ಹಿರಿಯ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರ 'ರಾಮ ನವಮಿಯ ರಾತ್ರಿ' ಕವಿತೆಗೆ ಗಾಯಕಿ ಅರ್ಚನಾ ಉಡುಪ ದನಿಯಾಗಿದ್ದಾರೆ. ಅರ್ಚನಾ ಅವರ ಸಂಗೀತ ಸಂಯೋಜನೆ ಹಾಗೂ ಗಾಯನದ ಈ ವಿಡಿಯೋ ರಾಮ ನವಮಿಯ ದಿನವಾದ ಇಂದು (ಏ.10) ಲಹರಿ ಯೂಟ್ಯೂಬ್ನಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅರ್ಚನಾ ಮಾತು.
- ಎಚ್ಚೆಸ್ವಿ ಅವರ ‘ರಾಮ ನವಮಿಯ ರಾತ್ರಿ’ ಕವಿತೆ ನನ್ನ ಮೊಬೈಲ್ಗೆ ಬಂದು ಬಿದ್ದಾಗ ಶಾಸ್ತ್ರೀಯ ಸಂಗೀತದ ಕಾಫಿ ರಾಗ ಅಭ್ಯಾಸ ಮಾಡುತ್ತಿದ್ದೆ. ಎಚ್ಎಸ್ವಿ ಅವರೇ ತಮ್ಮ ಈ ಕವಿತೆಯನ್ನು ನನಗೆ ಕಳಿಸಿದ್ದರು. ಅದಕ್ಕಿಂತ ಮೊದಲಾಗಲೀ, ನಂತರವಾಗಲೀ ಅವರು ತಾವು ಬರೆದ ಕವಿತೆಯನ್ನು ನನಗೆ ಕಳಿಸಿದ್ದಿಲ್ಲ. ಇನ್ನೊಂದು ಅಚ್ಚರಿ ಅಂದರೆ ಎಷ್ಟೋ ಸಲ ನಾವು ತಲೆ ಕೆಳಗೆ ಮಾಡಿ ನಿಂತರೂ ಟ್ಯೂನ್ ಬರಲ್ಲ. ಆದರೆ ಈ ಕವಿತೆ ಓದುತ್ತಿದ್ದ ಹಾಗೆ ಅದಕ್ಕೆ ತಕ್ಕ ಟ್ಯೂನ್ ಮನಸ್ಸಲ್ಲಿ ಬರುತ್ತಾ ಹೋಯ್ತು, ಓದಿ ಮುಗಿದಾಗ ಟ್ಯೂನ್ ಸಿದ್ಧವಿತ್ತು.
- ಅಂದು ಕೂತಿದ್ದ ಅದೇ ಭಂಗಿಯಲ್ಲಿ ತಂಬೂರಿಯ ಜೊತೆಗೆ ಈ ಹಾಡನ್ನು ಹಾಡಿ ಎಚ್ಚೆಸ್ವಿ ಅವರಿಗೆ ಕಳಿಸಿದೆ. ಅವರದನ್ನು ಮೆಚ್ಚಿ ತಮ್ಮ ಕವಿ ಮಿತ್ರರಿಗೂ ಕಳಿಸಿದ್ದರು. ಆದರೆ ಈ ಹಾಡನ್ನು ಇನ್ನಷ್ಟುಜನರಿಗೆ ತಲುಪಿಸಬೇಕು ಅಂತ ಅನಿಸಿ, ಹಾಡಿನ ವೀಡಿಯೋ ಮಾಡಲು ಹೊರಟೆ. ನನ್ನೊಳಗೇ ಈ ಹಾಡು ಈ ಥರ ಬರಬೇಕು ಅನ್ನುವ ಪರಿಕಲ್ಪನೆ ಗಟ್ಟಿಯಾಗಿತ್ತು. ಅದಕ್ಕೆ ತಕ್ಕ ಹಾಗೆ ಆರ್ಟ್ ಮಾಡಿಸಿದೆ. ಸಂಗೀತ ಸಂಯೋಜನೆ ನಾನೇ ಮಾಡಿದರೂ ಬ್ಯಾಗ್ರೌಂಡ್ ಮ್ಯೂಸಿಕ್ ಮಾಡಲು ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಬಳಿ ಕೇಳಿದೆ. ಅವರು ಸೊಗಸಾದ ಹಿನ್ನೆಲೆ ಸಂಗೀತ ನೀಡಿದರು. ಇನ್ಡೋರ್ನಲ್ಲಿ ರಾತ್ರಿ ಹೊತ್ತು ಶೂಟಿಂಗ್ ನಡೆಯಿತು. ಗಿರಿಧರ ದಿವಾನ್ ಅವರು ಅದ್ಭುತವಾಗಿ ಸಿನಿಮಾಟೋಗ್ರಫಿ ಮಾಡಿದರು. ಎಲ್ಲ ಸಿದ್ಧವಾದ ಬಳಿಕ ಎಚ್ಎಸ್ವಿ ಅವರಿಗೆ ಈ ಹಾಡಿನ ವೀಡಿಯೋ ತೋರಿಸಿದೆ. ಮೂರು ಸಲ ಗಮನವಿಟ್ಟು ಕೇಳಿದರು. ‘ಕವಿತೆಯ ಪ್ರತೀ ಪದಕ್ಕೂ, ಭಾವಕ್ಕೂ ನ್ಯಾಯ ಒದಗಿಸಿದ್ದೀಯಮ್ಮಾ..’ ಅಂದರು. ಆಗ ನನ್ನೊಳಗೆ ಧನ್ಯತೆಯ ಭಾವ. ಲಹರಿ ವೇಲು ಅವರೂ ಈ ವೀಡಿಯೋ ಹಾಡು ಮೆಚ್ಚಿ ಹಕ್ಕುಗಳನ್ನು ಪಡೆದಿದ್ದಾರೆ.
Ramnavami 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?
- ಕಥನ ಶೈಲಿಯಲ್ಲಿರುವ ಈ ಹಾಡಿನಲ್ಲಿ ರಾಮನ ಅಂತರಾಳದ ದರ್ಶನವಾಗುತ್ತೆ. ಎಲ್ಲೂ ಕವಿತೆಯ ಆಶಯಕ್ಕೆ ಧಕ್ಕೆ ಬರದ ಹಾಗೆ ಸಂಗೀತ ಸಂಯೋಜಿಸಿದ್ದೇನೆ. ಅಬ್ಬರದ ಸಂಗೀತ ಇದರಲ್ಲಿಲ್ಲ. ಕಾವ್ಯ ಮೆರೆಯಬೇಕು ಅನ್ನುವ ಆಶಯದಲ್ಲಿ ಈ ಹಾಡು ರೂಪುಗೊಂಡಿದೆ. ಕೇಳಿದವರಿಗೆ ನೆಮ್ಮದಿ ಮತ್ತು ಭಕ್ತಿ ಭಾವ ಮೂಡಿಸುವಂತಾದರೆ ಈ ಪ್ರಯತ್ನ ಸಾರ್ಥಕ.

