಮಾಡಿರುವ ವಿಷಯವನ್ನು ಫೇಸ್‌ಬುಕ್ (Raghu Ram D. P) ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಿನುಗುತಾರೆ ಕಲ್ಪನಾ ನನ್ನ ಅಮ್ಮನ ಸ್ನೇಹಿತರಾಗಿದ್ದರು, ಈ ನನ್ನ ಬಾಲ್ಯದ ಫೋಟೋವಿನ ಹಿಂದೆ ಅವರ ಕೈ ಬರಹದಲ್ಲಿ ನನಗೆ ಆಶೀರ್ವಾದ ಮಾಡಿ,ಹಾರೈಸಿದ ಈ ಫೋಟೋ ನನಗೆ ಅತ್ಯಂತ ವಿಶೇಷವಾದದ್ದು ಎಂದು ರಘು ರಾಮ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಕನ್ನಡದಲ್ಲಿ ರುಜು ಅಂತೂ ತುಂಬಾ ಚೆನ್ನಾಗಿದೆ. ಯಾವ ವರುಷದ ಪಟ ಇದು ರಘು ಅವರೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ರಘು ರಾಮ್, ಆ ಫೋಟೋದಲ್ಲಿ ಕಲ್ಪನಾ ಅಮ್ಮ ಅವರು ಸಹಿ ಹಾಕಿದ ದಿನಾಂಕ 19/10/1977 ಎಂದು ತಿಳಿಸಿದ್ದಾರೆ. 

ನೀವೇ ಪುಣ್ಯವಂತರು ರಘು ಸರ್, ಸರ್!! ನೀವ್ ಆಗಲೇ ಸೆಲೆಬ್ರಿಟಿ ಅದೃಷ್ಟವಂತ, ನಿಮಗೆ ಒಳ್ಳೆದಾಗಲಿ‌, ನೀವೇ ಭಾಗ್ಯವಂತರು . ಧೀಮಂತಃ ಕಾಲದ ಚಂದನವನದ ಮಿನುಗುತಾರೆಯ ಆಶೀರ್ವಾದ ಪಡೆದ ನೀವೇ ಭಾಗ್ಯವಂತರು. ತುಂಬಾ ಅಪರೂಪದ (ದಾಖಲೆ) ಹಾಗೂ ಅಮೂಲ್ಯ ವಾದ ವಸ್ತು ಎಂದು ರಘು ರಾಮ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗುಡಿಗೇರಿ ಬಸವರಾಜ್ ಜೊತೆ ಮದುವೆಯಾಗಿದ್ದ ಕಲ್ಪನಾಗೆ ಸಾವು ಬಂದಿದ್ದು ಹೀಗೆ!