2018ರಲ್ಲಿ ವಿಚ್ಚೇದನ ಕೊರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದುನಿಯಾ ವಿಜಯ್‌. ಕೇಸ್‌ ವಜಾ ಮಾಡಿದ ಕೋರ್ಟ್‌.

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ವಿಚಾರವಾಗಿ ಕೋರ್ಟ್‌ ಮೆಟ್ಟಿಲು ಏರಿದ್ದರು. ಡಿವೋರ್ಸ್‌ ಬೇಕೇ ಬೇಕು ಎಂದು ದುನಿಯಾ ವಿಜಯ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಮಧ್ಯಾಹ್ನ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಅರ್ಜಿಯನ್ನು ವಜಾ ಮಾಡಿದೆ. 

'ದುನಿಯಾ ವಿಜಯ್ ಸಲ್ಲಿಸಿರುವ ಅರ್ಜಿ ವಜಾ ಆಗಿದೆ. ಈಗ ವಿಜಯ್ ಅವರನ್ನು ಸಂಪರ್ಕ ಮಾಡಿ ಮುಂದೆ ಏನು ಮಾಡಬೇಕು ಅಂತ ಹೇಳುತ್ತೇವೆ. ಸದ್ಯ ವಿಜಯ್ ಶೂಟಿಂಗ್‌ನಲ್ಲಿ ಇದ್ದಾರೆ. ವಿಜಯ್ ಅವರಿಗೆ ಇನ್ನೂ ಏನೂ ಹೇಳಿಲ್ಲ. ಮಕ್ಕಳ ಫ್ಯೂಚರ್‌ ದೃಷ್ಠಿಯಿಂದ ಮಾತನಾಡಿ ಹೇಳುತ್ತೇವೆ ಆದರೆ ಇದು ಇಲ್ಲಿಗೆ ಮುಗಿದಿಲ್ಲ. ಹೈ ಕೋರ್ಟ್‌ ಹೋಗಬೇಕಾ ಅಂತ ವಿಜಯ್ ಅವರ ಜೊತೆ ಚರ್ಚೆ ಮಾಡಿ ಹೇಳುತ್ತೇನೆ' ಎಂದು ದುನಿಯಾ ವಿಜಯ್ ವಕೀಲೆ ರಾಜ ರಾಜೇಶ್ವರಿ ಹೇಳಿದ್ದಾರೆ. 

 2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ 'ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ' ಎಂದು ವಿಜಯ್ ಹೇಳಿದ್ದರಂತೆ. ಈ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿ ಆಗಿತ್ತು. ಕೌರ್ಯ ಮತ್ತು 2 ವರ್ಷಕ್ಕಿಂತ ಹೆಚ್ಚು ಸಮಯ ಬೇರೆ ವಾಸವಿದ್ದಾರೆ ನಾಗರತ್ನ ಎಂದು ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು.

ಅಟೆನ್ಶನ್‌ ಸಿಗೋದು ಫಸ್ಟ್‌ ಸಿನಿಮಾವರ್ಗೂ ಅಷ್ಟೇ; ನೆಪೋಟಿಸಂ ಬಗ್ಗೆ ದುನಿಯಾ ವಿಜಯ್ ಪುತ್ರಿ ಹೇಳಿಕೆ

2019ರಲ್ಲಿ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಮೊದಲನೇ ಪತ್ನಿ ನಾಗರತ್ನ ಹಲ್ಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ನಾಗರತ್ನ ತಲೆಮರೆಸಿಕೊಂಡಿದ್ದರು. ಆದರೂ ಕೆಲವು ವಾರಗಳ ನಂತರ ನಾಗರತ್ನ ಅವರಿಗೆ ನಿರೀಕ್ಷಣಾ ಜಾಮೀನು ದೊರಕಿತ್ತು. ಅಲ್ಲಿ ಬಂಧನ ಭೀತಿಯಿಂದ ಪಾರಾಗಿದ್ದರು. ಒಮ್ಮೆ ಕೋರ್ಟಿನಲ್ಲಿ ದುನಿಯಾ ವಿಜಯ್ ಮತ್ತು ನಾಗರತ್ನ ಅವರು ಒಪ್ಪಂದ ಮಾಡಿಕೊಂಡಿದ್ದರಂತೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದು ಷರತ್ತು ವಿಧಿಸಿ ರಾಜಿಯಾಗಿದ್ದರು. ಆದರೂ ಅಲ್ಲಿಂದ ಬಂದ ಮೇಲೆ ಮತ್ತೆ ಜಗಳ ಆಗುತ್ತಿದ್ದ ಕಾರಣ ಬಾಂಧವ್ಯ ಸರಿಯಾಗಿ ಇರಲಿಲ್ಲ. ಹಾಗಾಗಿ ಬೇರೆ ಹೋಗಲು ನಿರ್ಧರಿಸಿದ್ದರು ಎಂದು ಖಾಸಗಿ ವೆಬ್‌ವೊಂದು ವರದಿ ಮಾಡಿತ್ತು. 

ಐಷಾರಾಮಿ ಹೋಟೆಲ್‌ಗೆ ಆಫ್ರಿಕನ್‌ ರೀತಿ ಹೋದ ದುನಿಯಾ ವಿಜಯ್ ಮಗಳು; ಫೋಟೋ ವೈರಲ್

ದುನಿಯಾ ವಿಜಯ್ ಹಿರಿಯ ಪುತ್ರಿ ರಿತನ್ಯಾ ವಿಜಯ್ ಮೊದಲ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಎರಡನೇ ಪುತ್ರಿ ಮೋನಿಕಾ ವಿದೇಶದಲ್ಲಿ ಸಿನಿಮಾಗಳ ಬಗ್ಗೆ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಪುತ್ರ ಸಾಮ್ರಾಟ್‌ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದು ಶೀಘ್ರದಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಡುವ ಲಕ್ಷಣಗಳಿದೆ.