ನಟ ಡಿಂಗ್ರಿ ನಾಗರಾಜ್ ಅವರು ‘ನಾವಿಬ್ಬರು 70 ವರ್ಷ ಸ್ನೇಹಿತರು, ಬಾಲ್ಯ ಸ್ನೇಹಿತರು.. ನಟ, ನನ್ನ ಸ್ಣೆಹಿತ ಉಮೇಶ 60 ರಲ್ಲಿ ಸಿನಿಮಾ ಬಂದಿದ್ರು, 6 ದಶಕಗಳ ಕಾಲ ಸಿನಿಮಾರಂಗವನ್ನ ಆಳಿದ್ರು.. ಡಾ. ರಾಜ್‌ಕುಮಾರ್ ಸೇರಿದಂತೆ ಹಲವರ ಜೊತೆ ನಟಿಸಿದ್ದಾರೆ..’ ಎಂದಿದ್ದಾರೆ.

ಅಗಲಿದ ಹಿರಿಯ ನಟ ಉಮೇಶ್ ಬಗ್ಗೆ ರಂಗಕರ್ಮಿ & ನಟ ಡಿಂಗ್ರಿ ನಾಗರಾಜ್ ಹೇಳಿಕೆ

ಕನ್ನಡದ ನಟ ಹಾಗು ರಂಗಕರ್ಮಿ ಡಿಂಗ್ರಿ ನಾಗರಾಜ್ (Dingri Nagaraj) ಅವರು ಅಗಲಿದ ಸ್ನೇಹಿತ, ನಟ ಉಮೇಶ್ (MS Umesh) ಅವರನ್ನು ನೆನೆದು ಹಾಡು ಹಾಡಿದ್ದಾರೆ. ಉಮೇಶ್ ನಿಧನದ ಬಗ್ಗೆ ನಟ ಡಿಂಗ್ರಿ ನಾಗರಾಜ್ ಮಾತನ್ನಾಡಿದ್ದು 'ಉಮೇಶ್ ಯಾವಾಗಲು ಒಂದು ಹಾಡು ಹಾಡ್ತಿದ್ರು, 'ಯಾರನ್ನೂ ಬಿಡಕಿಲ್ಲ ಜವರಾಯ, ಯಾರನ್ನೂ ಬಿಡಕ್ಕಿಲ್ಲ ಜವರಾಯ.. ಆಳಾಗಲಿ ಅರಸನಾಗಲಿ ಯಾರನ್ನ ಬಿಡಕಿಲ್ಲ ಜವರಾಯ..' ಅಂತ ಎಂದು ಹೇಳಿ, ಅದೇ ಹಾಡನ್ನು ಡಿಂಗ್ರಿ ನಾಗರಾಜ್ ಅವರು ಕ್ಯಾಮೆರಾ ಮುಂದೆ ಹಾಡಿ ಭಾವುಕರಾಗಿದ್ದಾರೆ.

ಬಳಿಕ ಮಾತನ್ನಾಡಿದ ನಟ ಡಿಂಗ್ರಿ ನಾಗರಾಜ್ ಅವರು 'ನಾವಿಬ್ಬರು 70 ವರ್ಷ ಸ್ನೇಹಿತರು, ಬಾಲ್ಯ ಸ್ನೇಹಿತರು.. ನಟ, ನನ್ನ ಸ್ಣೆಹಿತ ಉಮೇಶ 60 ರಲ್ಲಿ ಸಿನಿಮಾ ಬಂದಿದ್ರು, 6 ದಶಕಗಳ ಕಾಲ ಸಿನಿಮಾರಂಗವನ್ನ ಆಳಿದ್ರು.. ಡಾ. ರಾಜ್‌ಕುಮಾರ್ ಸೇರಿದಂತೆ ಹಲವರ ಜೊತೆ ನಟಿಸಿದ್ದಾರೆ. ಉಮೇಶ್ ಕುಟುಂಬದಲ್ಲಿ ಹನ್ನೊಂದು ಜನ ಮಕ್ಕಳು. ಈ ಪೈಕಿ 9 ಮಂದಿ ಮೃತಪಟ್ಟಿದ್ದಾರೆ ಎಂದದ್ದಾರೆ ನಟ ಡಿಂಗ್ರಿ ನಾಗರಾಜ್

ಇನ್ನು ಈ ಬಗ್ಗೆ ಮಾತನ್ನಾಡಿರುವ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು 'ಉಮೇಶಣ್ಣ ಅವರು ಹುಟ್ಟಿನಿಂದ ಸಾಯುವ ತನಕ ಶ್ರೀಮಂತಿಕೆಯನ್ನ ನೋಡೇ ಇಲ್ಲ. ಅವರ ಜೀವನ ಆಧಾರಿತ ಕ್ಯಾಸೆಟ್ ನನ್ನ ಬಳಿ ಇದೆ..ಅದನ್ನು ರಿಲೀಸ್ ಮಾಡಬೇಕು ಅಂದುಕೊಂಡಿದ್ದೇನೆ' ಎಂದಿದ್ದಾರೆ.

ನಟ ಉಮೇಶ್ ಅವರ ನಿಧನದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ಬಂದಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಅವರನ್ನ ಉಮೇಶ್ ಅಣ್ಣ ಅಂತಾನೇ ಕರೀತಾಯಿದ್ದೆವು. ಅವರು ಹುಟ್ಟಿನಿಂದ ಸಾಯುವ ತನಕ ಶ್ರೀಮಂತಿಕೆಯನ್ನ ನೋಡೇ ಇಲ್ಲ. ಅವರ ಮಗನ‌ ಕಳೆದುಕೊಂಡ ನೋವನ್ನ ಹೇಗೆ ತಡೆದುಕೊಂಡ್ರೋ..? ದೇವರೇ ಬಲ್ಲ. ನನ್ನನ್ನು ಯಾವಾಗಲೂ ಪ್ರೀತಿಯಿಂದ ಗಿರಿಮಾತೆ ಅನ್ನೋರು.

ಅವರ ಜೀವನ ಆಧಾರಿತ ಕ್ಯಾಸೆಟ್ ನನ್ನ ಬಳಿ ಇದೆ..ಅದನ್ನು ರಿಲೀಸ್ ಮಾಡಬೇಕು ಅಂದುಕೊಂಡಿದ್ದೇನೆ. ಅವರ ಜೀವನ‌ ತುಂಬಾ ಕಷ್ಟಕರವಾಗಿತ್ತು. ಆದ್ರೆ ಕೊನೇ ದಿನಗಳಲ್ಲಿ ಅವರ ಜೊತೆ ನಾನು ಸಮಯ ಕಳೆದಿದ್ದೇನೆ. ಅವರಿಗೆ ದೇವರು ಬೇಗ ಮುಕ್ತಿ ಕೊಡಲಿ ಅಂತ ನಾನು ಬೇಡಿ‌ಕೊಳ್ತೀನಿ. ಕಲಾವಿದರ ಸಂಘ ಹಾಗೂ ಸರ್ಕಾರ ನಮಗೆ ಸಹಕಾರ ಕೊಟ್ಟಿದೆ ಎಂದು ಹೇಳಿದರು.

ಕೊನೇ ಕ್ಷಣದಲ್ಲಿ ಬಹಳ ಕಷ್ಟ ಅನುಭವಿಸಿದರು:

ನಟ ಉಮೇಶ್ ಅವರ ಸ್ಥಳೀಯ ಒಡನಾಡಿ ಹಾಗೂ ಅಪ್ತೊರೊಬ್ಬರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಉಮೇಶಣ್ಣ ಒಬ್ಬ ಅದ್ಭುತ ಹಾಸ್ಯನಟ. ಅವರ ನಿಧನದಿಂದ ದುಃಖವಾಗಿ ನಾನು ನೋಡಲು ಬಂದೆ. ಗುಬ್ಬಿ ವೀರಣ್ಣ ಅವರ ಕಂಪನಿಯಿಂದ ಬಂದು ಕನ್ನಡ ಚಿತ್ರರಂಗದ ಅನೇಕ ಪ್ರಸಿದ್ಧ ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಎಲ್ಲರ ಜೊತೆಗೂ ನಟನೆ ಮಾಡಿದ್ದಾರೆ. ಅವರು ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ಅವರು ಸಾಯುವಂತಹ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಕನ್ನಡ ಚಿತ್ರರಂಗವಾಗಲೀ ಅಥವಾ ದೊಡ್ಡ ಸ್ಟಾರ್ ನಟರಾಗಲೀ ಅವರಿಗೆ ಬಂದು ಹೇಗಿದ್ದೀರಿ ಎಂದು ವಿಚಾರಿಸುವ ಸೌಜನ್ಯವನ್ನೂ ತೋರಿಸಿಲ್ಲ.

ಉಮೇಶಣ್ಣ ಅವರು ನರಸಿಂಹರಾಜು ಹಾಗೂ ಮುಸುರಿ ಕೃಷ್ಣಮೂರ್ತಿ ಅವರ ಸ್ಥಾನವನ್ನು ತುಂಬುತ್ತಿದ್ದರು. ದ್ವಾರಕೀಶ್ ಅವರೊಂದಿಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾಗ ಅಲ್ಪಸ್ವಲ್ಪ ಹಣ ಬರುತ್ತದೆ ಜೀವನ ನಡೆಯುತ್ತದೆ. ಆದರೆ, ಅವರಿಗೆ ವಯಸ್ಸಾದಾಗ ಪಾತ್ರಗಳನ್ನು ಮಾಡಲು ಅವಕಾಶ ಸಿಗದೇ ತುಂಬಾ ಪರದಾಡಿದ್ದಾರೆ. ಕೊನೆ ಕೊನೆಗೆ ಅವರು ಧಾರಾವಾಹಿಗಳಲ್ಲಿ ಹೋಗಿ ನಟಿಸಿ ಜೀವನ ನಡೆಸಲು ಮುಂದಾಗಿದ್ದರು.

ಉಮೇಶಣ್ಣ ಕಷ್ಟದಲ್ಲಿದ್ದಾಗ ಯಾರೊಬ್ಬರೂ ಬರಲಿಲ್ಲ

ಕನ್ನಡ ಚಲನಚಿತ್ರ ಮಂಡಳಿ ಕೂಡ ಉಮೇಶಣ್ಣ ಅವರನ್ನು ಗುರುತಿಸಲಿಲ್ಲ. ಕೊನೇಗಾಲದಲ್ಲಿ ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಕೂಡ ಯಾರೂ ಗಮನಿಸಲಿಲ್ಲ. ಕೊನೇಗಾಲದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂಬುದನ್ನು ಅವರ ಮನೆಯೊಳಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಇಡೀ ರಾಜ್ಯದ ಜನರನ್ನು ನಗಿಸಿದ ಉಮೇಶಣ್ಣ ಕಷ್ಟದಲ್ಲಿದ್ದಾಗ ಯಾರೊಬ್ಬರೂ ಬಂದು ನೋಡಲಿಲ್ಲ. ನಾನು ಅವರೊಂದಿಗೆ ಮಾತನಾಡಿದಾಗ ಈ ನೋವನ್ನು ಹಂಚಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿ ಅವರೊಂದಿಗೆ ಕುಳಿತು ಊಟಮಾಡಿದ್ದೇ ನಮಗೆ ಪುಣ್ಯ' ಎಂದು ಹೇಳಿದರು.